ಬೆಂಗಳೂರು : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ವಿಧಾನ ಪರಿಷತ್ತಿಗೆ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳಿಂದ ನಡೆಯುವ ದ್ವೈವಾರ್ಷಿಕ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ, ಜೂನ್, 03 ರ ಇಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ.
ಭಾರತ ಚುನಾವಣಾ ಆಯೋಗದ ಆದೇಶದಂತೆ ಜೂನ್, 03 ರ ಇಂದು ಮತದಾನ ಮಾಡುವ ಸಮಯದಲ್ಲಿ ಮತದಾರರನ್ನು ಗುರುತಿಸಲು ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿ(ಎಪಿಕ್) ಯನ್ನು ಮುಖ್ಯ ದಾಖಲಾತಿಯಾಗಿ ಹಾಜರುಪಡಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿದ್ದವರು ಎಪಿಕ್ ಹೊಂದಿಲ್ಲದಿದ್ದಲ್ಲಿ ಅಂತಹವರು ಭಾರತ ಚುನಾವಣಾ ಆಯೋಗವು ನಿರ್ಧರಿಸಿರುವ ಪೂರಕ ದಾಖಲಾತಿಗಳಾದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಇಂಡಿಯನ್ ಪಾಸ್ಪೋರ್ಟ್, ಸರ್ವೀಸ್ ಗುರುತಿನ ಚೀಟಿ(ನೌಕರರು ಕೇಂದ್ರ/ ರಾಜ್ಯ ಸರ್ಕಾರ ಪಬ್ಲಿಕ್ ಸೆಕ್ಟರ್, ಲೋಕಲ್ ಬಾಡಿಸ್ ಇತರ ಪ್ರೈವೆಟ್ ಇಂಡಸ್ಟ್ರೀಯಲ್ ಹೌಸಸ್). ಅಪಿಷಿಯಲ್ ಗುರುತಿನ ಚೀಟಿ (ಎಂ.ಪಿ, ಎಂ.ಎಲ್ಎ, ಎಂಎಲ್ಸಿ), ಶಿಕ್ಷಣ ಸಂಸ್ಥೆಯಿಂದ ನೀಡಿರುವ ಸರ್ವಿಸ್ ಗುರುತಿನ ಚೀಟಿ, ವಿಶ್ವವಿದ್ಯಾನಿಲಯದಿಂದ ನೀಡಿರುವ ಪ್ರಮಾಣ ಪತ್ರ, ವಿಶೇಷಚೇತನ ಗುರುತಿನ ಚೀಟಿ, ಯುನಿಕ್ ಡಿಸಾಬಿಲಿಟಿ ಗುರುತಿನ ಚೀಟಿ(ಯುಡಿಐಡಿ) ಈ ಪೈಕಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶವಿರುತ್ತದೆ.
ಮತದಾನಕ್ಕೆ ಈ ದಾಖಲೆಗಳು ಕಡ್ಡಾಯ
1. ಆಧಾರ್ ಕಾರ್ಡ್
2. ಚಾಲನಾ ಪರವಾನಗಿ (ಡೈವಿಂಗ್ ಲೈಸೆನ್ಸ್)
3. ಪಾನ್ ಕಾರ್ಡ್
4. ಭಾರತೀಯ ಪಾಸ್ಪೋರ್ಟ್
5. ಕೇಂದ್ರ/ ರಾಜ್ಯ ಸರ್ಕಾರ/ ಸಾರ್ವಜನಿಕ ವಲಯದ ಉದ್ದಿಮೆ/ ಸಾರ್ವಜನಿಕ ಸೀಮಿತ ಕಂಪನಿಗಳ ನೌಕರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ
6. ಎಂಪಿ/ಎಂಎಲ್ಎ/ ಎಂಎಲ್ಸಿ ಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ
7. ಮತದಾರರು ಪ್ರಸ್ತುತ ಕೆಲಸ ಮಾಡುತ್ತಿರುವ ಶಿಕ್ಷಕರ/ಪದವೀಧರರ ಕ್ಷೇತ್ರದಲ್ಲಿರುವ ಶೈಕ್ಷಣಿಕ ಸಂಸ್ಥೆಗಳು ನೀಡಿರುವ ಸೇವಾ ಗುರುತಿನ ಚೀಟಿ
8. ಕೇಂದ್ರ/ ರಾಜ್ಯ ಸರ್ಕಾರದಿಂದ ಮಾನ್ಯತೆ/ ಅಂಗೀಕೃತವಾಗಿರುವ ವಿಶ್ವವಿದ್ಯಾನಿಲಯ ಅಥವಾ ಸಂಬಂಧಪಟ್ಟ ಸಂಸ್ಥೆಯಿಂದ ನೀಡಲಾದ ಪದವಿ/ಡಿಪ್ಲೊಮಾ ಅಥವಾ ಪ್ರಮಾಣ ಪತ್ರ ಕೋರ್ಸ್ಗಳ ಮೂಲ ಪ್ರತಿ
9. ದೈಹಿಕ ಅಂಗವೈಕಲ್ಯತೆಯನ್ನು (ವಿಶೇಷ ಚೇತನ) ಹೊಂದಿರುವ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಪ್ರಮಾಣ ಪತ್ರದ ಮೂಲ ಪ್ರತಿ
10. ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ವತಿಯಿಂದ ನೀಡಿರುವ ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (UDID Card).