ಮಂಗಳೂರು : ಪ್ರೇಮ ವೈಫಲ್ಯದಿಂದ ಮನನೊಂದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಕಲ್ಲೆಸೆದ 19 ವರ್ಷದ ಯುವಕನನ್ನು ಆಲುವಾ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ತನ್ನ ಪ್ರೇಯಸಿ ಬಿಟ್ಟು ಹೋದ ಕೋಪದಲ್ಲಿ, ಆಕೆಯ ಮನೆಯ ಸಮೀಪ ಹಾದುಹೋಗುವ ರೈಲನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ಅಂಕಮಾಲಿ ಪಾರಕ್ಕಡವು ನಿವಾಸಿ ಸುಜಿತ್ ಸುರೇಶ್ ಬಂಧಿತ ಆರೋಪಿ. ರೈಲಿನ ಹೊರಭಾಗದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಗಳನ್ನು ಆಧರಿಸಿ ಪೊಲೀಸರು ಈತನನ್ನು ಪತ್ತೆಹಚ್ಚಿದ್ದಾರೆ. ಈ ತಿಂಗಳ 7ರಂದು ಬೆಳಿಗ್ಗೆ 7:15ರ ಸುಮಾರಿಗೆ ನೆಡುಂಬಾಶೇರಿ ವಿಮಾನ ನಿಲ್ದಾಣದ ಸಮೀಪವಿರುವ ಅಕಪರಂಬು ರೈಲ್ವೆ ಗೇಟ್ ಬಳಿ ಈ ಘಟನೆ ನಡೆದಿತ್ತು.
ತಿರುವನಂತಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಮೂರು ಬಾರಿ ಕಲ್ಲು ತೂರಲಾಗಿತ್ತು. ಕಲ್ಲೇಟಿನಿಂದಾಗಿ ರೈಲಿನ ಕಿಟಕಿಯ ಗಾಜುಗಳು ಪುಡಿಯಾಗಿದ್ದವು. ಪೊಲೀಸ್ ವಿಚಾರಣೆಯ ವೇಳೆ ಸುಜಿತ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ತನ್ನ ಪ್ರೇಯಸಿಯ ಮನೆಯು ರೈಲ್ವೆ ಹಳಿಗಳ ಸಮೀಪದಲ್ಲೇ ಇದ್ದು, ಆಕೆ ತನ್ನನ್ನು ಬಿಟ್ಟು ಹೋಗಿದ್ದಾಳೆಂಬ ಕೋಪ ಮತ್ತು ಪ್ರೇಮ ವೈಫಲ್ಯದ ಬೇಸರದಿಂದ ರೈಲಿನ ಮೇಲೆ ಕಲ್ಲೆಸೆದಿರುವುದಾಗಿ ತಿಳಿಸಿದ್ದಾನೆ.








