ಮುಂಬೈ/ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ, “ಒಂದು ವರ್ಷ ಕಾಲ ಚಿನ್ನ ಖರೀದಿ ಮಾಡಬೇಡಿ” ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯು ದೇಶದ ಆಭರಣ ಉದ್ಯಮದಲ್ಲಿ ಆತಂಕ ಮೂಡಿಸಿದೆ. ಈ ನಿರ್ಧಾರದಿಂದ ಸುಮಾರು ಒಂದು ಕೋಟಿಗೂ ಹೆಚ್ಚು ಜನರ ಉದ್ಯೋಗಕ್ಕೆ ಧಕ್ಕೆಯಾಗಬಹುದು ಎಂದು ಅಖಿಲ ಭಾರತ ರತ್ನ ಮತ್ತು ಆಭರಣ ದೇಶೀಯ ಮಂಡಳಿ (GJC) ಕಳವಳ ವ್ಯಕ್ತಪಡಿಸಿದೆ.
ಜಿಜೆಸಿ ಅಧ್ಯಕ್ಷ ರಾಜೇಶ್ ರೋಕ್ಡೆ ಅವರು ಮಾತನಾಡಿ, ಆಭರಣ ಉದ್ಯಮವು ಭಾರತದ ಜಿಡಿಪಿಗೆ (GDP) ಶೇಕಡಾ 7 ರಷ್ಟು ಕೊಡುಗೆ ನೀಡುತ್ತಿದೆ. ಶೋರೂಮ್ಗಳು, ಕಲಾವಿದರು ಮತ್ತು ಕಾರ್ಮಿಕರು ಸೇರಿ ನೇರವಾಗಿ 1 ಕೋಟಿಗೂ ಹೆಚ್ಚು ಜನರು ಈ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ.
ವಿಮೆ, ಬ್ಯಾಂಕಿಂಗ್, ಪೀಠೋಪಕರಣ, ಪ್ಯಾಕೇಜಿಂಗ್ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಹಲವು ಉಪ-ವಲಯಗಳು ಆಭರಣ ಉದ್ದಿಮೆಯನ್ನೇ ನಂಬಿಕೊಂಡಿವೆ.ಆಭರಣ ಖರೀದಿಗೆ ಯಾವುದೇ ರೀತಿಯ ನಿರ್ಬಂಧ ಹೇರಿದರೆ ಅದು ದೊಡ್ಡ ಮಟ್ಟದ ನಿರುದ್ಯೋಗಕ್ಕೆ ದಾರಿ ಮಾಡಿಕೊಡಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಚಿನ್ನದ ನಗದೀಕರಣಕ್ಕೆ (Monetization) ಸಲಹೆ
ಪ್ರಧಾನಿಯವರ ದೇಶಪ್ರೇಮ ಮತ್ತು ‘ವಿಕಸಿತ ಭಾರತ’ದ ಕನಸನ್ನು ಬೆಂಬಲಿಸಿದ ರೋಕ್ಡೆ, ಹೂಡಿಕೆಯ ಉದ್ದೇಶಕ್ಕಾಗಿ ಬಂಗಾರ ಅಥವಾ ನಾಣ್ಯಗಳನ್ನು ಖರೀದಿಸುವುದನ್ನು ನಿಲ್ಲಿಸುವುದು ಸರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಆಭರಣಗಳ ಖರೀದಿಗೆ ಧಕ್ಕೆ ತರಬಾರದು ಎಂದಿದ್ದಾರೆ.
“ಭಾರತೀಯರ ಬಳಿ ಸುಮಾರು 40,000 ದಿಂದ 50,000 ಟನ್ ಚಿನ್ನವಿದೆ. ಇದರಲ್ಲಿ ಕೇವಲ ಶೇ. 10 ರಿಂದ 20 ರಷ್ಟು ಚಿನ್ನವನ್ನು ‘ಚಿನ್ನದ ನಗದೀಕರಣ ಯೋಜನೆ’ಯ (Gold Monetisation Scheme) ಅಡಿ ಮಾರುಕಟ್ಟೆಗೆ ತಂದರೆ, ಮುಂದಿನ 10 ವರ್ಷಗಳ ಕಾಲ ಭಾರತಕ್ಕೆ ಚಿನ್ನ ಆಮದು ಮಾಡಿಕೊಳ್ಳುವ ಅಗತ್ಯವೇ ಇರುವುದಿಲ್ಲ. ಈ ಬಗ್ಗೆ ನಾವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ,” ಎಂದು ಅವರು ತಿಳಿಸಿದರು.








