ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಕೊಲೆಯಾಗಿದ್ದು ಪತಿ-ಪತ್ನಿಯ ನಡುವೆ ಕೇವಲ ಮೊಬೈಲ್ ಸ್ಪೀಕರ್ ಆನ್ ಮಾಡುವ ವಿಚಾರಕ್ಕೆ ಗಲಾಟೆ ನಡೆದಿದೆ ಪತ್ನಿ ತನ್ನ ಪತಿಗೆ ಮೊಬೈಲ್ ಸ್ಪೀಕರ್ ಆನ್ ಮಾಡಲು ಹೇಳಿದ್ದಾಳೆ ಇದೇ ವಿಚಾರಕ್ಕೆ ಗಲಾಟೆ ನಡೆದು ಪತ್ನಿಯ ಕತ್ತು ಹಿಸುಕಿ ಪತಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಪತ್ನಿಯ ಕತ್ತು ಹಿಸುಕಿ ಕೊಂದ ಆರೋಪಿಯನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪತ್ನಿ ನಮಿತಾ ಸಾಹು (43) ಕೊನೆಯಾದವರು. ಲೋಕೇಶ್ ಕುಮಾರ್ ಗೆಹ್ಲೋಟ್ ಎಂಬಾತ ಬಂಧಿತ ಕೊಲೆ ಆರೋಪಿ ಎಂದು ತಿಳಿದುಬಂದಿದೆ. ರಾಜಸ್ಥಾನದ ಲೋಕೇಶ್ ಕುಮಾರ್, ಕಬ್ಬನ್ ಪೇಟೆಯಲ್ಲಿ ಫೋಟೋ ಸ್ಟುಡಿಯೋ ಹೊಂದಿದ್ದ. ಐದು ವರ್ಷಗಳ ಹಿಂದೆ ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ನಮಿತಾ ಸಾಹು ಜೊತೆ ಮದುವೆಯಾಗಿ ಮಹಾಗಣಪತಿ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ.
ದಂಪತಿಗೆ ಮೂರು ವರ್ಷದ ಹೆಣ್ಣು ಮಗುವಿದೆ. ಏಪ್ರಿಲ್ 24ರಂದು ಮನೆಯಲ್ಲಿದ್ದ ಲೋಕೇಶ್ ಕುಮಾರ್ಗೆ ಪತ್ನಿ ನಮಿತಾ ಸಾಹು ಸಹೋದರ ಕರೆ ಮಾಡಿದ್ದರು. ಈ ವೇಳೆ ಫೋನ್ ಸ್ಪೀಕರ್ ಆನ್ ಮಾಡುವಂತೆ ನಮಿತಾ ಒತ್ತಾಯಿಸಿದ್ದರು.ಆದರೆ ಲೋಕೇಶ್ ಕುಮಾರ್ ಫೋನ್ ಸ್ಪೀಕರ್ ಆನ್ ಮಾಡಲು ನಿರಾಕರಿಸಿದಾಗ ಇಬ್ಬರ ನಡುವೆ ಗಲಾಟೆಯಾಗಿತ್ತು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ನಮಿತಾ ಸಾಹು ಅವರ ಕತ್ತು ಹಿಸುಕಿ ಲೋಕೇಶ್ ಕುಮಾರ್ ಹತ್ಯೆ ಮಾಡಿದ್ದಾನೆ.ಮದುವೆಗೂ ಮುನ್ನ ಕೆಲಸ ಮಾಡುತ್ತಿದ್ದಾಗ ಕೂಡಿಟ್ಟ ಹಣ ಕೊಡುವಂತೆ ಲೋಕೇಶ್ ಕುಮಾರ್ ಪೀಡಿಸುತ್ತಿದ್ದ.
ಫೋಟೋ ಸ್ಟುಡಿಯೋ ಅಭಿವೃದ್ಧಿಪಡಿಸಬೇಕು, ಬೆಂಗಳೂರಿನಲ್ಲಿ ಸೈಟ್ ಖರೀದಿಸಬೇಕು ಎಂದು ಹಣಕ್ಕಾಗಿ ನಮಿತಾ ಸಾಹು ಅವರನ್ನು ಪೀಡಿಸುತ್ತಿದ್ದ ಎಂದು ನಮಿತಾ ಸಾಹು ಕುಟುಂಬಸ್ಥರು ಆರೋಪಿಸಿದ್ದಾರೆ. ಏಪ್ರಿಲ್ 24ರಂದು ಬಸವೇಶ್ವರ ನಗರ ಠಾಣಾ ವ್ಯಾಪ್ತಿಯ ಮಹಾಗಣಪತಿ ನಗರದ ಮನೆಯಲ್ಲಿ ನಮಿತಾ ಸಾಹು ಅವರನ್ನು ಹತ್ಯೆ ಮಾಡಲಾಗಿತ್ತು. ಮನೆ ಮಾಲೀಕ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಲೋಕೇಶ್ ಕುಮಾರ್ನನ್ನು ಬಂಧಿಸಿರುವ ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.