ಶಿವಮೊಗ್ಗ: ರಸ್ತೆಯಲ್ಲೆಲ್ಲ ಕಲ್ಲು. ಕೆಂಪು ಮಣ್ಣು. ವಾಹನ ಹೋದ್ರೆ ಸಾಕು ಧೂಳೋ, ಧೂಳು. ಹಳ್ಳಿಯ ಕಚ್ಚಾ ರಸ್ತೆಗೂ ಕಡೆಯಾಗಿರೋ ರೋಡಲ್ಲಿ ಕಲ್ಲುಗಳೆದ್ದು ಎಡವಿ ಬೀಳುವಂತಿವೆ. ರಾತ್ರಿ ಹೊತ್ತಲ್ಲಿ ತಲೆ ಬಗ್ಗಿಸಿಯೇ ಆ ರೋಡಲ್ಲಿ ನಡಿಬೇಕು. ಇದರ ಜೊತೆಗೆ ಚರಂಡಿ ತುಂಬಿ ಸೊಳ್ಳೆ ಕಾಟ. ಸರಾಗವಾಗಿ ಚರಂಡಿ ನೀರು ಹರಿಯದೇ ಡೆಂಗ್ಯೂ, ಮಲೇರಿಯಾ ರೋಗ ಬರೋ ಆತಂಕದಲ್ಲಿ ಆ ರಸ್ತೆಯ ಜನರಿದ್ದಾರೆ. ಇದು ಬೇರೆಲ್ಲೂ ಅಲ್ಲ, ಸಾಗರ ನಗರದ ಎಸ್.ಎನ್ ನಗರದ ರಸ್ತೆಯೊಂದರ ದುಸ್ಥಿತಿ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಎಸ್ ಎನ್ ನಗರದ ಹೊಸ ಬಡಾವಣೆ ವಾರ್ಡ್ ನಂ.30ರ ದುಸ್ಥಿತಿಯಿದು. ಇಲ್ಲಿನ ನಿವಾಸಿಗಳು ತಮ್ಮ ಮನೆ ಮುಂದಿರೋ ರೋಡಿಗೆ ಜಲ್ಲಿ ಕಂಡೇ ಅರ್ಧ ಶತಮಾನಗಳೇ ಕಳೆದಿದ್ದರೇ, ಈವರೆಗೂ ಕಿತ್ತೋಗಿರೋ ರಸ್ತೆಗೆ ಮಾತ್ರ ಡಾಂಬಾರೀಕರಣದ ಭಾಗ್ಯವೇ ಒದಗಿ ಬಂದಿಲ್ಲ. ಸುಮಾರು 50 ವರ್ಷಗಳಿಂದ ರಸ್ತೆ ದುರಸ್ತಿ, ಡಾಂಬಾರೀಕರಣಕ್ಕೆ ಇಲ್ಲಿನ ಜನರು ನಗರಸಭೆಗೆ ಅಲೆದಾಡಿಯೇ ಸುಸ್ತಾದ್ರೇ ವಿನಹ, ಅಧಿಕಾರಿಗಳು ಮಾತ್ರ ಡಾಂಬಾರೀಕರಣ ಮಾಡೋ ಗೋಜಿಗೆ ಹೋಗಿಲ್ಲ.
ಇಂದು ಈ ಕಾರಣಕ್ಕಾಗಿಯೇ ಪ್ರತಿಭಟನೆ ನಡೆಸಿ, ಶಾಸಕರು, ನಗರಸಭೆಯ ಆಯುಕ್ತರು, ಕೌನ್ಸಿಲರ್ ಗಳ ವಿರುದ್ಧ ಆಕ್ರೋಶವನ್ನು ಹೊರ ಹಾಕಿದರು. ಮಾರಿ ಜಾತ್ರೆಯಲ್ಲಾದರೂ ಡಾಂಬಾರೀಕರ ನಮ್ಮ ರಸ್ತೆಗೆ ಆಗಲಿದೆ ಎನ್ನುವ ನಿರೀಕ್ಷೆ ಇತ್ತು. ಆದರೇ ಬೇರೆಲ್ಲ ರಸ್ತೆಗಳನ್ನು ಡಾಂಬಾರೀಕರಣ ಮಾಡಿದ್ರೇ ವಿನಹ ನಮ್ಮ ರಸ್ತೆಯನ್ನು ಮಾತ್ರ ಮಾಡಲೇ ಇಲ್ಲ ಎಂಬುದಾಗಿ ಎಸ್ ಎನ್ ನಗರ ಹೊಸ ಬಡಾವಣೆ 30ನೇ ವಾರ್ಡ್ ನ ನಿವಾಸಿಗಳ ಅಳಲಾಗಿದೆ.
ಚರಂಡಿ ಬ್ಲಾಕ್, ನೀರು ನಿಂತು ಡೆಂಗ್ಯೂ, ಮಲೇರಿಯಾಗೆ ಆಹ್ವಾನ
ಇನ್ನೂ ಡಾಂಬಾರೀಕರಣ ಹೋಗಲಿ, ಚರಂಡಿಯನ್ನೂ ಮಾಡೇ ಇಲ್ಲ. ಹಲವು ವರ್ಷಗಳೇ ಕಳೆದರೂ ಒಳಚರಂಡಿ ವ್ಯವಸ್ಥೆ ಸರಿಯಾಗಿ ಇರದ ಕಾರಣ, ಅಲ್ಲಲ್ಲಿ ನೀರು ನಿಂತು, ಸೊಳ್ಳೆಗಳ ಆವಾಸಸ್ಥಾನವಾಗಿ ಬಿಟ್ಟಿದೆ. ಹೀಗಾಗಿ ಎಸ್ ಎನ್ ನಗರ ಹೊಸ ಬಡಾವಣೆ 30ನೇ ವಾರ್ಡ್ ನಲ್ಲಿ ಡೆಂಗ್ಯೂ, ಮಲೇರಿಯಾ ಈ ಬಾರಿ ಜನರಿಗೆ ಬರೋದು ಗ್ಯಾರಂಟಿ ಎನ್ನುವಂತಾಗಿದೆ.
ಒದು ಕಡೆಯಲ್ಲಿ ಚರಂಡಿ ತುಂಬಿದ್ದು, ಸರಾಗವಾಗಿ ನೀರು ಹರಿಯದ ಪರಿಣಾಮ, ಒಳಚರಂಡಿ ಭರ್ತಿಯಾಗಿ ನೀರು ನಿಂತು ಗಬ್ಬು ನಾರುವಂತಿದೆ. ಮನೆ ಬಾಗಿಲಲ್ಲೇ ಚರಂಡಿ ತುಂಬಿ ನಾರುತ್ತಿರುವುದರಿಂದ ಇಲ್ಲಿನ ಜನರು ಪದೇ ಪದೇ ಅನಾರೋಗ್ಯಕ್ಕೂ ದೂಡುವಂತೆ ಆಗಿದೆ ಎಂಬುದು ಇಲ್ಲಿನ ನಿವಾಸಿಯೊಬ್ಬರ ಕಣ್ಣೀರ ಕತೆಯಾಗಿದೆ.

80 ಮೀಟರ್ ರಸ್ತೆ ಮಾಡೋದಲ್ಲ, ಸಂಪೂರ್ಣ ರಸ್ತೆ ಮಾಡುವಂತೆ ಒತ್ತಾಯ
ಸಾಗರ ನಗರಸಭೆಯಿಂದ ಇದೇ ಎಸ್ ಎನ್ ನಗರ ಹೊಸ ಬಡಾವಣೆ 30ನೇ ವಾರ್ಡ್ ನ 80 ಅಡಿಯಷ್ಟು ರಸ್ತೆಯನ್ನು ಡಾಂಬಾರೀಕರಣ ಮಾಡೋ ಪ್ರಕ್ರಿಯೆ ಆರಂಭಗೊಂಡಿದೆ. ಆದರೇ ಅದೇ ರಸ್ತೆಯಲ್ಲಿನ ಇನ್ನೂ 50 ಅಡಿಯಷ್ಟು ಬಾಕಿ ಏಕೆ ಉಳಿಸಿದ್ದೀರಿ.? ಅದನ್ನು ಮಾಡಬಹುದಲ್ವ? ನಮ್ಮ ಮನೆಯ ಮುಂದಿನ ರಸ್ತೆಯನ್ನು ಮಾಡಿಯೇ ಅನೇಕ ವರ್ಷಗಳಾಗಿದ್ದಾವೆ. ನಾವು ಇಲ್ಲಿ ವಾಸ ಮಾಡೋದಕ್ಕೆ ಶುರುಮಾಡಿ 50 ವರ್ಷವೇ ಕಳೆದರೂ ಡಾಂಬಾರೀಕರಣ ಮಾಡಿಲ್ಲ. ನಾವೇನು ನೀರು, ಮನೆ ಕಂದಾಯ ಸೇರಿದಂತೆ ಇತರೆ ತೆರಿಗೆಯನ್ನು ಪಾವತಿ ಮಾಡುತ್ತಿಲ್ಲವೇ ಎಂಬುದಾಗಿ ಅಲ್ಲಿನ ನಿವಾಸಿಗಳು ಸಾಗರ ನಗರಸಭೆಯ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಇನ್ನೂ ಹಾಲಿ ಮಾಡುತ್ತಿರುವಂತ 80 ಅಡಿ ರಸ್ತೆ ಮಾಡೋದಕ್ಕೆ ನಾವು ಬಿಡೋದಿಲ್ಲ. ನಮ್ಮ ಮನೆಯ ಮುಂದಿರುವಂತ ರಸ್ತೆಯೂ ಅನೇಕ ವರ್ಷಗಳೇ ಆಗಿದೆ ಮಾಡಿ. ಅದನ್ನು ಸೇರಿಸಿ ಡಾಂಬಾರೀಕರಣ ಮಾಡಬೇಕು. ಅಲ್ಲಿಯವರೆಗೆ ಕೇವಲ ಒಂದೆಡೆ ಮಾತ್ರವೇ ಮಾಡುತ್ತಿರುವಂತ ಅರ್ಧ ರಸ್ತೆಯ ಡಾಂಬಾರೀಕರಣ ಕಾಮಗಾರಿಯನ್ನು ಮಾಡೋದಕ್ಕೆ ಬಿಡೋದಿಲ್ಲ ಅಂತ ಪ್ರತಿಭಟಿಸಿ ನಿವಾಸಿಗಳು ಸಾಗರ ನಗರಸಭೆಯನ್ನು ಎಚ್ಚರಿಸಿದ್ದಾರೆ.
ಒಟ್ಟಾರೆಯಾಗಿ ಶಿವಮೊಗ್ಗ ಜಿಲ್ಲೆಯ ಸಾಗರದ ಎಸ್ ಎನ್ ನಗರ ಹೊಸ ಬಡಾವಣೆ 30ನೇ ವಾರ್ಡ್ ನಲ್ಲಿ 50 ವರ್ಷವೇ ಕಳೆದರು ರಿಪೇರಿಯನ್ನೇ ಕಾಣದ ರಸ್ತೆಯೊಂದರ ದುಸ್ಥಿತಿ ಇದಾಗಿದೆ. ರಸ್ತೆ ಸರಿಪಡಿಸಿ, ಓಡಾಡೋದಕ್ಕೆ ಸರಿಮಾಡಿ. ದೂಳು ನಿವಾರಿಸಿ, ಕಟ್ಟಿಕೊಂಡಿರುವಂತ ಚರಂಡಿ ನೀರು ಸರಾಗವಾಗಿ ಹರಿಯುವಂತೆ ಮಾಡಿ ಎಂಬುದು ಇಲ್ಲಿನ ನಿವಾಸಿಗಳ ಒತ್ತಾಯ. ಆ ನಿಟ್ಟಿನಲ್ಲಿ ಸಾಗರದ ಜನಪ್ರಿಯ ಶಾಸಕರಾದಂತ ಗೋಪಾಲಕೃಷ್ಣ ಬೇಳೂರು, ನಗರಸಭೆಯ ಆಯುಕ್ತ ಹೆಚ್.ಕೆ ನಾಗಪ್ಪ ಇತ್ತ ಕಣ್ಣಾಯಿಸಿ, ಡಾಂಬಾರೀಕರಣ ಮಾಡಿ ಪುಣ್ಯ ಕಟ್ಟಿಕೊಳ್ಳುತ್ತಾರ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..
ಮತದಾರರ ಪಟ್ಟಿ ಪರಿಷ್ಕರಣೆ ಲೋಪದೋಷ ಸರಿಪಡಿಸಿ: ರಾಜ್ಯ ಚುನಾವಣಾ ಆಯೋಗಕ್ಕೆ ಡಿಕೆಶಿ ಮನವಿ








