ನವದೆಹಲಿ : ರಾಷ್ಟ್ರೀಯ ಗೀತೆ ವಂದೇ ಮಾತರಂನ ಮುಖ್ಯ ಚರಣಗಳನ್ನು ಕತ್ತರಿಸುವ ಮೂಲಕ ಕಾಂಗ್ರೆಸ್ ಪಕ್ಷ ಅಪಮಾನ ಮಾಡಿದೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಆರೆಸ್ಸೆಸ್ಗೆ ‘ನಮಸ್ತೆ ಸದಾ ವತ್ಸಲೇ’ ಮಾತ್ರ ಮುಖ್ಯ ಎಂದು ಹೇಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ವಂದೇ ಮಾತರಂ ಅನ್ನು ಬಹುವಾಗಿ ಮೆಚ್ಚುತ್ತಿದ್ದ ರವೀಂದ್ರನಾಥ ಟ್ಯಾಗೋರ್ಅವರೇ ಆ ಗೀತೆಯ ಮೊದಲ 2 ಚರಣ ಸ್ವೀಕರಿಸಿ. ಉಳಿದವನ್ನು ಕೈಬಿಡಿ ಎಂದು ಸೂಚಿಸಿದ್ದರು. ಆ ಪ್ರಕಾರ 1937ರಲ್ಲಿ ಅವನ್ನು ಕೈಬಿಡಲಾಗಿತ್ತು. ಇದನ್ನೇ ವಿಭಜಕ ಸಿದ್ಧಾಂತ ಎಂದರೆ ಹೇಗೆ? ಇದು ನಾಚಿಕೆಗೇಡಿತನ. ಮೋದಿ ಈ ಆರೋಪದ ಬಗ್ಗೆ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಇಂದು ರಾಷ್ಟ್ರೀಯತೆಯ ಸ್ವಯಂಘೋಷಿತ ರಕ್ಷಕರೆಂದು ಹೇಳಿಕೊಳ್ಳುವ ಆರ್ಎಸ್ಎಸ್ ಮತ್ತು ಬಿಜೆಪಿ ತಮ್ಮ ಶಾಖೆಗಳಲ್ಲಿ ಅಥವಾ ಕಚೇರಿಗಳಲ್ಲಿ ವಂದೇ ಮಾತರಂ ಅಥವಾ ನಮ್ಮ ರಾಷ್ಟ್ರಗೀತೆ ಜನ ಗಣ ಮನವನ್ನು ಎಂದಿಗೂ ಹಾಡಿಲ್ಲ. ಬದಲಾಗಿ, ‘ನಮಸ್ತೆ ಸದಾ ವತ್ಸಲೇ’ ಹಾಡುವುದನ್ನು ಮುಂದುವರೆಸಿದ್ದಾರೆ. ಇದು ರಾಷ್ಟ್ರವನ್ನಲ್ಲ, ಅವರ ಸಂಘಟನೆಯನ್ನು ವೈಭವೀಕರಿಸುತ್ತದೆ.
1925ರಲ್ಲಿ ಆರ್ಎಸ್ಎಸ್ ಸ್ಥಾಪನೆಯಾದಾಗಿನಿಂದ, ವಂದೇ ಮಾತರಂ ಅನ್ನು ಹಾಡಿಲ್ಲ. ಅದರ ಪಠ್ಯಗಳು ಅಥವಾ ಸಾಹಿತ್ಯದಲ್ಲಿ ಒಮ್ಮೆಯೂ ಈ ಹಾಡಿನ ಉಲ್ಲೇಖವಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಆರ್ಎಸ್ಎಸ್ ಬ್ರಿಟಿಷರನ್ನು ಬೆಂಬಲಿಸಿತು, 52 ವರ್ಷಗಳ ಕಾಲ ತನ್ನ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಿಲ್ಲ’ ಎಂದು ಕಿಡಿ ಕಾರಿದ್ದಾರೆ.








