ಬೆಂಗಳೂರು : ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿ ಇಂದು ಭಾರಿ ಅನಾಹುತ ಒಂದು ತಪ್ಪಿದೆ, ನಿಂತಿದ್ದ ಲಾರಿ ಒಂದು ಏಕಾಏಕಿ ಚಲಿಸಿದ್ದು ಎದುರುಗಡೆ ಮಾರಾಟಕ್ಕೆ ಎಂದು ಇಟ್ಟಿದ್ದ ಗಣಪತಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಎದುರುಗಡೆ ಯಾವುದೇ ವಾಹನಗಳು ಇಲ್ಲದಿರುವುದರಿಂದ ಭಾರಿ ಅನಾಹುತ ಒಂದು ತಪ್ಪಿದೆ.
ಹೌದು ನಿಂತಿದ್ದ ಟಿಪ್ಪರ್ ಲಾರಿ ಚಲಿಸಿ ಒಂದು ಲೈಟ್ ಕಂಬ ಹಾಗೂ ರಸ್ತೆ ಬದಿ ಮಾರಾಟಕ್ಕೆ ಇಟ್ಟಿದ್ದ ಗಣಪತಿ ಮೂರ್ತಿಗೆ ಡಿಕ್ಕಿ ಹೊಡೆದಿದೆ.ರಾತ್ರಿ 1.30 ಸುಮಾರಿಗೆ ಟಿಪ್ಪರ್ ಲಾರಿ ಚಾಲಕ, ಜಲ್ಲಿ ಕಲ್ಲು ಅನ್ ಲೋಡ್ ಮಾಡಲು ಟಿಪ್ಪರ್ ನಿಲ್ಲಿಸಿ ಜಲ್ಲಿ ಕಲ್ಲಿನ ಫೋಟೋ ತೆಗೆದುಕೊಳ್ಳುತ್ತಿದ್ದ.
ಈ ವೇಳೆ ಬ್ರೇಕ್ ಫೇಲ್ ಆಗಿ ಟಿಪ್ಪರ್ ಏಕಾಏಕಿ ಚಲಿಸಿದ್ದು, ರಸ್ತೆ ದಾಟಿ ಎದುರುಗಡೆಗೆ ಹೋಗಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ವಾಹನ ಓಡಾಟ ಇಲ್ಲದಿರುವುದರಿಂದ ಅನಾಹುತ ತಪ್ಪಿದೆ.ಇದೀಗ ಲೈಟ್ ಕಂಬವನ್ನು ಬೆಸ್ಕಾಂ ಸಿಬ್ಬಂದಿ ತೆರವು ಗೊಳಿಸಿದ್ದು, ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.