ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಮಹತ್ವದ ವಿಷಯಗಳನ್ನು ಕೇಂದ್ರೀಕರಿಸಿ, ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಟಾನದಲ್ಲಿ ಪಾರದರ್ಶಕತೆ, ಆಡಳಿತವನ್ನು ಜನಸ್ನೇಹಿಯಾಗಿಸುವ ಹಾಗೂ ಪ್ರಾಮಾಣಿಕ ಪ್ರಯತ್ನದ ಭಾಗವಾಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ಸರ್ಕಾರಿ ಪತ್ರಗಳನ್ನು ಸಂಕ್ಷಿಪ್ತಗೊಳಿಸಿ, ಸರ್ಕಾರಿ ಪಾರಿಭಾಷಿಕ ಪದಗಳನ್ನು ಸರಳೀಕರಣ ಮಾಡಿ ಜನಸಾಮಾನ್ಯರಿಗೆ ಅರ್ಥೈಸುವ ನಿಟ್ಟಿನಲ್ಲಿ ‘ಗ್ರಾಮದನಿ’ ಪಾಡ್ಕಾಸ್ಟ್ ಕಾರ್ಯ ನಿರ್ವಹಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕದ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು (ANSSIRDPR) ಹೊಸಹೆಜ್ಜೆ ಇಡುವುದರೊಂದಿಗೆ ಆರಂಭಿಸಿರುವ ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಲುಪಲಿರುವ ‘ಗ್ರಾಮದನಿ’ ಸರಣಿ ಪಾಡ್ಕಾಸ್ಟ್ ಲೋಕಾರ್ಪಣೆ ಮಾಡಿ ಸಚಿವರು ಮಾತನಾಡಿದರು.
ಮಾಧ್ಯಮದ ಇಂದಿನ ಯುಗದಲ್ಲಿ, ಸಮುದಾಯಕ್ಕೆ ಮಾಹಿತಿ ಮತ್ತು ಅರಿವು ಮೂಡಿಸುವುದು, ಅತ್ಯಂತ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ, ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಮಾಹಿತಿ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ, ತಂತ್ರಜ್ಞಾನದ ಸಮರ್ಪಕ ಬಳಕೆ ನೆರವಾಗಬಲ್ಲದು ಎಂದು ಹೇಳಿದ ಸಚಿವರು ‘ಗ್ರಾಮದನಿ’ ಅಕ್ಷರಶಃ ‘ಗ್ರಾಮೀಣ ಕರ್ನಾಟಕದ ಧ್ವನಿ’ಯಾಗಲಿದ್ದು, ಇದು ಕೇವಲ ಮಾಹಿತಿ ನೀಡುವ ವೇದಿಕೆಯಾಗಿರದೆ ಶಕ್ತಿಯುತ ಅರಿವಿನ ಮಾಧ್ಯಮವಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಸಾಮರ್ಥ್ಯಾಭಿವೃದ್ಧಿ ಮತ್ತು ಜ್ಞಾನಾರ್ಜನೆ ಈ ಪಾಡ್ಕಾಸ್ಟ್ ನ ಪ್ರಮುಖ ಉದ್ದೇಶಗಳಾಗಿದ್ದು, ಪ್ರಮುಖವಾಗಿ ಚುನಾಯಿತ ಪ್ರತಿನಿಧಿಗಳು, ಕ್ಷೇತ್ರ ಸಿಬ್ಬಂದಿಗಳು/ ಅಧಿಕಾರಿಗಳು ಹಾಗೂ ಜನಸಾಮಾನ್ಯರ ಸಾಮರ್ಥ್ಯವನ್ನು ವೃದ್ಧಿಸಲು ಮತ್ತು ಅವರಿಗೆ ಅಗತ್ಯವಾದ ಜ್ಞಾನವನ್ನು ಸುಲಭವಾಗಿ ತಲುಪಿಸಲು ಇದು ಸೂಕ್ತ ವೇದಿಕೆಯಾಗಲಿದೆ; ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗಳಿಗೆ ಸಂಬಂಧಿಸಿದ ನಿಯಮಗಳು, ಒಟ್ಟಾರೆ ಪಂಚಾಯತ್ ವ್ಯವಸ್ಥೆಯ ಡಿಜಿಟಲೀಕರಣ ಕುರಿತ ಮಾರ್ಗಸೂಚಿಗಳು, ಪಂಚತಂತ್ರ 2.0 ತಂತ್ರಾಂಶದಲ್ಲಿ ಇಂದೀಕರಿಸುವ ವಿಧಾನ ಮುಂತಾದ ಹಲವು ಉಪಯುಕ್ತ ಸುತ್ತೋಲೆಗಳು ಮತ್ತು ಮಾರ್ಗಸೂಚಿಗಳನ್ನು ಇಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
‘ಗ್ರಾಮದನಿ’ ಪಾಡ್ಕಾಸ್ಟ್ ಸರಣಿಯು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಮಾಹಿತಿ ಪ್ರಸಾರ ಮಾಡುವ ಮತ್ತು ಆಡಳಿತ ಸುಧಾರಣೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಿದೆ ಎಂದು ಎಂದೂ ಸಚಿವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಡಿ.ರಣದೀಪ್, ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಹಾಗೂ ಅಧಿಕಾರಿಗಳು ಇದ್ದರು.
5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ, ನವೆಂಬರ್ ಗೆ ಯಾವ ಕ್ರಾಂತಿನೂ ಆಗಲ್ಲ: ಸಚಿವ ಜಮೀರ್ ಅಹಮದ್
ಗಮನಿಸಿ : ನಿಮ್ಮ ಮನೆಯಲ್ಲಿ ಎಷ್ಟು ದಿನಗಳವರೆಗೆ `ನೀರು’ ಸಂಗ್ರಹಿಸಿಡಬಹುದು ಗೊತ್ತಾ?