ಬೆಂಗಳೂರು: ಸ್ನಾನದ ಮನೆಯಲ್ಲಿ ಗ್ಯಾಸ್ ಗೀಜರ್ನಿಂದ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಿಂದಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ನೆಲಮಂಗಲ ತಾಲೂಕಿನ ಶಾಂತಿಗ್ರಾಮದ ಅರಿಶಿನಕುಂಟೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಸಾವನ್ನಪ್ಪಿರುವ ವ್ಯಕ್ತಿಯನ್ನು ರಾಕೇಶ್(34) ಅಂತ ತಿಳಿದು ಬಂದಿದೆ.
ಸರಿಯಾದ ಗಾಳಿಯಾಡುವಿಕೆಯ ಕೊರತೆಯಿಂದ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ರಾಕೇಶ್ ಅವರ ಪತ್ನಿ ಧನುಶ್ರೀ ಮತ್ತು ಮಕ್ಕಳು ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಊರಿಗೆ ತೆರಳಿದ್ದ ಸಮಯದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.ಸ್ನಾನದ ಮನೆಯಲ್ಲಿ ಸ್ನಾನ ಮಾಡುವಾಗ ಗ್ಯಾಸ್ ಗೀಜರ್ನಿಂದ ಸೋರಿಕೆಯಾದ ಕಾರ್ಬನ್ ಮಾನಾಕ್ಸೈಡ್ ಅನಿಲವನ್ನು ಉಸಿರಾಡಿದ್ದರಿಂದ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನೂ ರಾಕೇಶ್ ಅವರು ಹಬ್ಬಕ್ಕೆ ಬರದೆ, ಫೋನ್ ಕರೆಗಳಿಗೆ ಉತ್ತರಿಸದ ಕಾರಣ ಅನುಮಾನಗೊಂಡ ಧನುಶ್ರೀ ಮನೆಗೆ ವಾಪಸ್ ಬಂದು ನೋಡಿದಾಗ ಈ ದುರಂತ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಇನ್ನೂ ಘಟನೆ ಸಂಬಂಧ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.