ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯ ಕಾಲ್ತುಳಿತ ದುರಂತದಲ್ಲಿ ಸರ್ಕಾರ ನುಣುಚಿಕೊಳ್ಳಲು ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದೆ. ಈ ದುರಂತ ಸರ್ಕಾರಿ ಪ್ರಾಯೋಜಿತ ಕೊಲೆಯಾಗಿದೆ. ಮೊದಲ ಸಿಎಂ, ಡಿಸಿಎಂ ವಿರುದ್ಧ ಕ್ರಮ ಆಗಬೇಕು ಎಂಬುದಾಗಿ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆರ್ಸಿಬಿ ಗೆಲುವನ್ನು ಸಂಭ್ರಮಿಸುವ ವೇಳೆ ನಡೆದ ಕಾಲ್ತುಳಿತದಿಂದ 11 ಜನರತರಾಗಿರುವ ಹೃದಯವಿದ್ರಾವಕ ಘಟನೆ ನಾಡಿನ ಎಲ್ಲರ ಮನಸ್ಸನ್ನು ಘಾಸಿಗೊಳಿಸಿದೆ. ಪೊಲೀಸರು ಘಟನೆ ನಡೆದ ದಿನ ಸುರಕ್ಷತಾ ದೃಷ್ಟಿಯಿಂದ ಸಂಭ್ರಮಾಚರಣೆ ಬೇಡ ಎಂದರೂ ಪ್ರಚಾರದ ಗೀಳಿಗೆ ಬಿದ್ದ ಸರ್ಕಾರ ಸಂಭ್ರಮಾಚರಣೆ ನಡೆಸಿದ್ದು . ಇದು ಸರ್ಕಾರಿ ಪ್ರಾಯೋಗಿತ ಕೊಲೆಯಾಗಿದ್ದು, ಈಗ ಸರ್ಕಾರ ಅಧಿಕಾರಿಗಳ ತಲೆದಂಡ ಮಾಡುವುದರ ಮೂಲಕ ತನ್ನ ಜವಾಬ್ದಾರಿಯಿಂದ ನುಣಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಕಮಿಷನರ್ ದಯಾನಂದ್ ಬಹಳ ದಕ್ಷತೆಗೆ ಹೆಸರುವಾಸಿಯಾದವರು. ಡಿಸಿಪಿ ಶೇಖರ್ ಈ ಹಿಂದೆ ಶಿವಮೊಗ್ಗದ ಎಸ್ಪಿ ಆಗಿ ಕಾರ್ಯನಿರ್ವಹಿಸಿದ ಬಹಳ ದಕ್ಷ ಅಧಿಕಾರಿ. ಈಗಿನ ಕಾಲದಲ್ಲಿ ಇಂತಹ ಪ್ರಾಮಾಣಿಕ ಅಧಿಕಾರಿ ಸಿಗುವುದು ಬಹಳ ವಿರಳ. ಆಡಿಷನಲ್ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ನನ್ನ ಜೊತೆ ಎಂಎಸ್ಐಎಲ್ ನಲ್ಲಿ ಎಂಡಿ ಆಗಿ ಕಾರ್ಯನಿರ್ವಹಿಸಿದ್ದವರು. ಇವರೂ ಬಹಳ ಪ್ರಾಮಾಣಿಕರು ಹಾಗೂ ದಕ್ಷ ಅಧಿಕಾರಿ. ಇಂತಹ ಪ್ರಾಮಾಣಿಕ ಅಧಿಕಾರಿಗಳ ಅಮಾನತು ಖಂಡನಿಯ ಎಂದಿದ್ದಾರೆ.
ಈ ಎಲ್ಲಾ ಪ್ರಾಮಾಣಿಕ ಅಧಿಕಾರಿಗಳ ಅಮಾನತು ಆದೇಶವನ್ನು ಈ ಕೂಡಲೇ ವಾಪಸ್ ಪಡೆಯಬೇಕು. ಕ್ರಮ ಆಗಬೇಕಾಗಿದ್ದು ಅಧಿಕಾರಿಗಳ ಮೇಲಲ್ಲ. ವಿವೇಕರಹಿತವಾಗಿ, ಅವಿವೇಕತನದಿಂದ ಚೀಪ್ ಪಾಪ್ಯುಲಾರಿಟಿಗಾಗಿ ಕಾರ್ಯಕ್ರಮ ಮಾಡಿದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಮೇಲೆ ಕ್ರಮ ಆಗಬೇಕಾಗಿದೆ. ಅಂದರೆ ಮೊದಲು ಈ ಇಬ್ಬರು ತೊಲಗಬೇಕು. ಅಧಿಕಾರಿಗಳ ಅಮಾನತು ವಾಪಾಸು ಪಡೆಯದಿದ್ದರೆ ನಾಡಿನ ಜನರೇ ಸಿಎಂ, ಡಿಸಿಎಂ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹೆಚ್.ಹಾಲಪ್ಪ ಹರತಾಳು ಹೇಳಿದ್ದಾರೆ.