ಬೆಂಗಳೂರು : ಆಡಳಿತರೂಢ ಕಾಂಗ್ರೆಸ್ ಪಕ್ಷದ ಪ್ರಮುಖರಿಗೆ ಈ ವಾರದೊಳಗೇ ಅಧಿಕಾರ, ಸ್ಥಾನಮಾನ ಸಿಗುವ ನಿರೀಕ್ಷೆ ಮತ್ತೆ ಗರಿಗೆದರಿದೆ.ಈ ವಾರದಲ್ಲಿ ನಿಗಮ ಮಂಡಳಿಗಳ ನೇಮಕವಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ನಿಗಮ ಮಂಡಳಿಗಳಿಗೆ ಶಾಸಕರ ನಾಮನಿರ್ದೇಶನದ ಜತೆಗೆ, ಕೆಲವು ಪ್ರಮುಖ ಕಾರ್ಯಕರ್ತರಿಗೂ ಅವಕಾಶ ಸಿಗಲಿದೆ. ಜತೆಗೆ, ರಾಜ್ಯ, ಜಿಲ್ಲೆ ಮತ್ತು ತಾಲೂಕು ಈ 3 ಹಂತದಲ್ಲಿ ‘ಗ್ಯಾರಂಟಿಗಳ ಅನುಷ್ಠಾನ ಸಮಿತಿ’ಗಳಿಗೂ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ನೇಮಕ ನಡೆಯಲಿದೆ.ಲೋಕಸಭೆ ಚುನಾವಣೆಗೆ ಅಖಾಡ ಫೈನಲ್ ಆಗುವ ಮುನ್ನ ಪಕ್ಷದ ಶಾಸಕರು ಹಾಗೂ ಪ್ರಮುಖರಿಗೆ ಅಧಿಕಾರ ಹಂಚಿ, ಸ್ಥಾನಮಾನದೊಂದಿಗೆ ಉತ್ಸಾಹ ತುಂಬಲು ನಿರ್ಧರಿಸಲಾಗಿದೆ.
ಈಗಾಗಲೇ ಅಂತಿಮಗೊಂಡಿರುವ ಶಾಸಕರ ಪಟ್ಟಿಜತೆಗೆ, ಮುಖಂಡರ ಪಟ್ಟಿಯನ್ನೂ ಆಖೈರುಗೊಳಿಸ ಲಾಗಿದೆ. ಗ್ಯಾರಂಟಿ ಸಮಿತಿಗಳಿಗೂ ಪಟ್ಟಿ ಸಿದ್ದಪಡಿಸಲಾಗುತ್ತಿದೆ. ಈ ವಾರದೊಳಗೆ ಶಾಸಕರ ನಾಮನಿರ್ದೆಶನ ಪ್ರಕ್ರಿಯೆ ನಡೆಯಲಿದ್ದು, ಅದರ ಜತೆಜತೆಗೆ, ಗ್ಯಾರಂಟಿ ಸಮಿತಿಗಳ ನೇಮಕಕ್ಕೂ ಸಿದ್ದತೆಯಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.