ಚಿತ್ರದುರ್ಗ : ಪೋಕ್ಸೋ ಕೇಸ್ ನಲ್ಲಿ ನಿರ್ದೋಷಿ ಎಂದು ಕೋರ್ಟ್ ತೀರ್ಪು ಬಳಿಕ ಮುರುಘಾ ಶ್ರೀಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಇದರ ಬೆನ್ನಲ್ಲೆ, ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಮುರುಘಾಶ್ರೀ ಮಠದ ಆಸ್ತಿಯನ್ನು ಮಾರಾಟ ಮಾಡಿದ್ದಾರೆಂಬ ಗಂಭೀರ ಆರೋಪ ಚಿತ್ರದುರ್ಗದಲ್ಲಿ ಕೇಳಿಬಂದಿದೆ.
ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಇತ್ತೀಚೆಗಷ್ಟೇ ಮೊದಲ ಪೋಕ್ಸೊ ಕೇಸಲ್ಲಿ ಖುಲಾಸೆಯಾಗಿದ್ದು, ಎರಡನೇ ಕೇಸ್ ವಿಚಾರಣೆಯ ಹಂತದಲ್ಲಿದೆ. ಇದರ ಬೆನ್ನಲ್ಲೇ ಮುರುಘಾಶ್ರೀ ಪೋಕ್ಸೊ ಕೇಸಲ್ಲಿ ಆರೋಪಿಯಾಗಿದ್ದಾಗ ಮಠದ ಆಡಳಿತದಲ್ಲಿ ಯಾವ್ದೇ ಹಸ್ತಕ್ಷೇಪ ಮಾಡದಂತೆ ಸುಪ್ರಿಂ ಕೋರ್ಟ್ ಆದೇಶಿಸಿದ್ದರೂ ಸಹ ಕೋರ್ಟ್ ಆದೇಶವನ್ನು ಮೀರಿ 2025ರ ಅ.6ರಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿರುವ ಸುಮಾರು 2 ಕೋಟಿ ಮೌಲ್ಯದ ಒಟ್ಟು ನಾಲ್ಕು ನಿವೇಶನಗಳನ್ನು ಮಂಜುನಾಥ್ ಎಂಬುವರಿಗೆ ಸ್ಪೆಷಲ್ ಜಿಪಿಎ ನೀಡಿ ಮಾರಾಟ ಮಾಡಿದ್ದಾರೆಂಬ ಗಂಭೀರ ಆರೋಪವನ್ನು ಮಠದ ಭಕ್ತರಾದ ಪ್ರಕಾಶ್ ಮಾಡಿದ್ದಾರೆ.
ಮುರುಘಾಶ್ರೀ ಪೋಕ್ಸೊ ಆರೋಪದಲ್ಲಿ ಸಿಲುಕಿದ ಹಿನ್ನಲೆಯಲ್ಲಿ ಸರ್ಕಾರದಿಂದ ಮಠಕ್ಕೆ ಆಡಳಿತ ಸಮಿತಿ ನೇಮಿಸಲಾಗಿದೆ. ಆದರೆ ಆಡಳಿತ ಸಮಿತಿ ಗಮನಕ್ಕೆ ಬಾರದಂತೆ ಮಠದ ಆಸ್ತಿ ಮಾರಾಟ ಮಾಡಿರೋದು ಅಕ್ಷಮ್ಯ ಅಪರಾಧವಾಗಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ದೂರುದಾರರು ಆಡಳಿತ ಸಮಿತಿ ಅಧ್ಯಕ್ಷ ಶಿವಯೋಗಿ ಕಳಸದ್ಗೆ ದೂರು ನೀಡಿ ಆಗ್ರಹಿಸಿದ್ದಾರೆ. ಈ ದೂರು ಬಂದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಕಳಸದ್, ಈ ಸಂಬಂಧ ಕಾನೂನು ತಜ್ಞರಿಂದ ಪರಿಶೀಲಿಸಿ, ಮಠದ ಆಸ್ತಿ ಅಕ್ರಮವಾಗಿ ಮಾರಾಟವಾಗಿದ್ರೆ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.








