ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಮೇ 19ರಂದು (ನಾಳೆ) ತುಮಕೂರಿನಲ್ಲಿ ಬೃಹತ್ ‘ಸಾಧನಾ ಸಮಾವೇಶ’ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಸರ್ಕಾರದಿಂದ ಬರೋಬ್ಬರಿ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಗೃಹಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿವೆ. ಚುನಾವಣಾ ಸಮಯದಲ್ಲಿ ನಾವು ಜನರಿಗೆ ಅನೇಕ ಭರವಸೆಗಳನ್ನು ನೀಡಿದ್ದೆವು. ಈ ಮೂರು ವರ್ಷಗಳ ಅವಧಿಯಲ್ಲಿ ನಾವು ಆ ಭರವಸೆಗಳನ್ನು ಹೇಗೆ ಈಡೇರಿಸಿದ್ದೇವೆ ಎಂಬುದನ್ನು ಈ ಸಮಾವೇಶದ ಮೂಲಕ ಜನರಿಗೆ ತಿಳಿಸಲಿದ್ದೇವೆ” ಎಂದರು.
ಈ ಸಮಾವೇಶವು ಗೃಹಸಚಿವ ಜಿ. ಪರಮೇಶ್ವರ್ ಅವರ ‘ಶಕ್ತಿ ಪ್ರದರ್ಶನ’ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಬೆನ್ನಲ್ಲೇ, ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. “ಇಲ್ಲಿ ಯಾರ ವೈಯಕ್ತಿಕ ಶಕ್ತಿ ಪ್ರದರ್ಶನವೂ ಇಲ್ಲ. ಇದು ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿರುವ ಬಗ್ಗೆ ಮಾಡುತ್ತಿರುವ ಸಮಾವೇಶವಷ್ಟೇ. ವೈಯಕ್ತಿಕವಾಗಿ ನಾನಾಗಲಿ ಅಥವಾ ಬೇರೆಯವರಾಗಲಿ ಇದನ್ನು ಆ ರೀತಿ ನೋಡುವುದಿಲ್ಲ. ನಾವು ‘ನುಡಿದಂತೆ ನಡೆದಿದ್ದೇವೆ’ ಎಂಬುದನ್ನು ಜನರಿಗೆ ತಿಳಿಸುವುದಷ್ಟೇ ನಮ್ಮ ಉದ್ದೇಶ. ಇದೊಂದು ಸರ್ಕಾರದ ಕಾರ್ಯಕ್ರಮವಾಗಿದ್ದು, ಪಕ್ಷದ ಕಾರ್ಯಕ್ರಮ ಅಲ್ಲದ ಕಾರಣ ಹೈಕಮಾಂಡ್ ನಾಯಕರನ್ನು ಆಹ್ವಾನಿಸಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ಸಮಾವೇಶದ ಬಳಿಕ ರಾಜ್ಯ ಸರ್ಕಾರದಲ್ಲಿ ಏನಾದರೂ ಪ್ರಮುಖ ಬದಲಾವಣೆಗಳು ಆಗಲಿವೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಬದಲಾವಣೆ ಎಂಬುದು ಬೇರೆ ವಿಚಾರ. ನಾವಿಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಸಮಾವೇಶ ಮಾಡುತ್ತಿದ್ದೇವೆ. ನಾಯಕತ್ವ ಬದಲಾವಣೆ ಅಥವಾ ಸರ್ಕಾರದ ಆಂತರಿಕ ಬದಲಾವಣೆಗಳೆಲ್ಲವೂ ಪಕ್ಷದ ಹಂತದಲ್ಲಿ ನಿರ್ಧಾರವಾಗುವ ವಿಚಾರಗಳು. ಅದನ್ನು ಈ ಸಾಧನಾ ಸಮಾವೇಶದ ಜೊತೆ ಬೆರೆಸಲು ಹೋಗುವುದಿಲ್ಲ” ಎಂದು ಉತ್ತರಿಸಿದರು.








