ಬೆಂಗಳೂರು: ಕರ್ನಾಟಕ ಸರ್ಕಾರದ ನೊಂದಣಿ ಮತ್ತು ಮುದ್ರಾಂಕ ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ‘ಕಾವೇರಿ 2.0’ ತಂತ್ರಾಂಶದ ಮೂಲಕ ಆಸ್ತಿ ನೊಂದಣಿ ಪ್ರಕ್ರಿಯೆ ಈಗ ಸಂಪೂರ್ಣ ಡಿಜಿಟಲೀಕರಣಗೊಂಡಿದೆ. ಕಚೇರಿಗಳಿಗೆ ಅಲೆಯುವ ಮತ್ತು ಕಾಗದ ಪತ್ರಗಳ ರಾಶಿಯನ್ನು ಹೊತ್ತು ತಿರುಗುವ ಜಂಜಾಟವಿಲ್ಲದೆ, ಕಾಗದರಹಿತ (Paperless) ವ್ಯವಸ್ಥೆಯಡಿ ದಸ್ತಾವೇಜು ನೊಂದಣಿ ಮಾಡುವ ಹಂತ-ಹಂತದ ಸಂಪೂರ್ಣ ಮಾರ್ಗದರ್ಶನ ಇಲ್ಲಿದೆ.
ಹಂತ 1: ಲಾಗಿನ್ ಮತ್ತು ಆಸ್ತಿ ವಿವರಗಳ ಸಲ್ಲಿಕೆ
ಮೊದಲಿಗೆ ನಾಗರಿಕರು ಕಾವೇರಿ 2.0 ಪೋರ್ಟಲ್ಗೆ ಭೇಟಿ ನೀಡಿ ಲಾಗಿನ್ ಆಗಬೇಕು. ಲಾಗಿನ್ ಆದ ನಂತರ ‘ಸ್ಟಾರ್ಟ್ ನ್ಯೂ ಅಪ್ಲಿಕೇಶನ್’ (Start New Application) ಕ್ಲಿಕ್ ಮಾಡಿ, ‘ಡಾಕ್ಯುಮೆಂಟ್ ರಿಜಿಸ್ಟ್ರೇಷನ್’ (Document Registration) ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕು.
ಆಸ್ತಿಯ ವಿಧಕ್ಕೆ ಅನುಗುಣವಾಗಿ ಇ-ಸ್ವತ್ತು (ಗ್ರಾಮ), ಇ-ಆಸ್ತಿ (ನಗರ), ಅಥವಾ ಯುಎಲ್ಎಂಎಸ್ (ನಗರ ಬಿಡಿ ಆಸ್ತಿ) ಅನ್ನು ಆಯ್ಕೆ ಮಾಡಿಕೊಳ್ಳಬೇಕು.
ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮದ ವಿವರಗಳನ್ನು ನೀಡಿ, ಪಿಐಡಿ (PID) ಸಂಖ್ಯೆಯನ್ನು ನಮೂದಿಸಿ ಸರ್ಚ್ ಮಾಡಿದಾಗ ಆಸ್ತಿಯ ಸಂಪೂರ್ಣ ವಿವರಗಳು ಲಭ್ಯವಾಗುತ್ತವೆ. ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣದ ಶೆಡ್ಯೂಲ್ ವಿವರಗಳು ತಂತ್ರಾಂಶದಲ್ಲೇ ಸ್ವಯಂಚಾಲಿತವಾಗಿ ಲೆಕ್ಕಾಚಾರವಾಗುತ್ತವೆ .
ಹಂತ 2: ಆಧಾರ್ ಮತ್ತು ಡಿಎಸ್ಸಿ (DSC) ದೃಢೀಕರಣ
ಪಕ್ಷಗಾರರ (ಖರೀದಿದಾರ ಮತ್ತು ಮಾರಾಟಗಾರ) ವಿವರಗಳನ್ನು ನಮೂದಿಸುವಾಗ ಆಧಾರ್ ಕಾರ್ಡ್ ಅಥವಾ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ (DSC) ಕಡ್ಡಾಯವಾಗಿದೆ.
ಆಧಾರ್ ವಿವರಗಳನ್ನು ನಮೂದಿಸಿ, ಮೊಬೈಲ್ಗೆ ಬರುವ ಒಟಿಪಿ (OTP) ಮೂಲಕ ದೃಢೀಕರಣ ಮಾಡಿಕೊಳ್ಳಬೇಕು. ಒಂದು ವೇಳೆ ಆಧಾರ್ ಇಲ್ಲದಿದ್ದರೆ ಪಾಸ್ಪೋರ್ಟ್ ವಿವರಗಳ ಜೊತೆಗೆ ಡಿಎಸ್ಸಿ (DSC) ಕೀ ಇರುವುದು ಕಡ್ಡಾಯವಾಗಿರುತ್ತದೆ.
ಸಾಕ್ಷಿದಾರರು (Witness) ಕಡ್ಡಾಯವಾಗಿ ಆಧಾರ್ ದೃಢೀಕರಣವನ್ನೇ ಮಾಡಬೇಕಾಗುತ್ತದೆ.
ಹಂತ 3: ಮಾರುಕಟ್ಟೆ ಮೌಲ್ಯ ಮತ್ತು ಶುಲ್ಕ ಪಾವತಿ
ಆಸ್ತಿಯ ವಿವರಗಳ ಆಧಾರದ ಮೇಲೆ ಸರ್ಕಾರಿ ಮಾರುಕಟ್ಟೆ ಮೌಲ್ಯವನ್ನು (Market Value) ಲೆಕ್ಕಹಾಕಲಾಗುತ್ತದೆ.
ಮಾರುಕಟ್ಟೆ ಮೌಲ್ಯ ಹಾಗೂ ಕನ್ಸಿಡರೇಷನ್ ಮೊತ್ತದಲ್ಲಿ ಯಾವುದು ಹೆಚ್ಚಿರುತ್ತದೆಯೋ, ಅದಕ್ಕೆ ಅನುಗುಣವಾಗಿ ಸರ್ಕಾರಕ್ಕೆ ಪಾವತಿಸಬೇಕಾದ ಮುದ್ರಾಂಕ ಶುಲ್ಕ ಮತ್ತು ನೊಂದಣಿ ವೆಚ್ಚವನ್ನು ತಂತ್ರಾಂಶವೇ ತೋರಿಸುತ್ತದೆ.ಇದನ್ನು ಪರಿಶೀಲಿಸಿದ ಉಪನೊಂದಣಾಧಿಕಾರಿಗಳು (Sub-Registrar) ಒಪ್ಪಿಗೆ ನೀಡಿದ ಬಳಿಕ, ನಾಗರಿಕರು ತಮ್ಮ ಲಾಗಿನ್ನಲ್ಲಿ ‘ಮೇಕ್ ಪೇಮೆಂಟ್’ (Make Payment) ಕ್ಲಿಕ್ ಮಾಡಿ, ಖಜಾನೆ-2 ಪೋರ್ಟಲ್ ಮೂಲಕ ನೆಟ್ ಬ್ಯಾಂಕಿಂಗ್, ಯುಪಿಐ ಅಥವಾ ಕಾರ್ಡ್ ಬಳಸಿ ಶುಲ್ಕ ಪಾವತಿಸಬಹುದು.
ಹಂತ 4: ಡಿಜಿಟಲ್ ಎಕ್ಸಿಕ್ಯೂಷನ್ ಮತ್ತು ಸ್ಲಾಟ್ ಬುಕಿಂಗ್
ಪಾವತಿ ಯಶಸ್ವಿಯಾದ ನಂತರ ಪಕ್ಷಗಾರರು ಮತ್ತು ಸಾಕ್ಷಿದಾರರು ಆಧಾರ್ ಆಧಾರಿತ ಇ-ಸೈನ್ (e-Sign) ಅಥವಾ ಡಿಎಸ್ಸಿ ಮೂಲಕ ಡಿಜಿಟಲ್ ಸಹಿ ಪ್ರಕ್ರಿಯೆಯನ್ನು (Digital Execution) ಪೂರ್ಣಗೊಳಿಸಬೇಕು.
ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಕನ್ಸಿಡರೇಷನ್ ಇದ್ದಲ್ಲಿ ಪ್ಯಾನ್ (PAN) ವೆರಿಫಿಕೇಶನ್ ಮಾಡುವುದು ಕಡ್ಡಾಯ.
ಎಲ್ಲವೂ ಮುಗಿದ ನಂತರ ಆಸ್ತಿ ನೊಂದಣಿಗೆ ಬೇಕಾದ ದಿನಾಂಕವನ್ನು ನಿಗದಿಪಡಿಸಲು ‘ಬುಕ್ ಸ್ಲಾಟ್’ (Book Slot) ಕ್ಲಿಕ್ ಮಾಡಿ ಸಮಯ ನಿಗದಿ ಮಾಡಿಕೊಳ್ಳಬೇಕು.
ಹಂತ 5: ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಅಂತಿಮ ಪ್ರಕ್ರಿಯೆ
ನಿಗದಿತ ದಿನದಂದು ಪಕ್ಷಗಾರರು ಹಾಗೂ ಸಾಕ್ಷಿದಾರರು ಉಪನೊಂದಣಾಧಿಕಾರಿಗಳ (SR) ಕಚೇರಿಗೆ ಭೇಟಿ ನೀಡಬೇಕು. ಒಂದು ವೇಳೆ ಡಿಎಸ್ಸಿ ಬಳಸಿ ದೃಢೀಕರಿಸಿದ್ದರೆ, ತಪ್ಪದೇ ಡಿಎಸ್ಸಿ ಕೀಯನ್ನು ಜೊತೆಗೆ ಕೊಂಡೊಯ್ಯಬೇಕು.
ಕಚೇರಿಯಲ್ಲಿ ಡಿಜಿಟಲ್ ಆಪರೇಟರ್ ಮುಖಾಂತರ ಪಕ್ಷಗಾರರ ಫೋಟೋ, ಬೆರಳಚ್ಚು (Biometric) ಹಾಗೂ ಐರಿಸ್ (Iris) ಗುರುತುಗಳನ್ನು ಪಡೆದು ಆಧಾರ್ ಮೂಲಕ ಮರು-ದೃಢೀಕರಿಸಲಾಗುತ್ತದೆ.
ಅಂತಿಮವಾಗಿ ಉಪನೊಂದಣಾಧಿಕಾರಿಗಳು ತಮ್ಮ ಡಿಜಿಟಲ್ ಸಹಿಯನ್ನು ಹಾಕುವ ಮೂಲಕ ನೊಂದಣಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ.
ನೇರವಾಗಿ ನಾಗರಿಕರ ಕೈಗೆ ಡಿಜಿಟಲ್ ದಾಖಲೆ!
ನೊಂದಣಿಯಾದ ತಕ್ಷಣವೇ ಅಂತಿಮ ದಸ್ತಾವೇಜು ಅರ್ಜಿದಾರರ ಕಾವೇರಿ ಪೋರ್ಟಲ್ ಲಾಗಿನ್ಗೆ ವರ್ಗಾವಣೆಯಾಗುತ್ತದೆ ಹಾಗೂ ಸಾರ್ವಜನಿಕರು ಇದನ್ನು ನೇರವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಜೊತೆಗೆ ಈ ನೊಂದಣಿ ಮಾಹಿತಿಯು ಖಾತಾ ಪ್ರಕ್ರಿಯೆಗಾಗಿ ಸ್ವಯಂಚಾಲಿತವಾಗಿ ಸಂಬಂಧಪಟ್ಟ ಇಲಾಖೆಗೆ ರವಾನೆಯಾಗುತ್ತದೆ.
ಸಂಪೂರ್ಣ ಸುರಕ್ಷಿತ ಹಾಗೂ ಕಾಗದರಹಿತವಾಗಿರುವ ಈ ನೂತನ ಕಾವೇರಿ 2.0 ವ್ಯವಸ್ಥೆಯು ಸಾರ್ವಜನಿಕರ ಸಮಯವನ್ನು ಉಳಿಸುವುದಲ್ಲದೆ, ನೊಂದಣಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ತಂದಿದೆ ಎಂದು ನೊಂದಣಿ ಮತ್ತು ಮುದ್ರಾಂಕ ಇಲಾಖೆ ತಿಳಿಸಿದೆ.








