ಚೆನ್ನೈ: ಜೆ. ಜಯಲಲಿತಾ ಅವರ ನಿಧನದ ನಂತರ ಎಐಎಡಿಎಂಕೆಯನ್ನು ಕಾಡುತ್ತಿದ್ದ ಬಿರುಕು ಮಂಗಳವಾರ ಬೆಳಿಗ್ಗೆ ಅಧಿಕೃತವಾಗಿ ಮತ್ತು ಸಾಂಕೇತಿಕವಾಗಿ ಅತ್ಯಂತ ಕಠೋರ ರೂಪ ಪಡೆಯಿತು. ಹಿರಿಯ ನಾಯಕರಾದ ಎಸ್.ಪಿ. ವೇಲುಮಣಿ ಮತ್ತು ಸಿ.ವಿ. ಷಣ್ಮುಗಂ ನೇತೃತ್ವದ ದೊಡ್ಡ ಬಣವು ಮುಖ್ಯಮಂತ್ರಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಸರ್ಕಾರಕ್ಕೆ ಬೆಂಬಲ ನೀಡಲು ಮತ್ತು ಸಚಿವ ಸಂಪುಟ ಸೇರಲು ನಿರ್ಧರಿಸಿದೆ. ಈ ಮೂಲಕ ಸುಮಾರು ಒಂದು ದಶಕದ ಕಾಲ ಪಕ್ಷವನ್ನು ಒಟ್ಟಾಗಿಡಲು ಹೋರಾಡಿದ ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ಅವರು ತಮ್ಮದೇ ಪಕ್ಷದಲ್ಲಿ ಅಲ್ಪಸಂಖ್ಯಾತರಾಗಿ ಉಳಿಯುವಂತಾಗಿದೆ.
”ಇದು ಬಹುಶಃ ಇಪಿಎಸ್ ಅವರ ರಾಜಕೀಯ ಜೀವನದ ಅತ್ಯಂತ ದುರ್ಬಲ ದಿನ,” ಎಂದು ಇಪಿಎಸ್ ಬಣದಲ್ಲೇ ಉಳಿದಿರುವ ಹಿರಿಯ ನಾಯಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. “ದುರದೃಷ್ಟವಶಾತ್ ಎಐಎಡಿಎಂಕೆಯ ಅಧಿಕೃತ ವಿಭಜನೆಯು ಅವರ ಹುಟ್ಟುಹಬ್ಬದ ದಿನವೇ ನಡೆಯುತ್ತಿದೆ. ಈಗ ಅವರೊಂದಿಗೆ ಇರುವ ಶಾಸಕರೂ ನಿಧಾನವಾಗಿ ಅಲ್ಲಿಂದ ಹೊರಬರಲಿದ್ದಾರೆ. ಇಪಿಎಸ್ ಕೂಡ ಓ. ಪನ್ನೀರ್ಸೆಲ್ವಂ (OPS) ಅವರಂತೆಯೇ ಮೂಲೆಗುಂಪಾಗಬಹುದು,” ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.
ಮಂಗಳವಾರ ಬೆಳಿಗ್ಗೆಯ ವೇಳೆಗೆ ಬಂಡಾಯ ನಾಯಕರು ತಮ್ಮ ಮುಂದಿನ ನಡೆಯನ್ನು ಅಂತಿಮಗೊಳಿಸಿದ್ದರು. ಸಂಜೆಯ ವೇಳೆಗೆ ಈ ಬಣವು ಟಿವಿಕೆ ನಾಯಕರನ್ನು ಭೇಟಿ ಮಾಡಲಿದ್ದು, ಮುಖ್ಯಮಂತ್ರಿ ವಿಜಯ್ ಅವರು “ಸರ್ಕಾರದ ಸ್ಥಿರತೆಯ ಹಿತದೃಷ್ಟಿಯಿಂದ” ಎಐಎಡಿಎಂಕೆ ಬೆಂಬಲವನ್ನು ಅಧಿಕೃತವಾಗಿ ಸ್ವೀಕರಿಸಲಿದ್ದಾರೆ. ಇತ್ತೀಚಿನ ಚುನಾವಣೆಯಲ್ಲಿ ಎಐಎಡಿಎಂಕೆ 47 ಸ್ಥಾನಗಳನ್ನು ಗೆದ್ದಿತ್ತು.
ಈ ಬಂಡಾಯದ ಹಿಂದೆ ಸಂಘಟನಾತ್ಮಕವಾಗಿ ವೇಲುಮಣಿ ಮತ್ತು ರಾಜಕೀಯವಾಗಿ ಷಣ್ಮುಗಂ ಕಾಣಿಸಿಕೊಂಡಿದ್ದರೂ, ತೆರೆಮರೆಯ ಸೂತ್ರಧಾರಿಯಾಗಿ ಲೀಮಾ ರೋಸ್ ಮಾರ್ಟಿನ್ (ಲಾಟರಿ ಉದ್ಯಮಿ ಸ್ಯಾಂಟಿಯಾಗೊ ಮಾರ್ಟಿನ್ ಪತ್ನಿ) ಕಾಣಿಸಿಕೊಂಡಿದ್ದಾರೆ. ಅವರ ಪುತ್ರ ಅಡ್ವಾವ್ ಅರ್ಜುನ್ ಅವರು ಸಿಎಂ ವಿಜಯ್ ಅವರ ಆಪ್ತ ಸಲಹೆಗಾರ ಮತ್ತು ಸಚಿವರಾಗಿದ್ದಾರೆ. ಇಪಿಎಸ್ ಬಣ ಮತ್ತು ಟಿವಿಕೆ ನಡುವೆ ಸಂವಹನ ಸೇತುವೆಯಾಗಿ ಲೀಮಾ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.








