ಬೆಂಗಳೂರು : ಸರ್ಕಾರಿ ನೌಕರರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಮಾಜಿ ಹೆಡ್ ಕಾನ್ಸ್ಟೇಬಲ್ ಬಂಧಿಸಿರುವ ಲೋಕಾಯುಕ್ತ ಪೊಲೀಸರು ಜೂನ್ 16ರ ವರೆಗೆ ವಶಕ್ಕೆ ಪಡೆದು ವಿಚಾರಣೆ ಬಿಗಿಗೊಳಿಸಿದ್ದಾರೆ.
ನಿಂಗಪ್ಪ ಅಲಿಯಾಸ್ ಸಾವಂತ್ ಬಂಧಿತ ಆರೋಪಿ. ಅಬಕಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳನ್ನು ಲೋಕಾಯುಕ್ತ ದಾಳಿ ಹೆಸರಿನಲ್ಲಿ ಬೆದರಿಸಿ ಅವರಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿದ್ದ ಆರೋಪ ಕೇಳಿಬಂದಿತ್ತು. ಈತನ ವಿಚಾರಣೆ ವೇಳೆ ಲೋಕಾಯುಕ್ತ ಕೆಲ ಅಧಿಕಾರಿಗಳ ಕೈವಾಡ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ವರದಿಯಾಗಿದೆ.
ಬಂಧಿತ ನಿಂಗಪ್ಪನಿಂದ ಮೊಬೈಲ್ ಜಪ್ತಿ ಮಾಡಿಕೊಂಡಿರುವ ಅಧಿಕಾರಿಗಳು ದೂರವಾಣಿ ಕರೆಗಳ ವಿವರಗಳನ್ನು ಸಂಗ್ರಹಿಸಿದ್ದಾರೆ. ಯಾರ್ಯಾರ ಜೊತೆ ಸಂಪರ್ಕ ಹೊಂದಿದ್ದಾನೆ. ಸರ್ಕಾರಿ ಅಧಿಕಾರಿಗಳಿಂದ ಹೇಗೆ ಹಣ ವಸೂಲಿ ಮಾಡುತ್ತಿದ್ದ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಲೋಕಾಯುಕ್ತ, ಎಡಿಜಿಪಿ ಸೇರಿದಂತೆ ಕೆಲ ಹಿರಿಯ ಅಧಿಕಾರಿಗಳ ಮೊಬೈಲ್ ನಂಬರ್ ಸೇವ್ ಮಾಡಿಕೊಂಡಿದ್ದ ಆರೋಪಿಯು ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ದಾಳಿ ಸೋಗಿನಲ್ಲಿ ಬೆದರಿಸುತ್ತಿದ್ದ. ಕೈವಾಡದ ಹಿಂದೆ ಕೆಲ ಅಧಿಕಾರಿಗಳ ಪಾತ್ರ ಬಗ್ಗೆ ಹೇಳಿದ್ದಾನೆ. ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ಅವರ ನೇತೃತ್ವದ ತಂಡವು ಜೂನ್ 16ರ ವರೆಗೆ ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.