ಬೆಂಗಳೂರು: ಹಿಂದೂ ಧರ್ಮ ಹಾಗೂ ಶ್ರೀರಾಮನ ಕುರಿತು ಅವಹೇಳನಕಾರಿ ಮತ್ತು ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪ್ರಗತಿಪರ ಚಿಂತಕ, ಲೇಖಕ ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೆಚ್.ಎಂ. ಸುರೇಶ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎನ್ಸಿಆರ್ (Non-Cognizable Report) ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗೆ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ್ದ ಕೆ.ಎಸ್. ಭಗವಾನ್, ಹಿಂದೂ ದೇವತೆಗಳು ಮತ್ತು ಪುರಾಣಗಳ ಬಗ್ಗೆ ತೀವ್ರ ಆಕ್ಷೇಪಾರ್ಹ ಮಾತುಗಳನ್ನಾಡಿದ್ದರು. ಶ್ರೀರಾಮಚಂದ್ರನು ರಾಜ ದಶರಥನ ಮಗನೇ ಅಲ್ಲ. ದಶರಥನಿಗೆ ಶ್ರೀರಾಮ ಹುಟ್ಟಿದ್ದಲ್ಲ ಎಂದು ಹೇಳಿಕೆ ನೀಡಿದ್ದಾರೆ. ಪುತ್ರಕಾಮೇಷ್ಟಿ ಯಾಗದ ಸಂದರ್ಭದಲ್ಲಿ ರಾಣಿಯರ ಜೊತೆ ಮಲಗಬೇಕಿತ್ತು. ಹಾಗಾಗಿ ಶ್ರೀರಾಮನು ಪುರೋಹಿತರಿಗೆ ಹುಟ್ಟಿದವನು ಎಂಬ ಅರ್ಥದಲ್ಲಿ ವಿವಾದಾತ್ಮಕವಾಗಿ ಮಾತನಾಡಿದ್ದಾರೆ.ಹಿಂದೂ ಧರ್ಮದ ದೇವರುಗಳಿಗೆ ಯಾರೂ ಪೂಜೆ ಮಾಡಬಾರದು ಎಂದು ಅವರು ಕರೆ ನೀಡಿದ್ದಾರೆ.
ಕೆ.ಎಸ್. ಭಗವಾನ್ ಅವರು ಉದ್ದೇಶಪೂರ್ವಕವಾಗಿಯೇ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ಮತ್ತು ಸನಾತನ ಧರ್ಮವನ್ನು ಅವಹೇಳನ ಮಾಡುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಇದರಿಂದ ಸಮಾಜದಲ್ಲಿ ಶಾಂತಿ ಕದಡುವ ಸಾಧ್ಯತೆಯಿದೆ ಎಂದು ದೂರುದಾರರಾದ ಹೆಚ್.ಎಂ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.ಸದ್ಯ ಸಿ.ಕೆ. ಅಚ್ಚುಕಟ್ಟು ವಲಯದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.








