ಕಲಬುರ್ಗಿ : ದೇಶ ಹಾಗೂ ರಾಜ್ಯದಲ್ಲಿ ಭಾರಿ ಚರ್ಚಿತವಾಗಿ ಜಿದ್ದಾ ಜಿದ್ದಿಗೆ ಕಾರಣವಾಗಿದ್ದ ಅರ್ಎಸ್ಎಸ್ ಪಥಸಂಚಲನವು ಹೈಕೋರ್ಟ್ ಅನುಮತಿ ಯೊಂದಿಗೆ ನ.16ರಂದು ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಚಿತ್ತಾಪುರದಲ್ಲಿ ನಡೆಯಲಿದೆ. ಇದಕ್ಕಾಗಿ ತಾಲೂಕು ಆಡಳಿತ ಹಾಗೂ 1000 ಪೊಲೀಸರು ಭಾರೀ ಭದ್ರತೆ ಕಲ್ಪಿಸಲಿದ್ದಾರೆ.
ಇದಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ನಗರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಕಣಾವಲು ಆಯೋಜಿಸಲಾಗಿದೆ. ಹೆಚ್ಚು ಕಡಿಮೆ 1 ತಿಂಗಳ ವಾದ ಪ್ರತಿವಾದ, ಚರ್ಚೆ, ಶಾಂತಿ ಸಭೆ ನಡೆದು ಕೊನೆಗೂ ಹೈ ಕೋಲ್ಟ್ ನ.16ರಂದು ಪಥ ಸಂಚಲನಕ್ಕೆ 10 ಷರತ್ತುಗಳೊಂದಿಗೆ ಒಪ್ಪಿಗೆ ಸೂಚಿಸಿತ್ತು. ಅದರಂತೆ 50 ಬ್ಯಾಂಡ್ ಸೆಟ್ನವರು ಸೇರಿ ಸ್ಥಳೀಯ 350 ಗಣ ವೇಷಧಾರಿಗಳು ಪಥ ಸಂಚಲನ ನಡೆಸಲು ಒಪ್ಪಿಗೆ ನೀಡಲಾಗಿದೆ. ಭಾನುವಾರ ಮಧ್ಯಾಹ್ನ 3ರಿಂದ ಸಂಜೆ 5.30ರೊಳಗೆ ಪಥ ಸಂಚಲನ ನಡೆಸಲು ಸೂಚಿಸಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಕಲಬುರಗಿ ಉಪ ಪೊಲಿಸ್ ಅಧೀಕ್ಷಕ ಮೇಹೇಶ ಮೇಘಣ್ಣವರ ಹಾಗೂ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಪಥಸಂಚಲ ನಕ್ಕೆ ಯಾವುದೇ ಅಡೆ ತಡೆ ಸೇರಿದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಯಿಂದ ಪೊಲೀಸ್ ಪಡೆ ಬಂದಿದ್ದು ಒಬ್ಬ ಉಪ ಪೊಲೀಸ್ ಅಧಿಕ್ಷಕ, 5-ಡಿವೈಎಸ್ಪಿ, 18 ಸಿಪಿಐ, 51 ಪಿಎಸ್ಐ, 110 ಎಎಸ್ಐ, 501 ಮುಖ್ಯ ಪೇದೆಗಳು, 686 ಪೊಲೀಸರು ಮತ್ತು 250 ಹೋಮ್ ಗಾರ್ಡ್, 8 ಕೆಎಸ್ಅರ್ಪಿ ತುಕ್ಕಡಿ, ಒಂದು ಬಿಡಿಡಿಎಸ್, ಒಂದು ಎಎಸ್ಸಿ ತಂಡವನ್ನು ನಿಯೋಜಿಸಲಾಗಿದೆ. ಅಲ್ಲದೇ ಪಥಸಂಚಲನ ನಡೆಯುವ ಮಾರ್ಗದುದ್ದಕ್ಕೂ 52 ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ.








