ಮಂಡ್ಯ : ಕೆಎಂಎಫ್ ಸಂಸ್ಥೆಯು ಹಾಲಿನಿಂದ ತಯಾರಿಸುವ ಉಪ ಉತ್ಪನ್ನಗಳ ಮಾದರಿಯಲ್ಲೇ ಕೋಳಿ ಮಾಂಸದ ವಿವಿಧ ಭಾಗಗಳನ್ನು ಪ್ರತ್ಯೇಕಿಸಿ ರಿಟೇಲ್ ಮಳಿಗೆಗಳಲ್ಲಿ ಮಾರಾಟ ಮಾಡುವ ಮಹತ್ವದ ಯೋಜನೆಯನ್ನು ನಮ್ಮ ಒಕ್ಕೂಟವು ಈಗಾಗಲೇ ರೂಪುರೇಷೆ ತಯಾರಿಸಿದೆ ಎಂದು ಒಕ್ಕೂಟದ ನೂತನ ಅಧ್ಯಕ್ಷ ಎಂ.ಆರ್.ಬಾಲಕೃಷ್ಣ ಹೇಳಿದರು.
ಇಂದು ಮಂಡ್ಯದ ಮದ್ದೂರು ನಗರದ ಶಿವಪುರದ ಒಕ್ಕೂಟದ ಕಛೇರಿ ಆವರಣದಲ್ಲಿ ಮಂಡ್ಯ ಜಿಲ್ಲಾ ಕೋಳಿ ಉತ್ಪಾದಕ ರೈತರ ಸಹಕಾರ ಒಕ್ಕೂಟಕ್ಕೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಿತು. ಇಂದಿನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಆರ್.ಬಾಲಕೃಷ್ಣ, ಉಪಾಧ್ಯಕ್ಷರಾಗಿ ಡಿ.ಕೃಷ್ಣಪ್ಪ ಹಾಗೂ ನಿರ್ದೇಶಕರಾಗಿ ಕೆ.ಕೃಷ್ಣಯ್ಯ, ಗೋಪಾಲ, ಬೆಟ್ಟಸ್ವಾಮಿ, ಆತ್ಮಾನಂದ, ಎಂ.ವಿ.ವೆಂಕಟೇಶ್, ಜೋಗಿಗೌಡ, ಬಿ.ಗಿರೀಶ್, ಆರ್.ಸಿದ್ದಪ್ಪ, ಎಸ್.ಎಲ್. ಜಯಲಿಂಗೇಗೌಡ, ಸಿ.ಕೆಂಪರಾಜು, ಎಂ.ಸಿ.ಯೋಗೇಶ್, ಎಲ್.ಸಿ.ಪ್ರವೀಣ್ ಕುಮಾರ್, ಚುನಾಯಿತರಾದರು.
ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಬಾಲಕೃಷ್ಣ ಅವರು, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಮಂಡ್ಯ ಜಿಲ್ಲಾ ಕೋಳಿ ಉತ್ಪಾದಕ ರೈತರ ಸಹಕಾರ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು, ಕೆಎಂಎಫ್ ಸಂಸ್ಥೆಯು ಹಾಲಿನಿಂದ ತಯಾರಿಸುವ ಉಪ ಉತ್ಪನ್ನಗಳ ಮಾದರಿಯಲ್ಲೇ ಕೋಳಿ ಮಾಂಸದ ವಿವಿಧ ಭಾಗಗಳನ್ನು ಮಾರಾಟ ಮಾಡುವ ಮಹತ್ವದ ಯೋಜನೆಯನ್ನು ನಮ್ಮ ಒಕ್ಕೂಟವು ಈಗಾಗಲೇ ರೂಪುರೇಷೆ ತಯಾರಿಸಿದೆ ಎಂದರು.
ಜಿಲ್ಲೆ ಮತ್ತು ನೆರೆ ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ರಿಟೇಲ್ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು. ಕೋಳಿ ಮಾಂಸದ ವಿವಿಧ ಭಾಗಗಳನ್ನು ಪ್ರತ್ಯೆಕಿಸಿ 1 ಕೆಜಿ ಮೌಲ್ಯದ ಪ್ಯಾಕೇಟ್ ಗಳನ್ನು ಮಾಡಿದ ನಂತರ ಮಳಿಗೆಗಳಲ್ಲಿ ಮಾರಾಟ ಮಾಡಲಾಗುವುದು. ದೇವರ ಕಾರ್ಯ, ಬೀಗರ ಔತಣ ಕೂಟ, ಹುಟ್ಟುಹಬ್ಬ ಹಾಗೂ ವಿವಿಧ ಸಮಾರಂಭಗಳಿಗೆ ಗ್ರಾಹಕರು ಬಯಸಿದ ಮಾದರಿಯಲ್ಲೆ ಕೋಳಿಯ ವಿವಿಧ ಭಾಗಗಳನ್ನು ಪೂರೈಸಲಾಗುವುದಲ್ಲದೇ ಸರ್ಕಾರಿ ಸ್ವಾಮ್ಯದ ನವೋದಯ, ವಿಧ್ಯಾರ್ಥಿ ನಿಲಯಗಳು ಹಾಗೂ ಬಂಧಿಖಾನೆ ಸೇರಿದಂತೆ ಇನ್ನು ಹಲವು ನಿಲಯಗಳಿಗೆ ಬೇಡಿಕೆ ಆಧಾರದ ಮೇಲೆ ಸರಬರಾಜು ಮಾಡಲು ಒಕ್ಕೂಟವು ಆಧ್ಯತೆ ನೀಡುತ್ತದೆ.
ಗ್ರಾಹಕರಿಗೆ ಆನ್ ಲೈನ್ ಮೂಲಕ ಆರ್ಡರ್ ಪಡೆದು ಗುಣಮಟ್ಟದ ತಾಜಾ ಕೋಳಿ ಮಾಂಸದ ವಿವಿಧ ಭಾಗಗಳನ್ನು ಮನೆ ಬಾಗಿಲಿಗೆ ತಲುಪಿಸುವ ಮೂಲ ಉದ್ದೇಶವಾಗಿದ್ದು, ಶೀಘ್ರದಲ್ಲೇ ಈ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಸ್ಪಷ್ಟಪಡಿಸಿದರು.
ಚುನಾವಣಾಧಿಕಾರಿಯಾಗಿ ಸಹಕಾರ ಸಂಘದ ಮಾರಾಟಾಧಿಕಾರಿ ಸಿ.ಎ.ಸುಧಾಕರ್ ಕರ್ತವ್ಯ ನಿರ್ವಹಿಸಿದರು.
ವರದಿ : ಗಿರೀಶ್ ರಾಜ್, ಮಂಡ್ಯ
ನಾಳೆ ಶಿವಮೊಗ್ಗ ನಗರ, ಕುಂಸಿ, ಆಯನೂರಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut







