ಶಿವಮೊಗ್ಗ: ನಿನ್ನೆ ಗುಜರಾತಿನ ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 241 ಮಂದಿ ಮೃತಪಟ್ಟಿದ್ದರು. ಈ ದುರಂತದಲ್ಲಿ ಮೃತರಾದಂತವರಿಗೆ ಸಾಗರ ತಾಲ್ಲೂಕು ಕಾಂಗ್ರೆಸ್ ನಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಸಾಗರ ಹೋಟೆಲ್ ವೃತ್ತದಲ್ಲಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ಅಹ್ಮದಾಬಾದ್ನಲ್ಲಿ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದಂತ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಇದೊಂದು ಹೃದಯವಿದ್ರಾವಕ ಘಟನೆಯಾಗಿದೆ. ಭವಿಷ್ಯದ ಕನಸು ಕಟ್ಟಿಕೊಂಡು ವಿಮಾನ ಹತ್ತಿದ್ದಂತ 241 ಜನರು ದುರಂತ ಅಂತ್ಯಕಂಡಿದ್ದಾರೆ. ಈ ಘಟನೆಯಿಂದ ಇಡೀ ದೇಶವೇ ದುಃಖಸಾಗರದಲ್ಲಿ ಮುಳುಗುವಂತೆ ಮಾಡಿದೆ. ಇದು ಕಂಡುಕೇಳರಿಯದ ದುರಂತವಾಗಿದೆ ಎಂದರು.
ಅಹಮದಾಬಾದ್ ನ ಏರ್ ಇಂಡಿಯಾ ವಿಮಾನವು ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿದ ಪರಿಣಾಮ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಂತವರು ಮೃತರಾಗಿದ್ದಾರೆ. ದೇಶಿಗರಲ್ಲದೇ ವಿಮಾನ ಅಪಘಾತದಲ್ಲಿ ವಿದೇಶಿಗರು ಮೃತಪಟ್ಟಿದ್ದಾರೆ. ಮೃತ ಕುಟುಂಬದ ಜೊತೆ ಕಾಂಗ್ರೇಸ್ ಪಕ್ಷ ಇದ್ದು, ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದರು.
ನಗರ ಕಾಂಗ್ರೇಸ್ ಅಧ್ಯಕ್ಷೆ ಉಷಾ ಎನ್. ಮಾತನಾಡಿ, ಅಹಮದಾಬಾದ್ ವಿಮಾನ ದುರಂತ ಅತ್ಯಂತ ದುರದೃಷ್ಟಕರವಾದದ್ದು. ವಿಮಾನ ವೈದ್ಯ ವಿದ್ಯಾರ್ಥಿ ನಿಲಯದ ಮೇಲೆ ಬಿದ್ದು ಅನೇಕ ವಿದ್ಯಾರ್ಥಿಗಳು ಅಸು ನೀಗಿದ್ದಾರೆ. ವೈದ್ಯರಾಗುವ ಕನಸು ಕಮರಿ ಹೋಗಿದೆ. ಅದೇ ರೀತಿ 241 ಜನರ ಬದುಕು ದುರಂತದಲ್ಲಿ ಅಂತ್ಯ ಕಂಡಿದೆ. ವಿಮಾನ ದುರಂತಕ್ಕೆ ಕಾರಣ ಏನು ಎನ್ನುವುದು ಸದ್ಯದಲ್ಲಿಯೆ ಗೊತ್ತಾಗುತ್ತದೆ. ಇಂತಹ ಅನಾಹುತಗಳು ಮುಂದೆ ನಡೆಯದಂತೆ ನೋಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಐ.ಎನ್.ಸುರೇಶಬಾಬು, ಮಕ್ಬೂಲ್ ಅಹ್ಮದ್, ಸೈಯದ್ ಜಾಕೀರ್, ಮಂಡಗಳಲೆ ಗಣಪತಿ, ಮಧುಮಾಲತಿ, ಪ್ರಭಾವತಿ, ಸರಸ್ವತಿ ನಾಗರಾಜ್, ಎಲ್.ಚಂದ್ರಪ್ಪ, ಮಹಾಬಲ ಕೌತಿ, ಅನ್ವರ್ ಭಾಷಾ, ವಿಲ್ಸನ್ ಗೋನ್ಸಾಲ್ವಿಸ್, ರಮೇಶ್ ಚಂದ್ರಗುತ್ತಿ, ಸೋಮಶೇಖರ ಲ್ಯಾವಿಗೆರೆ, ಕಬೀರ್ ಚಿಪ್ಳಿ, ಭೀರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶುಕ್ರವಾರ ಮನೆಯಲ್ಲಿ ಈ ನೀರನ್ನು ಚಿಮುಕಿಸಿ, ಮಹಾಲಕ್ಷ್ಮೀಯ ಕೃಪೆಯಿಂದ ಸಂಪತ್ತು ವೃದ್ಧಿ
BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ಗಾಯಗೊಂಡವರ ರಕ್ಷಣೆಗೆ ಮುಂದಾಗಿದ್ದ ವ್ಯಕ್ತಿ ಸೇರಿ ಮೂವರು ಸಾವು