ಬೆಂಗಳೂರು: ರೈತರ ಭೂದಾಖಲೆಗಳಾದ ಪಹಣಿ ಅಥವಾ ಆರ್.ಟಿ.ಸಿ (RTC) ಯಲ್ಲಿ ಹೆಸರುಗಳು ತಪ್ಪಾಗಿ ನಮೂದಾಗಿರುವುದು ಇಂದು ಅನೇಕ ರೈತರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ. ಕನ್ನಡ ಅಥವಾ ಇಂಗ್ಲಿಷ್ ಅಕ್ಷರಗಳ ಕಾಗುಣಿತದಲ್ಲಿ (Spelling) ಸಣ್ಣ ತಪ್ಪುಗಳಿದ್ದರೂ ಸಹ, ರೈತರು ಸರ್ಕಾರದ ಸೌಲಭ್ಯಗಳು, ಸಾಲ ಸೌಲಭ್ಯ ಅಥವಾ ಪರಿಹಾರ ಪಡೆಯುವಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, ಇಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸರ್ಕಾರ ಸುಲಭ ಮಾರ್ಗೋಪಾಯಗಳನ್ನು ಒದಗಿಸಿದೆ.
ತಿದ್ದುಪಡಿಗೆ ಬೇಕಾಗುವ ಪ್ರಮುಖ ದಾಖಲೆಗಳು:
ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಿಸಲು ರೈತರು ಈ ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು:
ಪ್ರಸ್ತುತ ಪಹಣಿ: ಸದ್ಯ ಲಭ್ಯವಿರುವ ತಪ್ಪು ಹೆಸರಿರುವ ಪಹಣಿ ಪ್ರತಿ.
ಆಧಾರ್ ಕಾರ್ಡ್: ಅರ್ಜಿದಾರರ ಸರಿಯಾದ ಹೆಸರು ಇರುವ ಆಧಾರ್ ಕಾರ್ಡ್ ಪ್ರತಿ.
ಸ್ವಯಂ ಘೋಷಿತ ಪತ್ರ: 20 ರೂಪಾಯಿ ಸ್ಟ್ಯಾಂಪ್ ಪೇಪರ್ನಲ್ಲಿ ತಿದ್ದುಪಡಿಯ ಕಾರಣ ಮತ್ತು ವಿವರಗಳನ್ನು ನೀಡಿ ಸಹಿ ಮಾಡಿದ ಪತ್ರ.
ವಿನಂತಿ ಅರ್ಜಿ: ಸಂಬಂಧಪಟ್ಟ ತಹಶೀಲ್ದಾರರಿಗೆ ಉದ್ದೇಶಿಸಿ ಬರೆದ ಮನವಿ ಪತ್ರ.
ಅರ್ಜಿ ಸಲ್ಲಿಸುವ ವಿಧಾನ ಹೇಗೆ?
ಸಿದ್ಧಪಡಿಸಿದ ಎಲ್ಲಾ ದಾಖಲೆಗಳೊಂದಿಗೆ ನಿಮ್ಮ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯ ಇನ್ವರ್ಡ್ (Inward) ವಿಭಾಗಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಅಲ್ಲಿಂದ ತಪ್ಪದೇ ಸ್ವೀಕೃತಿ ಪತ್ರವನ್ನು (Acknowledgement) ಪಡೆದುಕೊಳ್ಳಬೇಕು.
ಈ ಅರ್ಜಿಯು ‘ಭೂಮಿ’ ಕೇಂದ್ರದ ಮೂಲಕ ವಿಲೇವಾರಿಯಾಗಿ, ಅಂದಾಜು 15 ದಿನಗಳ ಒಳಗಾಗಿ ಆಧಾರ್ ಕಾರ್ಡ್ನಲ್ಲಿರುವಂತೆ ಪಹಣಿಯಲ್ಲಿ ಹೆಸರು ತಿದ್ದುಪಡಿ ಆಗಲಿದೆ.
ರೈತರು ಗಮನಿಸಬೇಕಾದ ಪ್ರಮುಖ ವಿಚಾರಗಳು:
ಯಾವ ತಪ್ಪುಗಳ ತಿದ್ದುಪಡಿ ಸಾಧ್ಯ?
ಕೇವಲ ಅಕ್ಷರಗಳ ಕಾಗುಣಿತ ತಪ್ಪುಗಳು, ಟೈಪಿಂಗ್ ಮಿಸ್ಟೇಕ್ ಅಥವಾ ಒತ್ತಕ್ಷರಗಳ ತಪ್ಪುಗಳನ್ನು ಮಾತ್ರ ಈ ಪ್ರಕ್ರಿಯೆಯ ಮೂಲಕ ಸರಿಪಡಿಸಲು ಅವಕಾಶವಿರುತ್ತದೆ.
ಯಾವುದಕ್ಕೆ ಅವಕಾಶವಿಲ್ಲ?
ಪಹಣಿಯಲ್ಲಿ ಸಂಪೂರ್ಣವಾಗಿ ಹೆಸರು ಬದಲಾವಣೆ ಮಾಡಲು ಅಥವಾ ಹೊಸ ಹೆಸರು ಸೇರ್ಪಡೆ ಮಾಡಲು ಇಲ್ಲಿ ಅವಕಾಶವಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ನ್ಯಾಯಾಲಯದ ಆದೇಶ ಅಥವಾ ಉಪ-ನೋಂದಣಾಧಿಕಾರಿಗಳ ಕಚೇರಿಯ ಮೂಲಕ ನೋಂದಣಿ ಪ್ರಕ್ರಿಯೆ ನಡೆಯಬೇಕಾಗುತ್ತದೆ.
ಒಂದು ವೇಳೆ ಪಹಣಿಯಲ್ಲಿ ಹೆಸರು ಬದಲಾಯಿಸುವುದು ತಾಂತ್ರಿಕ ಕಾರಣಗಳಿಂದ ಕಷ್ಟವೆನಿಸಿದರೆ, ರೈತರು ತಮ್ಮ ಆಧಾರ್ ಕಾರ್ಡ್ನಲ್ಲಿರುವ ಹೆಸರನ್ನು ಪಹಣಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳುವುದು ಮತ್ತೊಂದು ಸುಲಭದ ದಾರಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತರು ಸಮೀಪದ ನಾಡಕಚೇರಿ ಅಥವಾ ತಹಶೀಲ್ದಾರ್ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.








