ಬೆಂಗಳೂರು: ಕಂದಾಯ ಇಲಾಖೆಯ ಸೇವೆಗಳಲ್ಲಿ ಮತ್ತಷ್ಟು ಪಾರದರ್ಶಕತೆ ಮತ್ತು ನಿಖರತೆಯನ್ನು ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಇಲಾಖೆಯ ಒಟ್ಟು 43 ಸೇವೆಗಳಿಗೆ ಇ-ಕೆವೈಸಿ (e-KYC) ಹಾಗೂ ಫೇಸ್ ರೆಕಗ್ನಿಷನ್ (ಮುಖ ಗುರುತಿಸುವಿಕೆ) ತಂತ್ರಜ್ಞಾನವನ್ನು ಕಡ್ಡಾಯಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯನ್ನು ಡಿಜಿಟಲೀಕರಣದತ್ತ ಕೊಂಡೊಯ್ಯುವ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದರು.
ಬಜೆಟ್ ನಲ್ಲಿ ಕಂದಾಯ ಇಲಾಖೆಯ ಪ್ರಮುಖ ಘೋಷಣೆಗಳು:
₹50 ಕೋಟಿ ವೆಚ್ಚದಲ್ಲಿ ‘ಭೂಮಿ-8.0’ ಅಭಿವೃದ್ಧಿ: ಪ್ರಸ್ತುತ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ‘ಭೂಮಿ’ ತಂತ್ರಾಂಶವನ್ನು ಸಮಗ್ರವಾಗಿ ಆಧುನೀಕರಿಸಲಾಗುವುದು. 10ಕ್ಕೂ ಹೆಚ್ಚು ಇಲಾಖೆಗಳೊಂದಿಗೆ ಸಂಪರ್ಕ ಹೊಂದುವ ಸುಧಾರಿತ ‘ಭೂಮಿ-8.0’ ಸಾಫ್ಟ್ವೇರ್ ಅನ್ನು ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
ದತ್ತಾಂಶಗಳ ಸಂಯೋಜನೆ: ‘ಕುಟುಂಬ’, ‘ಫ್ರೂಟ್ಸ್’ ಮತ್ತು ‘ಭೂಮಿ’ ತಂತ್ರಾಂಶಗಳ ದತ್ತಾಂಶಗಳನ್ನು ಒಗ್ಗೂಡಿಸಿ, ಉತ್ತಮ ನಿರ್ಣಯ ಕೈಗೊಳ್ಳಲು ನೆರವಾಗುವ ವ್ಯವಸ್ಥೆಯನ್ನು (Decision Support System) ಜಾರಿಗೆ ತರಲಾಗುವುದು.
ಕರ್ನಾಟಕ ಲ್ಯಾಂಡ್ ಸ್ಟಾಕ್ ಯೋಜನೆ: ಈ ಹೊಸ ಯೋಜನೆಯಡಿ ಕಂದಾಯ ಇಲಾಖೆಯ ವಿವಿಧ ಸೇವೆಗಳಾದ ಭೂಮಿ, ಕಾವೇರಿ, ಮೋಜಿಣಿ, ಇ-ಸ್ವತ್ತು ಮತ್ತು ಇ-ಆಸ್ತಿಯಲ್ಲಿರುವ ಜಮೀನು ಹಾಗೂ ಆಸ್ತಿಯ ದತ್ತಾಂಶಗಳನ್ನು ಜಿಐಎಸ್ (GIS) ಆಧಾರಿತ ಡಿಜಿಟಲ್ ವೇದಿಕೆಯಡಿ ತರಲಾಗುವುದು. ಇದರಿಂದ ಆಸ್ತಿ ದಾಖಲೆಗಳ ಸಮಗ್ರ ಕ್ರೋಢೀಕರಣ ಮತ್ತು ಏಕರೂಪದ ನಿರ್ವಹಣೆ ಸಾಧ್ಯವಾಗಲಿದೆ.
ಕಂದಾಯ ನ್ಯಾಯಾಲಯಗಳ ಕಲಾಪ ನೇರಪ್ರಸಾರ: ಭೂ ವ್ಯಾಜ್ಯಗಳ ಇತ್ಯರ್ಥದಲ್ಲಿ ಸಾರ್ವಜನಿಕರಿಗೆ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಾತ್ರಿಪಡಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ‘ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ’ ಹಾಗೂ ‘ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ’ಗಳ ಕಲಾಪಗಳನ್ನು ಸಿಸಿಎಂಎಸ್ (CCMS) ಮತ್ತು ಆರ್ಸಿಸಿಎಂಎಸ್ (RCCMS) ತಂತ್ರಾಂಶಗಳೊಂದಿಗೆ ಸಂಯೋಜಿಸಲಾಗುತ್ತದೆ.
ವಿಡಿಯೋ ಕಾನ್ಫರೆನ್ಸ್ ಸೌಲಭ್ಯ: ಭವಿಷ್ಯದಲ್ಲಿ ರಾಜ್ಯದ ಎಲ್ಲ ಕಂದಾಯ ನ್ಯಾಯಾಲಯಗಳ ಕಲಾಪಗಳನ್ನು ನೇರ ಪ್ರಸಾರ (Live Stream) ಮಾಡಲು ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ವ್ಯವಸ್ಥೆ ಕಲ್ಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.








