ಮೈಸೂರು : ಪಾಕಿಸ್ತಾನದ ಜೊತೆ ಯುದ್ಧ ಮಾಡಬೇಕಾದ ಅಗತ್ಯ ಇಲ್ಲ. ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸುವ ಕೆಲಸ ಮಾಡಬೇಕು. ನಾವು ಯುದ್ಧದ ಪರ ಇಲ್ಲ, ಶಾಂತಿ ಇರಬೇಕು, ಜನರಿಗೆ ಭದ್ರತೆ ಇರಬೇಕು. ಕೇಂದ್ರ ಸರ್ಕಾರ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಕಾಶ್ಮೀರದ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ. ಭದ್ರತೆ ಇದೆ ಎಂದು ನಂಬಿಕೊಂಡು ಜನ ಕಾಶ್ಮೀರಕ್ಕೆ ಹೋದರು. ಆದರೆ ಅಲ್ಲಿ ಭದ್ರತೆ ವೈಫಲ್ಯ ಉಂಟಾಗಿದೆ. ಹಾಗಾದರೆ ಇವರು ಮಾಡಿದ್ದು ಬರೀ ಭಾಷಣನಾ? ಈಗ ಏನೇ ಕ್ರಮ ಕೈಗೊಂಡರು? ಹೋದ 26 ಜೀವ ವಾಪಸ್ ತರಲು ಸಾಧ್ಯನಾ. ಪುಲ್ವಾಮ ಘಟನೆ ವಿಚಾರದಲ್ಲಿ ಮುಂದೆ ಏನಾಯಿತು? ಯಾರಿಗೆ ಗೊತ್ತಿದೆ ಹೇಳಿ. ಈಗ ಕೇಂದ್ರ ಸರ್ಕಾರ ಭದ್ರತಾ ವೈಫಲ್ಯವನ್ನು ಒಪ್ಪಿಕೊಂಡಿದೆ. ನಾನು ಮೊದಲೇ ಹೇಳಿದ್ದೆ ನನ್ನ ಮಾತು ನಿಜವಾಗಿದೆ ಎಂದರು.
ರಾಜ್ಯದಲ್ಲಿರುವ ಪಾಕಿಸ್ತಾನ ಪ್ರಜೆಗಳನ್ನ ವಾಪಸ್ ಕಳುಹಿಸುವ ವಿಚಾರವಾಗಿ ಪ್ರತಿಕ್ರಿಯಿಸಿ, ಕೇಂದ್ರದ ಸೂಚನೆಗೆ ನಾವು ಸಹಕಾರ ಕೊಡುತ್ತೇವೆ. ರಾಜ್ಯದಲ್ಲಿ ಎಷ್ಟು ಜನ ಪಾಕಿಸ್ತಾನ ಪ್ರಜೆಗಳು ಇದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಕೇಂದ್ರದ ಸೂಚನೆಯನ್ನ ನಾವು ಪಾಲಿಸುತ್ತೇವೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಜನರು ಇರುವ ಸಾಧ್ಯತೆ ಇದೆ. ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.