ಭಾರತೀಯ ಸಿಬ್ಬಂದಿಗಳ ಸಾವಿನ ವಿಷಯದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಶನಿವಾರ ಅಮೆರಿಕವನ್ನು ತೀವ್ರವಾಗಿ ಟೀಕಿಸಿದ್ದಾರೆ. ಅಮೆರಿಕದ ಅಧಿಕೃತ ಪ್ರಕಟಣೆಯಲ್ಲಿ ಯಾವುದೇ ವಿಷಾದ ಅಥವಾ ಸಂತಾಪದ ಮಾತುಗಳು ಇಲ್ಲದಿರುವುದನ್ನು ಪ್ರಶ್ನಿಸಿರುವ ಅವರು, ವಾಷಿಂಗ್ಟನ್ನ ಈ ಪ್ರತಿಕ್ರಿಯೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
”ಅಮಾಯಕ ಭಾರತೀಯರ ಜೀವಹಾನಿಯ ಬಗ್ಗೆ ಯಾವುದೇ ವಿಷಾದ ಅಥವಾ ಸಂತಾಪದ ಅಭಿವ್ಯಕ್ತಿಯನ್ನು ಹೊಂದಿರದ ಅಮೆರಿಕದ ಈ ಅಧಿಕೃತ ಹೇಳಿಕೆಯನ್ನು ಓದಿದಾಗ ತೀವ್ರ ಆಘಾತವಾಯಿತು. ಒಬ್ಬ ‘ಮಿತ್ರ’ ಮತ್ತು ಕಾರ್ಯತಂತ್ರದ ಪಾಲುದಾರ ದೇಶವು ಇಷ್ಟೊಂದು ಕ್ರೂರವಾಗಿ ಸಂವೇದನಾ ರಹಿತವಾಗಿರಲು ಹೇಗೆ ಸಾಧ್ಯ?” ಎಂದು ತರೂರ್ ‘X’ ನಲ್ಲಿ ಬರೆದುಕೊಂಡಿದ್ದಾರೆ.
ಭಾರತೀಯ ನಾವಿಕರ ಕುರಿತು ಶಶಿ ತರೂರ್:
ಸಂಬಂಧಪಟ್ಟ ವಾಣಿಜ್ಯ ಹಡಗನ್ನು ತಡೆಯಲು ಪರ್ಯಾಯ ಮಾರ್ಗಗಳನ್ನು ಏಕೆ ಬಳಸಲಿಲ್ಲ ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.
”ಮಾತು ಕೇಳದ ವಾಣಿಜ್ಯ ಹಡಗನ್ನು ಮಾರಕವಲ್ಲದ ಇತರ ಮಾರ್ಗಗಳನ್ನು ಬಳಸಿ ಏಕೆ ತಡೆಯಲು ಸಾಧ್ಯವಾಗಲಿಲ್ಲ?” ಎಂದು ಅವರು ಕೇಳಿದ್ದಾರೆ.
ಮುಂದುವರಿದು ಅವರು, “ನಾಗರಿಕ ಸಿಬ್ಬಂದಿಯನ್ನು ಕೊಲ್ಲುವ ಉದ್ದೇಶದಿಂದ ಕ್ಷಿಪಣಿಗಳನ್ನು ಉಡಾಯಿಸುವ ಬದಲು, ಹಡಗಿನ ಇಂಜಿನ್ ಚಾಲನೆ (Propulsion) ಅಥವಾ ಸ್ಟೀರಿಂಗ್ ವ್ಯವಸ್ಥೆಯನ್ನು ಮಾತ್ರ ನಿಷ್ಕ್ರಿಯಗೊಳಿಸಲು ಸಾಧ್ಯವಿರಲಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಒಮಾನ್ ಕೊಲ್ಲಿಯಲ್ಲಿ ಅಮೆರಿಕ ಮಿಲಿಟರಿ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ ವಿಷಯವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಶನಿವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರ ಬಳಿ ಪ್ರಸ್ತಾಪಿಸಿದ್ದಾರೆ. ಇದೇ ವೇಳೆ, ತನ್ನ ಪ್ರಾದೇಶಿಕ ನೌಕಾ ದಿಗ್ಬಂಧನದ (Naval Blockade) ಉಲ್ಲಂಘನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ವಾಷಿಂಗ್ಟನ್ ದೃಢವಾಗಿ ಪ್ರತಿಪಾದಿಸಿದೆ.








