ಮಧ್ಯಪ್ರದೇಶದ ಸತ್ನಾ ಸೆಂಟ್ರಲ್ ಜೈಲಿನಲ್ಲಿ ಸಹಾಯಕ ಅಧೀಕ್ಷಕಿಯಾಗಿದ್ದ (Assistant Superintendent) ಫಿರೋಜಾ ಖಾತೂನ್, ಅಲ್ಲಿ ವಾರಂಟ್ ಇನ್-ಚಾರ್ಜ್ ಆಗಿ ಕೆಲಸ ಮಾಡುತ್ತಿದ್ದಾಗ ಕೈದಿ ಧರ್ಮೇಂದ್ರ ಸಿಂಗ್ ಪರಿಚಯವಾಯಿತು.
2007ರಲ್ಲಿ ಕೌನ್ಸಿಲರ್ ಒಬ್ಬರ ಕೊಲೆ ಮತ್ತು ಶವ ಹೂತುಹಾಕಿದ ಪ್ರಕರಣದಲ್ಲಿ ಧರ್ಮೇಂದ್ರ ಸಿಂಗ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದನು. ಜೈಲಿನಲ್ಲಿದ್ದ ಅವಧಿಯಲ್ಲಿ ಅವನು ವಾರಂಟ್ ಸಂಬಂಧಿತ ಕೆಲಸಗಳಲ್ಲಿ ಜೈಲು ಅಧಿಕಾರಿಗಳಿಗೆ ಸಹಾಯ ಮಾಡುತ್ತಿದ್ದನು. ಈ ಕಾರಣದಿಂದಾಗಿ ಫಿರೋಜಾ ಖಾತೂನ್ ಅವರೊಂದಿಗೆ ಪದೇ ಪದೇ ಸಂಪರ್ಕಕ್ಕೆ ಬರುತ್ತಿದ್ದನು.
ಕೇವಲ ವೃತ್ತಿಪರ ಸಂಬಂಧವಾಗಿ ಆರಂಭವಾದ ಇವರ ಪರಿಚಯ ಸ್ನೇಹಕ್ಕೆ ತಿರುಗಿ, ನಂತರ ಪ್ರೇಮವಾಗಿ ಅರಳಿತು.
ಸುಮಾರು 14 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ನಂತರ, ಉತ್ತಮ ನಡತೆಯ ಆಧಾರದ ಮೇಲೆ ಧರ್ಮೇಂದ್ರ ಸಿಂಗ್ ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದರು ಎಂದು ವರದಿ ತಿಳಿಸಿದೆ.
ಬಿಡುಗಡೆಯಾದ ಬಳಿಕ ಈ ಜೋಡಿ ಮದುವೆಯಾಗಲು ನಿರ್ಧರಿಸಿತು. ಅದರಂತೆ ಮೇ 5 ರಂದು ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ಇವರ ವಿವಾಹ ಅದ್ಧೂರಿಯಾಗಿ ನೆರವೇರಿತು.
ಇದು ಅಂತರಧರ್ಮೀಯ ವಿವಾಹವಾಗಿದ್ದರಿಂದ, ಸಾಮಾಜಿಕ ವಿರೋಧ ಅಥವಾ ಟೀಕೆಗಳನ್ನು ತಪ್ಪಿಸಲು ಧರ್ಮೇಂದ್ರ ಸಿಂಗ್ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ತನ್ನ ಹೆಸರನ್ನು ಬದಲಿಸಿಕೊಂಡಿದ್ದರು. ಆದರೆ, ಈ ಸಂಬಂಧಕ್ಕೆ ಫಿರೋಜಾ ಖಾತೂನ್ ಅವರ ಮುಸ್ಲಿಂ ಕುಟುಂಬದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಮದುವೆ ಸಮಾರಂಭಕ್ಕೂ ಗೈರುಹಾಜರಾಗಿದ್ದರು.
ಕುಟುಂಬದವರ ಅನುಪಸ್ಥಿತಿಯಲ್ಲಿ, ವಿಶ್ವ ಹಿಂದೂ ಪರಿಷತ್ (VHP) ಜಿಲ್ಲಾ ಉಪಾಧ್ಯಕ್ಷ ರಾಜಬಹದ್ದೂರ್ ಮಿಶ್ರಾ ಮತ್ತು ಅವರ ಪತ್ನಿ ಫಿರೋಜಾ ಅವರಿಗೆ ‘ಕನ್ಯಾದಾನ’ ಮಾಡುವ ಮೂಲಕ ತಂದೆ-ತಾಯಿಯ ಜವಾಬ್ದಾರಿ ನಿಭಾಯಿಸಿದರು. ಈ ವಿವಾಹದಲ್ಲಿ ಬಜರಂಗದಳದ ಸದಸ್ಯರು ಕೂಡ ಭಾಗವಹಿಸಿದ್ದರು.








