ಬೆಳಗಾವಿ : ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪುರದ ಬಳಿ ಇರುವ ಜಮೀನಿನಲ್ಲಿ ಅಣ್ಣನನ್ನು ಕೊಲೆ ಮಾಡಿದ ತಮ್ಮ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಹುಕ್ಕೇರಿ ತಾಲ್ಲೂಕಿನ ಹಟ್ಟಿಆಲೂರಿನ ರಾಯಪ್ಪ ಸುರೇಶ ಕಮತಿ(28) ಕೊಲೆಯಾದವರು. ಬಸವರಾಜ ಕಮತಿ(24) ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಬಸವರಾಜ್ ಕಮತಿ ಕುವೈತ್ ನ್ಯಾಷನಲ್ ಪೆಟ್ರೋಲಿಯಂ ಕಂಪನಿಯಲ್ಲಿ ವಾಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ರಜೆ ಮೇಲೆ ತನ್ನ ಊರಾದ ಹಟ್ಟಿ ಆಲೂರಿಗೆ ತೆರಳಿದ್ದ. ಈ ವೇಳೆ ಅಣ್ಣ ರಾಯಪ್ಪ ಕಮತಿ, ಬಸವರಾಜ್ ಗೆ ಮತ್ತೆ ಕೆಲಸಕ್ಕೆ ಹೋಗಲು ಬಿಡದೇ ತನ್ನೊಂದಿಗೆ ಕುರಿ ಕಾಯಲು ಬಾ ಎಂದು ಕರೆಯುತ್ತಿದ್ದನಂತೆ. ಅಲ್ಲದೇ ಪ್ರತಿದಿನ ಕುರಿದೊಡ್ಡಿಯಲ್ಲಿ ಮಲಗಲು ಹೇಳುತ್ತಿದ್ದನಂತೆ. ಇದೇ ಕಾರಣಕ್ಕೆ ಸಹೋದರರ ನಡುವೆ ಗಲಾಟೆ ನಡೆದಿತ್ತು. ಇದರಿಂದ ಬೇಸತ್ತ ಬಸವರಾಜ್ ಅಣ್ಣನನ್ನೇ ಕೊಲ್ಲಲು ಪ್ಲಾನ್ ಮಾಡಿದ್ದಾನೆ.
ಅಣ್ಣ ಕುರಿ ಕಾಯಲು ಜಮೀನು ಬಳಿ ಹೋಗಿದ್ದಾಗ ಬಸವರಾಜ್ ಮನೆಯಿಂದ ಖಾರದ ಪುಡಿ ತೆಗೆದುಕೊಂಡು ಹೋಗಿದ್ದಾನೆ. ಅಣ್ಣ ಮರದ ಕೆಳಗೆ ಮೊಬೈಲ್ ನಲ್ಲಿ ರೀಲ್ಸ್ ನೋಡುತ್ತ ಕುಳಿತಿದ್ದನ್ನು ಕಂಡು ರಾಯಪ್ಪನ ಮುಖಕ್ಕೆ ಖಾರದ ಪುಡಿ ಎರಚಿ, ತಲೆಯ ಮೇಲೆ, ಮುಖದ ಮೇಲೆ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆ. ಬಳಿಕ ತನಗೇನೂ ಗೊತ್ತಿಲ್ಲ ಎಂಬಂತೆ ಮನೆಗೆ ಬಂದಿದ್ದಾನೆ. ರಾಯಪ್ಪ ಮನೆಗೆ ಹಿಂದಿರುಗದಿದ್ದಾಗ ಭಯಗೊಂಡ ಕುಟುಂಬಸ್ಥರು ಠಾಣೆಗೆ ದೂರು ನೀಡಿದ್ದಾರೆ ಪೊಲೀಸರು ತನಿಖೆ ನಡೆಸಿದಾಗ ತಮ್ಮನೇ ಅಣ್ಣನನ್ನು ಹತ್ಯೆ ಮಾಡಿದ್ದು ಬೆಳಕಿಗೆ ಬಂದಿದೆ.