ಬೆಂಗಳೂರು : ಕಾರ್ಖಾನೆಯ ಮೇಲ್ಛಾವಣಿ ಶೀಟ್ ರಿಪೇರಿ ಮಾಡುವಾಗ ಆಯತಪ್ಪಿ, ಸುಮಾರು 45 ಅಡಿ ಮೇಲಿಂದ ಕೆಳಗೆ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ತಾಲೂಕು ದಾಬಸ್ ಪೇಟೆಯ ಸೋಂಪುರ ಕೈಗಾರಿಕಾ ಪ್ರದೇಶದ ಟಿ.ಡಿ ಪವರ್ ಸಿಸ್ಟಮ್ ಫ್ಯಾಕ್ಟರಿಯಲ್ಲಿ ನಡೆದಿದೆ.
ಮೃತ ಕಾರ್ಮಿಕನನ್ನು ಪರಶುರಾಮ್ (27) ಎಂದು ತಿಳಿದುಬಂದಿದೆ. ಮೂಲತಃ ರಾಯಚೂರಿನ ನಿವಾಸಿಯಾಗಿದ್ದು, ನಿರಂತರ ಮಳೆಯಿಂದಾಗಿ ಮೇಲ್ಛಾವಣಿಯಲ್ಲಿ ನೀರು ಸೋರುತ್ತಿತ್ತು. ಕಟ್ಟಡದ ಮೇಲೆ ತೆರಳಿ ಶೀಟು ಸರಿಪಡಿಸುತ್ತಿದ್ದಾಗ ಅವಘಡ ಸಂಭವಿಸಿದೆ. ಪರಶುರಾಮ್ ಗುತ್ತಿಗೆ ಆಧಾರದ ಮೇಲೆ ಇಂದು ಕೆಲಸಕ್ಕೆ ಸೇರಿದ್ದರು ಎಂದು ತಿಳಿದು ಬಂದಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.