ರಾಜ್ಯದಲ್ಲಿ ಬೇಸಿಗೆಯ ತಾಪಮಾನ ದಿನೇ ದಿನೇ ಏರುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಸಿಲಿನ ಅಲೆ (Heat Wave) ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.
ಬಿಸಿಲಿನ ಬೇಗೆಯಿಂದ ಉಂಟಾಗುವ ಶಾಖಾಘಾತ ಮತ್ತು ಇತರ ಅನಾರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಾರ್ವಜನಿಕರು ಅನುಸರಿಸಬೇಕಾದ ಪ್ರಮುಖ ಕ್ರಮಗಳು ಇಲ್ಲಿವೆ:
ಸಾರ್ವಜನಿಕರು ಏನು ಮಾಡಬೇಕು?
ಉಡುಪು: ಸಡಿಲವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಗಾಳಿಯಾಡುವಂತಹ ಪಾದರಕ್ಷೆಗಳನ್ನು ಬಳಸಿ.
ಪಾನೀಯ: ಬಾಯಾರಿಕೆಯಾಗದಿದ್ದರೂ ಆಗಾಗ್ಗೆ ನೀರು ಕುಡಿಯಬೇಕು. ಉಪ್ಪು-ಸಕ್ಕರೆ ಮಿಶ್ರಿತ ನೀರು, ಹಣ್ಣಿನ ರಸ, ಮಜ್ಜಿಗೆ, ಎಳೆನೀರು ಮತ್ತು ಪಾನಕಗಳ ಸೇವನೆ ಉತ್ತಮ.
ಆಹಾರ: ಮನೆಯಲ್ಲಿ ತಯಾರಿಸಿದ ತಾಜಾ, ಸಾತ್ವಿಕ ಮತ್ತು ಮಸಾಲೆ ರಹಿತ ಆಹಾರಕ್ಕೆ ಆದ್ಯತೆ ನೀಡಿ.
ಶುಚಿತ್ವ: ಆಹಾರ ಸೇವಿಸುವ ಮೊದಲು 45 ಸೆಕೆಂಡುಗಳ ಕಾಲ ಸಾಬೂನಿನಿಂದ ಕೈ ತೊಳೆಯಬೇಕು. ಕುಡಿಯಲು ಶುದ್ಧೀಕರಿಸಿದ ನೀರನ್ನೇ ಬಳಸಿ.
ಪ್ರಥಮ ಚಿಕಿತ್ಸೆ: ಯಾರಾದರೂ ಬಿಸಿಲಿನಿಂದ ಸುಸ್ತಾಗಿ ಬಿದ್ದರೆ, ತಕ್ಷಣ ಅವರನ್ನು ನೆರಳಿನ ಜಾಗಕ್ಕೆ ಕರೆದೊಯ್ದು, ಕಾಲುಗಳನ್ನು ಮೇಲಕ್ಕೆತ್ತಿ ಮಲಗಿಸಿ. ಒದ್ದೆ ಬಟ್ಟೆಯಿಂದ ದೇಹವನ್ನು ಒರೆಸಿ.
ಏನು ಮಾಡಬಾರದು?
ಬಟ್ಟೆ: ಬಿಗಿಯಾದ ಅಥವಾ ಸಿಂಥೆಟಿಕ್ ಬಟ್ಟೆಗಳನ್ನು ಧರಿಸಬೇಡಿ.
ಪಾನೀಯ: ಕಾಫಿ, ಟೀ, ಮದ್ಯಪಾನ ಮತ್ತು ಅತಿಯಾದ ಸಕ್ಕರೆಯುಕ್ತ ತಂಪು ಪಾನೀಯಗಳನ್ನು (Soda/Carbonated drinks) ವರ್ಜಿಸಿ.
ಆಹಾರ: ರಸ್ತೆ ಬದಿಯ ತೆರೆದಿಟ್ಟ ಆಹಾರ ಪದಾರ್ಥಗಳು ಹಾಗೂ ಕತ್ತರಿಸಿದ ಹಣ್ಣುಗಳನ್ನು ತಿನ್ನಬೇಡಿ. ಮಾಂಸಾಹಾರ ಮತ್ತು ಅತಿಯಾದ ಮಸಾಲೆ ಪದಾರ್ಥಗಳಿಂದ ದೂರವಿರಿ.
ತಪ್ಪು ಕ್ರಮ: ಬಿಸಿಲಿನಿಂದ ಸುಸ್ತಾದಾಗ ಅತಿಯಾದ ತಣ್ಣೀರು ಅಥವಾ ಐಸ್ ನೀರಿನಿಂದ ದೇಹ ಒರೆಸಬೇಡಿ. ಇದರಿಂದ ರಕ್ತನಾಳಗಳು ಸಂಕುಚಿತಗೊಂಡು ಆಂತರಿಕ ಅಂಗಗಳಿಗೆ ಹಾನಿಯಾಗಬಹುದು.
ನೀರು: ಕೆರೆ, ಕುಂಟೆಗಳ ನೀರನ್ನು ನೇರವಾಗಿ ಕುಡಿಯಬೇಡಿ ಮತ್ತು ಬಯಲು ಪ್ರದೇಶದಲ್ಲಿ ಮಲ-ಮೂತ್ರ ವಿಸರ್ಜನೆ ಮಾಡಬೇಡಿ.
ಶಾಖಾಘಾತದ ಲಕ್ಷಣಗಳು ಮತ್ತು ತುರ್ತು ಚಿಕಿತ್ಸೆ
ವ್ಯಕ್ತಿಯು ಅಸಂಗತವಾಗಿ ಮಾತನಾಡುವುದು (ತೊದಲುವುದು), ಪ್ರಜ್ಞೆ ತಪ್ಪುವುದು, ಚರ್ಮ ಕೆಂಪಾಗುವುದು, ಅತಿಯಾದ ದೇಹದ ಉಷ್ಣತೆ ಮತ್ತು ಉಸಿರಾಟದ ತೊಂದರೆ ಕಂಡಬಂದರೆ ಅದು ಶಾಖಾಘಾತದ (Heat Stroke) ಲಕ್ಷಣಗಳಾಗಿವೆ.
ಗಮನಿಸಿ: ಪರಿಸ್ಥಿತಿ ಗಂಭೀರವಾಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಅಥವಾ ಉಚಿತ ಆರೋಗ್ಯ ಸಹಾಯವಾಣಿ 104 ಕ್ಕೆ ಕರೆ ಮಾಡಿ ತುರ್ತು ನೆರವು ಪಡೆಯಿರಿ.








