ನವದೆಹಲಿ: ಹಿಂದೂ ಧರ್ಮದಲ್ಲಿ ನಂಬಿಕೆಯನ್ನು ಸಾಬೀತುಪಡಿಸಲು ದೇವಸ್ಥಾನಕ್ಕೆ ಹೋಗುವುದು ಅಥವಾ ನಿರ್ದಿಷ್ಟ ಧಾರ್ಮಿಕ ವಿಧಿವಿಧಾನಗಳನ್ನು ಮಾಡುವುದು ಅನಿವಾರ್ಯವಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ಟೀಕೆ ಮಾಡಿದೆ. “ಮನೆಯೊಳಗೆ ಒಂದು ದೀಪ ಹಚ್ಚುವುದು ಕೂಡ ಒಬ್ಬರ ನಂಬಿಕೆಯನ್ನು ಸಾಬೀತುಪಡಿಸಲು ಸಾಕು” ಎಂದು ನ್ಯಾಯಾಲಯ ಹೇಳಿದೆ.
ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ತಾರತಮ್ಯಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಈ ಅವಲೋಕನ ಮಾಡಿದೆ.
ಹಿಂದೂ ಧರ್ಮವು ಕೇವಲ ಒಂದು ಧರ್ಮವಲ್ಲ, ಅದು ‘ಜೀವನ ನಡೆಸುವ ಒಂದು ವಿಧಾನ’ (Way of Life) ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಒತ್ತಿ ಹೇಳಿದರು.ಒಬ್ಬ ವ್ಯಕ್ತಿ ಹಿಂದೂ ಎಂದು ಕರೆಸಿಕೊಳ್ಳಲು ಯಾವುದೇ ದೇವಸ್ಥಾನಕ್ಕೆ ಭೇಟಿ ನೀಡಲೇಬೇಕು ಅಥವಾ ಸಂಕೀರ್ಣ ಆಚರಣೆಗಳನ್ನು ಮಾಡಲೇಬೇಕು ಎಂಬ ನಿಯಮವಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, ಒಬ್ಬ ವ್ಯಕ್ತಿಯು ತನ್ನ ಗುಡಿಸಲಿನೊಳಗೆ ಒಂದು ದೀಪವನ್ನು ಹಚ್ಚಿದರೂ, ಅದು ಅವನ ಧರ್ಮ ಮತ್ತು ನಂಬಿಕೆಯನ್ನು ವ್ಯಕ್ತಪಡಿಸಲು ಸಾಕಾಗುತ್ತದೆ,” ಎಂದರು.
ಕೇರಳದ ಶಬರಿಮಲೆ ದೇವಸ್ಥಾನ ಮತ್ತು ದಾವೂದಿ ಬೋಹ್ರಾ ಸಮುದಾಯ ಸೇರಿದಂತೆ ವಿವಿಧ ಧರ್ಮಗಳಲ್ಲಿನ ಧಾರ್ಮಿಕ ಸ್ವಾತಂತ್ರ್ಯ ಮತ್ತು ತಾರತಮ್ಯದ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ಮೇಲೆ ಈ ಸುದೀರ್ಘ ವಿಚಾರಣೆ ನಡೆಯುತ್ತಿದೆ.ವಕೀಲರಾದ ಡಾ. ಜಿ. ಮೋಹನ್ ಗೋಪಾಲ್ ಅವರು ವಾದ ಮಂಡಿಸುತ್ತಾ, “ಹಿಂದೂ ಧರ್ಮವನ್ನು ಕೇವಲ ವೇದಗಳ ಸರ್ವೋಚ್ಚ ಅಧಿಕಾರವನ್ನು ಒಪ್ಪಿಕೊಳ್ಳುವ ವರ್ಗವಾಗಿ ಸೀಮಿತಗೊಳಿಸುವುದು ಸರಿಯಲ್ಲ. ಇಂದು ಹಿಂದೂಗಳೆಂದು ಗುರುತಿಸಿಕೊಳ್ಳುವ ಎಲ್ಲರೂ ಎಲ್ಲ ಆಧ್ಯಾತ್ಮಿಕ ವಿಷಯಗಳಲ್ಲಿ ವೇದಗಳನ್ನೇ ಅಂತಿಮ ಎಂದು ಭಾವಿಸದಿರಬಹುದು ಎಂದು ಹೇಳಿದ್ದರು. ಇದಕ್ಕೆ ಪೂರಕವಾಗಿ ನ್ಯಾಯಾಲಯವು ಧರ್ಮದ ವ್ಯಾಖ್ಯಾನವನ್ನು ವಿಸ್ತರಿಸಿದೆ.
ಈ ಒಂಬತ್ತು ನ್ಯಾಯಮೂರ್ತಿಗಳ ಪೀಠದಲ್ಲಿ ಜಸ್ಟಿಸ್ ಬಿ.ವಿ. ನಾಗರತ್ನ, ಎಂ.ಎಂ. ಸುಂದರೇಶ್, ಅಹ್ಸಾನುದ್ದೀನ್ ಅಮಾನುಲ್ಲಾ, ಅರವಿಂದ್ ಕುಮಾರ್, ಆಗಸ್ಟೀನ್ ಜಾರ್ಜ್ ಮಸಿಹ್, ಪ್ರಸನ್ನ ಬಿ. ವರಾಳೆ, ಆರ್. ಮಹದೇವನ್ ಮತ್ತು ಜಾಯ್ಮಾಲ್ಯ ಬಾಗ್ಚಿ ಅವರು ಇದ್ದಾರೆ.








