ಲಕ್ನೋ: ಇಲ್ಲಿನ ಐಶ್ಬಾಗ್ (Aishbagh) ರೈಲು ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನಿಗೆ ಸೀಟು ಸಿಗದ ಕಾರಣ ಆತ ರೈಲಿನಲ್ಲಿ ಬಾಂಬ್ ಇರುವ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ್ದು, ಇದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ ಹಾಗೂ ಹಲವು ತನಿಖಾ ಸಂಸ್ಥೆಗಳು ಜಂಟಿಯಾಗಿ ಸುರಕ್ಷತಾ ತಪಾಸಣೆ ನಡೆಸುವಂತೆ ಮಾಡಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ತೆಲಂಗಾಣ ನಿವಾಸಿ ಸೈನಿ ಜಾಕಿ (26) ಎಂದು ಗುರುತಿಸಲಾಗಿದ್ದು, ರೈಲಿನಲ್ಲಿ ಕೂರಲು ಜಾಗ ಸಿಗದ ಕಾರಣ ಆತ ಈ ರೀತಿ ಮಾಡಿದ್ದಾನೆ ಎಂದು ಲಕ್ನೋ ಪೊಲೀಸರು ತಿಳಿಸಿದ್ದಾರೆ.
ಬಾಂಬ್ ಕರೆಯ ಎಚ್ಚರಿಕೆ ಸಿಗುತ್ತಿದ್ದಂತೆ ಸ್ಥಳೀಯ ಪೊಲೀಸರು, ಸರ್ಕಾರಿ ರೈಲ್ವೆ ಪೊಲೀಸರು (GRP) ಮತ್ತು ಇತರ ಭದ್ರತಾ ಸಂಸ್ಥೆಗಳು ಸ್ಥಳಕ್ಕೆ ಧಾವಿಸಿ, ರೈಲು ಮತ್ತು ಅದರ ಎಲ್ಲಾ ಬೋಗಿಗಳನ್ನು ತೀವ್ರ ಶೋಧನೆಗೆ ಒಳಪಡಿಸಿದರು.
”ತಪಾಸಣೆಯ ಸಮಯದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ಸ್ಫೋಟಕ ಸಾಮಗ್ರಿ ಪತ್ತೆಯಾಗಿಲ್ಲ. ಬಾಂಬ್ ಕುರಿತು ಬಂದ ಮಾಹಿತಿ ಸಂಪೂರ್ಣವಾಗಿ ಸುಳ್ಳು ಎಂದು ತಿಳಿದುಬಂದಿದೆ,” ಎಂದು ಪೊಲೀಸರು ಹೇಳಿದ್ದಾರೆ.
ಬಬಳಿಕ ರೈಲು ಸುರಕ್ಷಿತವಾಗಿದೆ ಎಂದು ಘೋಷಿಸಿ, ತನ್ನ ಪ್ರಯಾಣವನ್ನು ಮುಂದುವರಿಸಲು ಅನುಮತಿ ನೀಡಲಾಯಿತು. ಆರೋಪಿಯನ್ನು ಜಿಆರ್ಪಿ (GRP) ವಶಕ್ಕೆ ಪಡೆದಿದ್ದು, ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ನೋದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ (IndiGo) ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ ಬಂದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ಆ ವಿಮಾನದ ಬೆದರಿಕೆಯಿಂದಾಗಿ ವಿಮಾನವು ಸುಮಾರು ಆರು ಗಂಟೆಗಳ ಕಾಲ ವಿಳಂಬವಾಗಿತ್ತು ಮತ್ತು ಭದ್ರತಾ ಸಂಸ್ಥೆಗಳು ಹೈ ಅಲರ್ಟ್ ಆಗಿರುವಾಗ ಪ್ರಯಾಣಿಕರಲ್ಲಿ ಭೀತಿ ಉಂಟಾಗಿತ್ತು.








