ಬೆಂಗಳೂರು : ರಾಜ್ಯಾದ್ಯಂತ ಪ್ರಸಕ್ತ ತಿಂಗಳಿನ ಬಿಸಿಲಿನ ಪ್ರಕರತೆ ಮತ್ತು ತೀರ್ವತೆ ಕಂಡುಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು, ಗರ್ಭಿಣಿಯರು, ಬಾಣತಿಯರು, ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸಲಹೆಗಳನ್ನು ನೀಡಲಾಗಿದೆ.
ಮುಂಜಾಗ್ರತ ಕ್ರಮಗಳು
ಬಿಸಿಯಾದ ಗಾಳಿ, ಶಾಕ ತರಂಗ (Heat wave) ದ ಸಂದರ್ಭಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಪಾಲಿಸಬೇಕಾದ ಮುಂಜಾಗ್ರತ ಕ್ರಮಗಳು ಇಂತಿವೆ.
ಹೆಚ್ಚು ನೀರನ್ನು ಕುಡಿಯಿರಿ, ಮಜ್ಜಿಗೆ, ಎಳನೀರು, ಹಣ್ಣಿನ ರಸಗಳನ್ನು ಹೆಚ್ಚಾಗಿ ಸೇವಿಸಬಹುದು.
ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳು ಹಾಗೂ ಹಣ್ಣುಗಳನ್ನು ಸೇವಿಸುವುದು ಉತ್ತಮ.
ಸಡಿಲವಾದ ತೆಳುಬಣ್ಣದ ಹತ್ತಿಯ ಬಟ್ಟೆಗಳನ್ನು ಧರಿಸಿರಿ. ಗಾಳಿಯಾಡುವ ಪಾದರಕ್ಷೆಯನ್ನು ಧರಿಸಿರಿ.
ಹೊರಗಡೆ ತೆರಳುವ ವೇಳೆ ತಂಪು ಕನ್ನಡಕ, ಛತ್ರಿ, ಟವೆಲ್ ಅಥವಾ ಬಿಸಿಲಿನಿಂದ ಕಾಪಾಡಿಕೊಳ್ಳವ ಸಾಮಾನ್ಯ ಕ್ರಮಗಳನ್ನು ಪಾಲಿಸಿ.
ರೇಡಿಯೋ, ದೂರದರ್ಶನ ಹಾಗೂ ದಿನಪತ್ರಿಕೆಗಳಲ್ಲಿ ಬಿಸಿಯಾದ ಗಾಳಿ, ಶಾಖ ತರಂಗದ ಬಗ್ಗೆ ನೀಡುವ ಮಾಹಿತಿ ಅನುಸಾರ ದೈನಂದಿನ ಚಟುವಟಿಕೆಗಳನ್ನು ಯೋಚಿಸಿಕೊಳ್ಳಿ.
ಬಿಸಿಲಿನಲ್ಲಿ ಹೊರಗಡೆ ಕಾರ್ಯನಿರ್ವಹಿಸುವವರು (ಜಮೀನಿನ ಕೆಲಸ, ರಸ್ತೆ ಕಾಮಗಾರಿ ಮುಂತಾದವುಗಳು) ಆದಷ್ಟು ಬೆಳಗ್ಗೆ 11 ಗಂಟೆಯ ಒಳಗೆ ಮತ್ತು ಸಂಜೆ 4 ಗಂಟೆಯ ನಂತರ ಕೈಗೊಳ್ಳುವುದು ಉತ್ತಮ.
ಬಿಸಿಲು ಹೆಚ್ಚಿರುವ ಅವಧಿಯಲ್ಲಿ ಶ್ರಮದಾಯಕ ಕೆಲಸಗಳಿಂದ ವಿಶ್ರಾಂತಿ ಪಡೆಯಿರಿ. ಬಿಸಿಲಿನಲ್ಲಿ ನಡೆಯುವಾಗ ಕಡ್ಡಾಯವಾಗಿ ಚಪ್ಪಲಿ ಧರಿಸಿ.
ಟಿ, ಕಾಫಿ ಹೆಚ್ಚು ಸಕ್ಕರೆ ಅಂಶ ಹೊಂದಿರುವ ಕಾರ್ಬೋನೇಟೆಡ್ ಪಾನಿಯ ಹಾಗೂ ಮಧ್ಯಪಾನದಿಂದ ದೂರವಿರಿ.
ವ್ಯಕ್ತಿ ತೊದಲು ಮಾತು ಅಥವಾ ಅರ್ಥ ರಹಿತವಾಗಿ ಬಡಬಡಿಸಿದ್ದಲ್ಲಿ ಕೂಡಲೆ ನೆರಳಿನ ಸ್ಥಳಕ್ಕೆ ಸ್ಥಳಾಂತರಿಸಿ. ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆ ಎತ್ತಿ ವಿಶ್ರಾಂತಿ ಪಡೆಯಬೇಕು.
ಬಿಸಿಗಾಳಿ ಮತ್ತು ಅತೀಯಾದ ತಾಪಮಾನದಿಂದ ಆರೋಗ್ಯ ಸಮಸ್ಯೆಗಳು ಉಂಟಾದಲ್ಲಿ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ, 108 ಅಥವಾ 102ಕ್ಕೆ ಕರೆ ಮಾಡಬಹುದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜು ಟಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.