ಕಲಬುರಗಿ : ರಾಜ್ಯದಲ್ಲಿ ಇತ್ತೀಚಿಗೆ ದಲಿತ ಸಿಎಂ ಕೂಗು ಕೇಳಿ ಬಂದಿತ್ತು. ಅಲ್ಲದೆ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಆಗುತ್ತದೆ ಎಂಬ ಊಹಾಪೋಹ ಹರಿದಾಡಿತ್ತು. ಇದೀಗ ದಲಿತ ಸಿಎಂ ವಿಚಾರವಾಗಿ ಕಲ್ಬುರ್ಗಿಯಲ್ಲಿ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು ಕಳೆದ ಒಂದು ವರ್ಷದಿಂದ ದಲಿತ ಸಿಎಂ ಕೂಗು ನಿಂತಿದೆ ಎಂದು ತಿಳಿಸಿದ್ದಾರೆ.
ಕಲ್ಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಕೂಗು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಕಳೆದು ಒಂದು ವರ್ಷದಿಂದ ದಲಿತ ಸಿಎಂ ಕೂಗು ನಿಂತಿದೆ. ಮುಂದಿನ ವಿಧಾನಸಭ ಚುನಾವಣೆ ಆದಮೇಲೆ ಆ ಕುರಿತು ನೋಡೋಣ. 2028 ರ ಚುನಾವಣೆಯಲ್ಲಿ ಆ ಬಗ್ಗೆ ಗಂಭೀರವಾದ ಚರ್ಚೆ ಮಾಡೋಣ ಎಂದು ಸಚಿವ ಸತೀಶ್ ಜಾರಕಿಹೊಳಿ, ಹೇಳಿಕೆ ನೀಡಿದರು.
ನಮ್ಮ ತೆರಿಗೆ ಹಣದಿಂದ ಉತ್ತರಪ್ರದೇಶ ಬಿಹಾರ್ ರಾಜ್ಯಗಳಲ್ಲಿ ರಸ್ತೆಗಳು ಆಗುತ್ತಿವೆ. ಕೇಂದ್ರ ಸರ್ಕಾರಕ್ಕೆ ನಾವು 2 ಲಕ್ಷ ಕೋಟಿ ಜಿಎಸ್ಟಿ ಹಣ ಕೊಡುತ್ತೇವೆ ಅದರ ಅರ್ಧ ಹಣವಾದರೂ ಕೇಂದ್ರ ಸರ್ಕಾರ ನಮಗೆ ಕೊಡಬೇಕು. ಕೇವಲ 36,000 ಕೋಟಿ ಜಿಎಸ್ಟಿ ಹಣ ಮಾತ್ರ ನಮಗೆ ಕೊಟ್ಟಿದ್ದಾರೆ. ಯಮುನಾ ಮತ್ತು ಗಂಗಾ ಎಕ್ಸ್ಪ್ರೆಸ್ ಹೈವೇಗೆ ನಮ್ಮ ಹಣ ಬಳಸುತ್ತಿದ್ದಾರೆ.
ಇನ್ನು ನವೆಂಬರ್ ನಲ್ಲಿ ಸಿಎಂ ಬದಲಾವಣೆ ಆಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಹೇಳಿಕೆಗೆ, ವಿಶ್ವನಾಥ್ ಅವರು ನಮ್ಮ ಪಕ್ಷದವರಲ್ಲ. ಅವರ ಹೇಳಿಕೆಗೂ ನಮಗೂ ಯಾವುದೇ ರೀತಿಯಾದ ಸಂಬಂಧವಿಲ್ಲ. ನಮ್ಮ ಪಕ್ಷದವರು ಹೇಳಿದ್ದರೆ ಮಾತ್ರ ಅದಕ್ಕೆ ಪ್ರತಿಕ್ರಿಯೆ ಕೊಡಬಹುದು. ಎರಡು ವರ್ಷದಿಂದ ಅಭಿವೃದ್ಧಿ ಆಗಿಲ್ಲ ಅಂತ ಬಿಜೆಪಿಯವರು ಹೇಳುತ್ತಿದ್ದಾರೆ ಇನ್ನು ಮೂರು ವರ್ಷ ಗ್ಯಾರಂಟಿಯಿಂದ ಅಭಿವೃದ್ಧಿ ಆಗಲ್ಲ ಅಂತಾರೆ. ಆದರೆ ಗ್ಯಾರಂಟಿಯಿಂದ ಬೇರೆ ಯಾವುದೇ ಅಭಿವೃದ್ಧಿ ಕೆಲಸ ನಿಂತಿಲ್ಲ. ಬೊಮ್ಮಾಯಿ ಅವಧಿಯಲ್ಲಿ ಇಲಾಖೆಗಳಿಗ ನೀಡಿದ ಅನುದಾನ ಹಾಗೂ ನಮ್ಮ ಸರ್ಕಾರದಲ್ಲಿ ಇಲಾಖೆಗಳಿಗೆ ನೀಡಿದ ಅನುದಾನ ಗಮನ ಹರಿಸಲಿ ಎಂದು ತಿಳಿಸಿದರು.