ಬೆಂಗಳೂರು : ರಾಜ್ಯದಲ್ಲಿ ಬರುವ ನವೆಂಬರ್ ಡಿಸೆಂಬರ್ ನಲ್ಲಿ ಸಿಎಂ ಹಾಗೂ ಕೆಪಿಸಿಸಿ ಸ್ಥಾನ ಬದಲಾವಣೆ ಆಗಲಿದೆ ಎಂದು ಕೆಲ ಕಾಂಗ್ರೆಸ್ ನಾಯಕರೇ ಹೇಳಿಕೆ ನೀಡುತ್ತಿದ್ದಾರೆ. ಇದೀಗ ಡಿಕೆ ಶಿವಕುಮಾರ್ ಒಂದು ಬಾರಿ ಸಿಎಂ ಆಗಲಿ ಅನ್ನೋದು ನನ್ನ ಅಭಿಪ್ರಾಯ ಎಂದು ಮತ್ತಿಕೆರೆ ಗ್ರಾಮದಲ್ಲಿ ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ ಹೇಳಿಕೆ ನೀಡಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಮತ್ತಿಕೆರೆ ಗ್ರಾಮದಲ್ಲಿ ಮಾತನಾಡಿದ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಕಷ್ಟು ಶ್ರಮ ವಹಿಸಿದ್ದಾರೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು ಎಂದು ಹೈಕಮಾಂಡ್ ಅವರಿಗೆ ಮನವಿ ಮಾಡುತ್ತೇನೆ ಡಿಕೆ ಶಿವಕುಮಾರ್ ಅವರಿಗೂ ಒಂದು ಬಾರಿ ಅಧಿಕಾರ ನೀಡಬೇಕೆಂಬುದು ನನ್ನ ಅಭಿಪ್ರಾಯವಾಗಿದೆ.
ಇನ್ನು ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತದೆ ಎಂದು ಕೆಲ ನಾಯಕರು ಹೇಳಿಕೆ ನೀಡಿರುವ ವಿಚಾರವಾಗಿ, ಈಗ ಮಾತನಾಡುತ್ತಿರುವ ಕೆಲ ಮಂತ್ರಿಗಳು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಇದು ಚುನಾವಣೆಯಲ್ಲಿ ಸ್ಪರ್ಧಿಸುವವರ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕೆ ಹಿರಿಯ ಸಚಿವರಲ್ಲಿ ನಾನು ಮನವಿ ಮಾಡುತ್ತೇನೆ. ನೀವೇನೆ ಮಾಡದಿದ್ದರೂ ಚಿಂತೆ ಇಲ್ಲ ಆದರೆ ಮಾತನಾಡಬೇಡಿ ಇದೇ ನೀವು ಕಾಂಗ್ರೆಸ್ ಪಕ್ಷಕ್ಕೆ ಕೊಡುವ ದೊಡ್ಡ ಗೌರವ ಎಂದು ಹೇಳಿಕೆ ನೀಡಿದರು.