ಧಾರವಾಡ : ವಿಮೆ ತಿರಸ್ಕರಿಸಿದ ಮ್ಯಾಗಮಾ ವಿಮಾ ಕಂಪನಿಗೆ ರೂ. 1 ಲಕ್ಷ 80 ಸಾವಿರಗಳ ದಂಡ ವಿಧಿಸಿ ಮತ್ತು ಪರಿಹಾರ ನೀಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶ ಹೊರಡಿಸಿದೆ.
ಧಾರವಾಡದ ಎಮ್ಮಿಕೇರಿಯ ನಾಗರಾಜ ಗೌರಮ್ಮನವರ ಎಂಬುವವರು ತಮ್ಮ ವಾಹನವನ್ನು ಎದುರುದಾರರ ಬಳಿ ದಿ:18/06/2022ರಿಂದ 17/06/2027ರವರೆಗೆ ವಿಮಾ ಪಾಲಸಿಯನ್ನು ಮಾಡಿಸಿದ್ದರು. ದಿ:24/04/2023ರಂದು ವಾಹನವು ಶಿಗ್ಗಾವದ ಸಮೀಪ ಅಪಘಾತಕ್ಕೀಡಾಗಿತ್ತು. ಅದರ ರಿಪೇರಿಯ ಅಂದಾಜು ಖರ್ಚು ರೂ.1,24,596/- ಆಗಿದ್ದು ಅದನ್ನು ಕೊಡುವಂತೆ ಎದುರುದಾರರಿಗೆ ವಿನಂತಿಸಿದ್ದರು. ದಿ:07/07/2023ರಂದು ಎದುರುದಾರರು ಅದಕ್ಕೆ ಸಂಬಂಧಪಟ್ಟಂತಹ ದಾಖಲೆಗಳನ್ನು ಒದಗಿಸುವಂತೆ ದೂರುದಾರರಿಗೆ ಕೇಳಿದ್ದರು. ಅದೇ ರೀತಿ ದೂರುದಾರರು ದಾಖಲೆಗಳನ್ನು ಒದಗಿಸಿದರೂ ಅವರಿಗೆ ವಿಮಾ ಹಣವನ್ನು ಕೊಡದೇ ಮತ್ತು ಅವರ ಕ್ಲೇಮನ್ನು ನಿರಾಕರಿಸಿದೇ ಸೇವಾ ನ್ಯೂನ್ಯತೆ ಎಸಗಿರುತ್ತಾರೆ. ವಿಮಾ ಕಂಪನಿಯವರು ಈ ನಡಾವಳಿಕೆಯಿಂದ ಬೇಸತ್ತ ದೂರುದಾರರು ಅವರ ಮೇಲೆ ಸೂಕ್ತ ಕ್ರಮ ಕೈಗೊಂಡು ಪರಿಹಾರ ಕೊಡಿಸುವಂತೆ ಧಾರವಾಡದ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:18/07/2024ರಂದು ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಸದಸ್ಯರು, ದೂರುದಾರರ ವಾಹನದ ವಿಮಾ ಪಾಲಸಿ ಅಪಘಾತ ಕಾಲಕ್ಕೆ ಚಾಲ್ತಿಯಿದ್ದು ವಾಹನ ದಿ:24/04/2023ರಂದು ಅಪಘಾತವಾಗಿರುವುದು ದೂರುದಾರರು ದಾಖಲಿಸಿದ ಪೋಲಿಸ್ ವರಧಿ ಮತ್ತು ಇತರ ದಾಖಲೆಗಳ ಮುಖಾಂತರ ಕಂಡುಬಂದಿರುತ್ತದೆ. ಎದುರುದಾರರು ಕೇಳಿದಂತಹ ದಾಖಲೆಗಳನ್ನು ದೂರುದಾರರು ಕೊಟ್ಟಿರುವುದು ಸಹ ಕಂಡುಬಂದಿರುತ್ತದೆ. ಇದಾದ 5-6 ತಿಂಗಳಾದರೂ ಎದುರುದಾರರು ದೂರುದಾರರ ವಾಹನದ ರಿಪೇರಿ ಹಣವನ್ನು ಕೊಡದೇ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ. ದೂರುದಾರರ ವಾಹನದ ರಿಪೇರಿ ಹಣ ರೂ.1,24,000/- ಆದೇಶವಾದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ಕೊಡಬೇಕು ತಪ್ಪಿದ್ದಲ್ಲಿ ರೂ.1,24,000/-ಗಳ ಮೇಲೆ ವಾರ್ಷಿಕ ಶೇ8% ರಂತೆ ಬಡ್ಡಿ ಲೆಕ್ಕ ಹಾಕಿ ದಿ:18/07/2024ರಿಂದ ಹಣ ಸಂದಾಯವಾಗುವವರೆಗೆ ದೂರುದಾರರಿಗೆ ಕೊಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ. ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕಾಗಿ ರೂ.50 ಸಾವಿರ ಪರಿಹಾರ ಮತ್ತು ರೂ.10 ಸಾವಿರ ಪ್ರಕರಣದ ಖರ್ಚು ವೆಚ್ಚವನ್ನು ಕೊಡುವಂತೆ ಎದುರುದಾರ ಮ್ಯಾಗಮಾ ವಿಮಾ ಕಂಪನಿಗೆ ಆಯೋಗ ಆದೇಶಿಸಿದೆ.