ಹುಬ್ಬಳ್ಳಿ: “ತ್ರಿಶೂಲವನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಲು ನೀಡುತ್ತಿಲ್ಲ. ಅದನ್ನು ನಿಮ್ಮ ವ್ಯಾನಿಟಿ ಬ್ಯಾಗ್ನಲ್ಲಿ ಇಟ್ಟುಕೊಂಡು ಓಡಾಡಿ. ನಿಮ್ಮ ಮೇಲೆ ಯಾರಾದರೂ ಆಕ್ರಮಣ ಮಾಡಲು ಬಂದರೆ, ಅದರಿಂದ ಅವರ ಹೊಟ್ಟೆಗೆ ಚುಚ್ಚಿ ಆತ್ಮರಕ್ಷಣೆ ಮಾಡಿಕೊಳ್ಳಿ” ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಆಯೋಜನೆಗೊಂಡಿದ್ದ ತ್ರಿಶೂಲ ದೀಕ್ಷಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆಯರು ತಮ್ಮ ರಕ್ಷಣೆಗೆ ಶಸ್ತ್ರ ಹೊಂದುವುದು ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದರು.
ಇದೇ ವೇಳೆ ಕಾನೂನು ಸುವ್ಯವಸ್ಥೆ ಮತ್ತು ಸರ್ಕಾರದ ನಡೆಗಳ ವಿರುದ್ಧ ಆಕ್ರೋಶ ಹೊರಹಾಕಿದ ಅವರು, “ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಭಗವಾನ್ ಎಂಬುವವರ ವಿರುದ್ಧ ಸರ್ಕಾರ ಯಾವುದೇ ಕೇಸ್ ದಾಖಲಿಸಿಲ್ಲ. ಆದರೆ ನಾವು ‘ಭಾರತ್ ಮಾತಾ ಕಿ ಜೈ’ ಎಂದರೆ ನಮಗೆ ನೋಟಿಸ್ ನೀಡಲಾಗುತ್ತದೆ. ನಾವು ಕೇವಲ ತ್ರಿಶೂಲ ದೀಕ್ಷೆ ನೀಡುವುದಕ್ಕೆ ಸೀಮಿತವಾಗುವುದಿಲ್ಲ, ಮುಂದಿನ ದಿನಗಳಲ್ಲಿ ತಲ್ವಾರ್ (ಖಡ್ಗ) ಗಳನ್ನೂ ವಿತರಿಸುತ್ತೇವೆ. ತಲ್ವಾರ್ ನೀಡುವುದನ್ನು ತಡೆಯುವ ಧೈರ್ಯ ಯಾರಿಗಾದರೂ ಇದ್ದರೆ ಬಂದು ತಡೆಯಲಿ” ಎಂದು ಬಹಿರಂಗ ಸವಾಲು ಹಾಕಿದರು.
ಬಸವಕಲ್ಯಾಣಕ್ಕೆ ಕಾಡಸಿದ್ದೇಶ್ವರ ಶ್ರೀಗಳ ಭೇಟಿಗೆ ವಿಧಿಸಲಾಗಿರುವ ನಿಷೇಧವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಮುತಾಲಿಕ್ ಒತ್ತಾಯಿಸಿದರು. “ಸರ್ಕಾರ ಕೇವಲ ಒಬ್ಬ ಸನ್ಯಾಸಿಯನ್ನು ನಿರ್ಬಂಧಿಸಿಲ್ಲ, ಬದಲಿಗೆ ಇಡೀ ಹಿಂದೂ ಸಮಾಜವನ್ನು ನಿರ್ಬಂಧಿಸಿದೆ” ಎಂದು ಕಿಡಿಕಾರಿದ ಅವರು, ಇತ್ತೀಚೆಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿದರು. “ಇದೇ ದೇಶದಲ್ಲಿ ಹುಟ್ಟಿ, ಇಲ್ಲಿನ ಅನ್ನವನ್ನೇ ತಿಂದು, ಇಂತಹ ದೇಶದ್ರೋಹಿ ಕೃತ್ಯ ಎಸಗುವವರನ್ನು ಸ್ಥಳದಲ್ಲೇ ಗುಂಡಿಕ್ಕಿ ಕೊಲ್ಲಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಇಸ್ಲಾಮಿಕ್ ಮತ್ತು ಕ್ರಿಶ್ಚಿಯನ್ ಮಾನಸಿಕತೆ ಹೆಚ್ಚಾಗುತ್ತಿರುವುದು ಹಿಂದೂ ಧರ್ಮಕ್ಕೆ ಅಪಾಯಕಾರಿ ಎಂದು ಮುತಾಲಿಕ್ ಎಚ್ಚರಿಸಿದರು. “ನಮ್ಮ ಧರ್ಮ ಮತ್ತು ನಂಬಿಕೆಗಳನ್ನು ಹಾಳು ಮಾಡುತ್ತಿರುವ ಬುದ್ಧಿಜೀವಿಗಳ ವಿರುದ್ಧ ನಾವು ನಿರಂತರವಾಗಿ ಹೋರಾಟ ಮಾಡುತ್ತೇವೆ. ಕ್ರಿಶ್ಚಿಯನ್ನರು ನಮ್ಮ ದೇಶವನ್ನು ಸುಮಾರು 200 ವರ್ಷಗಳ ಕಾಲ ಆಳಿದ್ದಾರೆ. ಪ್ರಸ್ತುತ ಅವರು ನಡೆಸುತ್ತಿರುವ ಆಸ್ಪತ್ರೆಗಳು, ಅನಾಥಾಶ್ರಮಗಳು ಕೇವಲ ತೋರಿಕೆಗಾಗಿ ಮಾತ್ರ. ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವುದೇ ಅವರ ನಿಜವಾದ ಮತ್ತು ಅಡಗಿರುವ ಮುಖ್ಯ ಉದ್ದೇಶವಾಗಿದೆ” ಎಂದು ಗಂಭೀರ ಆರೋಪ ಮಾಡಿದರು.
ಕೊನೆಯದಾಗಿ ಮುಸ್ಲಿಂ ಸಮುದಾಯದ ವಿರುದ್ಧವೂ ವಾಗ್ದಾಳಿ ನಡೆಸಿದ ಮುತಾಲಿಕ್, “ಮುಸ್ಲಿಮರು ನಮ್ಮ ದೇಶವನ್ನು ಮತ್ತೊಂದು ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ದೇಶದಲ್ಲಿ ನಮ್ಮ (ಹಿಂದೂಗಳ) ಜನಸಂಖ್ಯೆ ಕಡಿಮೆಯಾಗುತ್ತಿದ್ದರೆ, ಅವರ ಜನಸಂಖ್ಯೆ ತೀವ್ರವಾಗಿ ಹೆಚ್ಚಾಗುತ್ತಿದೆ. ದೇಶದಲ್ಲಿ ಪ್ರತಿ ವರ್ಷ ಸುಮಾರು 10 ಲಕ್ಷ ಹಿಂದೂ ಹೆಣ್ಣು ಮಕ್ಕಳು ಲವ್ ಜಿಹಾದ್ಗೆ ಬಲಿಯಾಗುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.
ಇದಕ್ಕಾಗಿ ‘ಶಹೀನ್’ ಹೆಸರಿನ ಮಹಿಳಾ ಗುಂಪೊಂದು ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಆರೋಪಿಸಿದ ಅವರು, “ಈ ಗುಂಪಿನ ಮಹಿಳೆಯರು ಮೊದಲು ಹಿಂದೂ ಯುವತಿಯರೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಾರೆ. ನಂತರ ಅವರನ್ನು ಪರಿಚಯಿಸಿಕೊಂಡು, ವ್ಯವಸ್ಥಿತವಾಗಿ ಬಲೆಗೆ ಬೀಳಿಸಿ ಲವ್ ಜಿಹಾದ್ ಜಾಲಕ್ಕೆ ತಳ್ಳುತ್ತಿದ್ದಾರೆ” ಎಂದು ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರಮೋದ್ ಮುತಾಲಿಕ್ ಸುದೀರ್ಘವಾಗಿ ಮಾತನಾಡಿದರು.








