ಬೆಂಗಳೂರು : ನಿನ್ನೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಒಲಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಜೊತೆಗೆ 7ನೇ ತರಗತಿ ವಿದ್ಯಾರ್ಥಿ ಒಬ್ಬ ಫೋಟೋ ತೆಗೆಸಿಕೊಂಡ ಬಳಿಕ ನಾಪತ್ತೆಯಾಗಿರುವ ಘಟನೆ ನಡೆದಿದೆ.
ನಾಪತ್ತೆಯಾದ ವಿದ್ಯಾರ್ಥಿಯನ್ನು ಗೊರಗುಂಟೆಪಾಳ್ಯ ನಿವಾಸಿ ಡಿಮನ್ ರಾಜ್ ಎಂದು ತಿಳಿದುಬಂದಿದೆ. ಏಳನೇ ತರಗತಿ ಓದುತ್ತಿದ್ದ ಡಿಮನ್ ರಾಜ್ ಎಂದಿನಂತೆ ಬೆಳಗ್ಗೆ ಮನೆಯಿಂದ ಟ್ಯೂಷನ್ಗೆ ಹೋಗಿದ್ದ. ಆದರೆ ಟ್ಯೂಷನ್ಗೆ ಹೋಗದೇ ಕಂಠೀರವ ಸ್ಟೇಡಿಯಂಗೆ ಬಂದಿದ್ದ. ಕಂಠೀರವ ಸ್ಟೇಡಿಯಂನಲ್ಲಿ ಜಾವೆಲಿನ್ ಥ್ರೋ ಪ್ರಾಕ್ಟಿಸ್ ನೋಡಲು ಬಂದಿದ್ದ ಡಿಮನ್ ರಾಜ್ ಸ್ಟೇಡಿಯಂನಲ್ಲಿ ನೀರಜ್ ಚೋಪ್ರಾ ಜೊತೆ ಪೋಟೋ ತೆಗೆಸಿಕೊಂಡಿದ್ದ.
ಬಳಿಕ ಅಲ್ಲಿದ್ದ ವ್ಯಕ್ತಿಯೊಬ್ಬರ ಮೂಲಕ ಪೋಟೋವನ್ನ ತನ್ನ ತಾಯಿಗೆ ಕಳುಹಿಸಿದ್ದ. ಅನಂತರ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾನೆ.ವಿದ್ಯಾರ್ಥಿ ನಾಪತ್ತೆ ಬಗ್ಗೆ ನಂದಿನಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದು, ಪೋಷಕರು ರಾತ್ರಿಯಿಡೀ ಹುಡುಕಾಟ ನಡೆಸಿದ್ದಾರೆ. ಮೆಜೆಸ್ಟಿಕ್, ಮಲ್ಲೇಶ್ವರಂ, ಕಂಠೀರವ ಸ್ಟೇಡಿಯಂ, ಮಾರ್ಕೆಟ್ ಸೇರಿದಂತೆ ಹಲವೆಡೆ ಹುಡುಕಾಟ ನಡೆಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಪೋಷಕರು ಹುಡುಕಾಟ ನಡೆಸುತ್ತಿದ್ದಾರೆ.