ಕಲಬುರ್ಗಿ : ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡಿದಾಗಿನಿಂದ ಮಹಿಳೆಯರು ಆಧಾರ್ ಕಾರ್ಡ್ ತೋರಿಸಿ ಇಡಿ ರಾಜ್ಯದ್ಯಂತ ಎಲ್ಲಿ ಬೇಕಾದಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದೀಗ ಕಲ್ಬುರ್ಗಿ ಜಿಲ್ಲೆಯ ವಾಡಿಯಲ್ಲಿ ಕಂಡಕ್ಟರ್ ಒಬ್ಬರು ಮಹಿಳೆಗೆ ಆಧಾರ್ ಕಾರ್ಡ್ ತೋರಿಸಿ ಎಂದಿದ್ದಕ್ಕೆ ಆಕೆ ಸಂಬಂಧಿಕರು ಕಂಡಕ್ಟರ್ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ವಾಡಿ ಪಟ್ಟಣದಲ್ಲಿ ನಡೆದಿದೆ.
ಹೌದು ನಿನ್ನೆ ಕಲಬುರಗಿ-ಯಾದಗಿರಿ ನಡುವೆ ಸಂಚರಿಸುತ್ತಿದ್ದ ಬಸ್ಗೆ ರಾವೂರು ಗ್ರಾಮದಲ್ಲಿ ಮಹಿಳೆಯೊಬ್ಬರು ಹತ್ತಿದ್ದಾರೆ. ಟಿಕೆಟ್ ಪಡೆಯುವ ವೇಳೆ ಝರಾಕ್ಸ್ ಪ್ರತಿ ತೋರಿಸಿದ್ದಾರೆ. ಕಂಡಕ್ಟರ್ ಅರ್ಜುನ ನಾಗಪ್ಪ ಕಟ್ಟಿಮನಿ ಅವರು ಓರಿಜಿನಲ್ ತೋರಿಸಿ ಎಂದು ಹೇಳಿ, ಇತರರಿಗೆ ಟಿಕೆಟ್ ನೀಡಲು ಹೋಗಿದ್ದಾರೆ. ವಾಪಸ್ ಮಹಿಳೆ ಬಳಿ ಬಂದಾಗ, ಬೇರೆಯವರ ಆಧಾರ್ ಕಾರ್ಡ್ ತೋರಿಸಿದ್ದಾರೆ.
ಇದರಿಂದ ಕೋಪಗೊಂಡ ಕಂಡಕ್ಟರ್ ಹಣ ಕೊಟ್ಟು ಟಿಕೆಟ್ ಪಡೆಯಿರಿ, ಇಲ್ಲವೇ ಬಸ್ನಿಂದ ಇಳಿಯಿರಿ ಎಂದಿದ್ದಾರೆ. ಹಣಕೊಟ್ಟು ಟಿಕೆಟ್ ಪಡೆದ ಮಹಿಳೆ, ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಬಸ್ ವಾಡಿ ಪಟ್ಟಣಕ್ಕೆ ಬರುತ್ತಿದ್ದಂತೆ ಮಹಿಳೆ ಕಡೆಯ ಯುವಕರು ಕಂಡಕ್ಟರ್ನನ್ನು ಥಳಿಸಿದ್ದಾರೆ.
ಉಸಿರಾಟ ತೊಂದರೆ ಅನುಭವಿಸಿದ ಕಂಡಕ್ಟರ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪಿಎಸ್ಐ ಕೆ.ತಿರುಮಲೇಶ ಹಾಗೂ ಸಿಬ್ಬಂದಿ, ಕಂಡಕ್ಟರ್ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ಹಲ್ಲೆ ನಡೆಸಿದವರ ವಿರುದ್ಧ ಬಸ್ ಚಾಲಕ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.