ಶಿವಮೊಗ್ಗ : ನಿನ್ನೆ ಜಿಲ್ಲೆಯ ಭದ್ರಾವತಿ ತಾಲ್ಲೂಕು ಕಚೇರಿಯ ಮಾನ್ಯ ತಹಶೀಲ್ದಾರ್ ಪರಸಪ್ಪ ವಿರುದ್ಧ ಮಾನಸಿಕ ಕಿರುಕುಳ ಆರೋಪಿಸಿ, ಡೆತ್ ನೋಟ್ ಬರೆದಿಟ್ಟು ವಾಟ್ಸಪ್ ಮೂಲಕ ಸಂದೇಶ ಕಳುಹಿಸಿ ನದಿಗೆ ಹಾರಿದ್ದ ಘಟನೆ ಇಂದು ಭದ್ರಾವತಿ ತಾಲ್ಲೂಕಿನಲ್ಲಿ ಆತಂಕ ಮೂಡಿಸಿದೆ. ಅದೃಷ್ಟವಶಾತ್, ಸ್ಥಳೀಯ ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಆ ವ್ಯಕ್ತಿಯ ಜೀವ ಉಳಿಯಿತು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಅಜ್ಜಿಹಳ್ಳಿ ಗ್ರಾಮದ ನಿವಾಸಿ ಆರ್.ಜಿ. ಅಭಿಷೇಕ್ (ಪುತ್ರ: ಆರ್.ಎಂ. ಗಂಗಾಧರಪ್ಪ) ಅವರು ಈ ಗಂಭೀರ ಹೆಜ್ಜೆ ಇಟ್ಟಿದ್ದು ಭದ್ರಾವತಿ ತಹಶೀಲ್ದಾರ್ ಅವರಿಂದ ನಿರಂತರ ಮಾನಸಿಕ ಒತ್ತಡ ಹಾಗೂ ಕಿರುಕುಳ ಎದುರಿಸುತ್ತಿದ್ದೇನೆ ಎಂದು ಹೇಳಿಕೊಂಡು, ಡೆತ್ ನೋಟ್ ಬರೆದು ವಾಟ್ಸಪ್ನಲ್ಲಿ ಸಂದೇಶ ಕಳುಹಿಸಿದ್ದಾಗಿ ತಿಳಿದುಬಂದಿದೆ.
ಅಭಿಷೇಕ್ ತಮ್ಮ ನೋಟ್ನಲ್ಲಿ, 01-02-2026, 02-02-2026 ಹಾಗೂ 03-02-2026ರಂದು ಇ-ಪೌತಿ ಖಾತೆ ಪ್ರಕ್ರಿಯೆ ಹಾಗೂ ಆಗರದಹಳ್ಳಿ ಗ್ರಾಮದ ಸರ್ವೆ ನಂ.56, 49 ಮತ್ತು 50 ಸಂಬಂಧಿಸಿದ ವಿಚಾರಗಳಲ್ಲಿ ಅತಿಯಾದ ಒತ್ತಡ ಹೇರಲಾಗಿದೆ ಎಂದು ಆರೋಪಿಸಿದ್ದಾರೆ. ಪಿಟಿಸಿಎಲ್ ಕಾಯ್ದೆಯಡಿ ತಡಸ ಸರ್ವೆ ನಂ.51/ಬಿ ಕುರಿತ ಕಡತ ಈಗಾಗಲೇ ತಾಲ್ಲೂಕು ಕಚೇರಿಗೆ ಸಲ್ಲಿಸಿದ್ದರೂ, ಪದೇಪದೇ ತೊಂದರೆ ನೀಡಲಾಗುತ್ತಿದೆ ಎಂದು ದೂರಿದ್ದಾರೆ.
2005ರಿಂದ ಸೇವೆಯಲ್ಲಿ ಇದ್ದು ಯಾವುದೇ ಲೋಪದೋಷವಿಲ್ಲದೆ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಹೇಳಿಕೊಂಡಿರುವ ಅವರು, ತಾವು ಕುಟುಂಬದ ಏಕೈಕ ದುಡಿಯುವ ಸದಸ್ಯರಾಗಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯ ಆರೈಕೆಯ ಜವಾಬ್ದಾರಿಯೂ ತಮ್ಮ ಮೇಲಿದೆ ಎಂದು ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.
ಈ ಎಲ್ಲ ವಿಚಾರಗಳನ್ನು ತಿಳಿಸಿದರೂ ಕೂಡ ತಮಗೆ ನಿರಂತರ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಘಟನೆ ತಿಳಿದ ತಕ್ಷಣ ಸ್ಥಳೀಯ ಗ್ರಾಮಸ್ಥರಾದ ಅಗರದಹಳ್ಳಿ ನಾಗರಾಜಪ್ಪ ಮತ್ತು ಇತರರು ರಕ್ಷಣೆ ಮಾಡಿದ್ದಾರೆ. ಚಾನಲ್ ಬಿದ್ದಿದ್ದರಿಂದ ಸಣ್ಣಪುಟ್ಟ ತರಚು ಗಾಯಗಲಳಾಗಿದ್ದು ಚನ್ನಗಿರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.








