ಬೆಂಗಳೂರು : ಕಾಂಗ್ರೆಸ್ ಸರ್ಕಾರ ಬೆಂಗಳೂರಿನಲ್ಲಿ ಕಸ ಸಂಸ್ಕರಣೆ ಮಾಡುವ ನೆಪದಲ್ಲಿ 39,000 ಕೋಟಿ ರೂ. ಹಗರಣ ನಡೆಸಿದೆ. 35 ವರ್ಷಗಳ ಸುದೀರ್ಘ ಅವಧಿಗೆ ಎಂಎಸ್ಡಬ್ಲ್ಯು ಸೊಲ್ಯೂಶನ್ಸ್ ಲಿಮಿಟೆಡ್ಗೆ ನೀಡುತ್ತಿರುವ ಟೆಂಡರ್ನ ಒಟ್ಟು ಮೊತ್ತದಲ್ಲಿ 10,000 ಕೋಟಿ ರೂ. ಕಿಕ್ಬ್ಯಾಕ್ ಪಡೆಯಲಾಗಿದೆ ಎಂದು ಪ್ರತಿಪಕ್ಷ ಆರ್.ಅಶೋಕ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಸ್ವಚ್ಛತೆಯಲ್ಲಿ ಅತ್ಯುತ್ತಮ ನಗರ ಎಂಬ ಹೆಗ್ಗಳಿಕೆ ಬೆಂಗಳೂರಿಗೆ ಸಿಕ್ಕಿತ್ತು. ಈಗ ಬೆಂಗಳೂರು ಬೆಚ್ಚಿಬೀಳುವಂತಹ 39,000 ಕೋಟಿ ರೂ. ಹಗರಣವನ್ನು ಕಾಂಗ್ರೆಸ್ ಸರ್ಕಾರ ಕಸದ ಹೆಸರಲ್ಲಿ ಮಾಡಿದೆ. ದೇಶದ ಇತಿಹಾಸದಲ್ಲಿ ಕಸದಲ್ಲಿ ಲೂಟಿ ಮಾಡಿರುವ ಹಗರಣ ಇದೇ ಮೊದಲು. ಇದು ಹೈಕಮಾಂಡ್ನ ಕಪ್ಪ ಕಾಣಿಕೆ ಟೆಂಡರ್ ಆಗಿದೆ. ಪ್ರತಿ ವರ್ಷ ಬೆಂಗಳೂರಿನಲ್ಲಿ ಕಸ ಸಂಗ್ರಹ ಮತ್ತು ಸಾಗಣೆಗೆ 514 ಕೋಟಿ ರೂ. ಮತ್ತು ಸಂಸ್ಕರಣೆ ಮತ್ತು ವಿಲೇವಾರಿಗೆ 380 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. 11,000 ಪೌರಕಾರ್ಮಿಕರಿಗೆ ವರ್ಷಕ್ಕೆ 444 ಕೋಟಿ ರೂ. ಸಂಬಳ ನೀಡಲಾಗುತ್ತಿದೆ. ಎಲ್ಲ ಸೇರಿ ಸೇರಿ ವರ್ಷಕ್ಕೆ ಒಟ್ಟು 1,344 ಕೋಟಿ ರೂ. ಖರ್ಚಾಗುತ್ತದೆ ಎಂದು ತಿಳಿಸಿದರು.
ಜಿಬಿಎನಲ್ಲಿ ಈವರೆಗೆ ರಾಜ್ಯದ ಗುತ್ತಿಗೆದಾರರು ಕೆಲಸ ಮಾಡುತ್ತಿದ್ದರು. ಹೊಸ 39,000 ಕೋಟಿ ರೂ. ಮೊತ್ತದ ಟೆಂಡರ್ನ್ನು ದೆಹಲಿಯ ಕಂಪನಿಗೆ ನೀಡಿದ್ದು, ಇದರಲ್ಲಿ 10,000 ಕೋಟಿ ರೂ. ಕಿಕ್ಬ್ಯಾಕ್ ಇದೆ. ಸಾಮಾನ್ಯವಾಗಿ ಪ್ರತಿ ವರ್ಷ ಟೆಂಡರ್ ಮಾಡುತ್ತಿದ್ದರೆ, ಈ ಬಾರಿ 30 ವರ್ಷ ಹಾಗೂ ಇನ್ನೂ ವಿಸ್ತರಣೆಯ ಅವಕಾಶದ 5 ಸೇರಿ ಒಟ್ಟು 35 ವರ್ಷಕ್ಕೆ ದೆಹಲಿಯ ಎಂಎಸ್ಡಬ್ಲ್ಯು ಸೊಲ್ಯೂಶನ್ಸ್ ಲಿಮಿಟೆಡ್ ಅಥವಾ ರಾಮ್ಕಿ ಕಂಪನಿಗೆ ಟೆಂಡರ್ ನೀಡಲಾಗಿದೆ. ಬೆಂಗಳೂರು ಉತ್ತರ ಹಾಗೂ ದಕ್ಷಿಣಕ್ಕೆ ಎರಡು ಪ್ಯಾಕೇಜ್ ಮಾಡಲಾಗಿದೆ. ಇದಕ್ಕೂ ಮುನ್ನ ಸರ್ಕಾರಿ ಸ್ವಾಮ್ಯದ ರೈಟ್ಸ್ ಕಂಪನಿಯಿಂದ ಸಲಹೆ ಪಡೆದು, ಆ ಸಲಹೆಯನ್ನು ಕಸದ ಬುಟ್ಟಿಗೆ ಹಾಕಲಾಗಿದೆ. ಇದರ ಬದಲು ಮಾನ್ಯತೆ ಇಲ್ಲದ ಕಂಪನಿಗೆ ಸಲಹೆಗಾಗಿ ಅವಕಾಶ ನೀಡಲಾಗಿದೆ. ಈಗ ಕಸದ ಟೆಂಡರ್ನ್ನು ಎಂಎಸ್ಡಬ್ಲ್ಯು ಕಂಪನಿಗೆ ನೀಡಿ, 1,500 ಕೋಟಿ ಸಾಲ ಪಡೆಯಲು ಕೂಡ ಅವಕಾಶ ಕೊಡಲಾಗಿದೆ. ಇದಕ್ಕೆ ಜಮೀನನ್ನು ಕೂಡ ಸರ್ಕಾರದಿಂದಲೇ ನೀಡಲಾಗಿದೆ ಎಂದರು.
*950% ಅಧಿಕ ಶುಲ್ಕ*
ಸದ್ಯ ಪ್ರತಿ ಟನ್ಗೆ ಟಿಪ್ಪಿಂಗ್ ಶುಲ್ಕವಾಗಿ 260 ರೂ. ನೀಡಲಾಗುತ್ತಿದೆ. ಹೊಸ ಟೆಂಡರ್ನಂತೆ 2,400 ರೂ. ನೀಡುತ್ತಿದ್ದು, 950% ಅಧಿಕವಾಗಿದೆ. ಹಳೆ ವೆಚ್ಚದಲ್ಲೇ ಮುಂದುವರಿಸಿದರೆ 30 ವರ್ಷಕ್ಕೆ 6,117 ಕೋಟಿ ರೂ. ಆಗುತ್ತದೆ. ಹೊಸ ಟೆಂಡರ್ನಿಂದ ಈ ಖರ್ಚು 39,437 ಕೋಟಿ ರೂ. ಆಗುತ್ತಿದ್ದು, ಹೆಚ್ಚುವರಿಯಾಗಿ 33,320 ಕೋಟಿ ರೂ. ವೆಚ್ಚವಾಗುತ್ತದೆ. ಟೆಂಡರ್ ಪ್ರಕಾರ, ದಕ್ಷಿಣದ ಪ್ಯಾಕೇಜ್ನಲ್ಲಿ 19.43% ಹಾಗೂ ಉತ್ತರದ ಪ್ಯಾಕೇಜ್ನಲ್ಲಿ 19.25% ಅಧಿಕ ಮೊತ್ತ ನಮೂದಾಗಿದೆ. ಎರಡೂ ಪ್ಯಾಕೇಜ್ ಸೇರಿ ಒಟ್ಟಾಗಿ 19.33% ಹೆಚ್ಚಿದೆ ಎಂದರು.
ಮೊದಲೆರಡು ಬಾರಿ ಟೆಂಡರ್ ಕರೆದು ವಿಫಲವಾಗಿ ಮೂರನೇ ಬಾರಿಗೆ ದೆಹಲಿಯ ಎಂಎಸ್ಡಬ್ಲ್ಯು ಸೊಲ್ಯೂಶನ್ಸ್ ಲಿಮಿಟೆಡ್ ಅಥವಾ ರಾಮ್ಕಿ ಕಂಪನಿಗೆ (ಮಾತೃ ಸಂಸ್ಥೆ) ನೀಡಲಾಗಿದೆ. ಟೆಂಡರ್ ಪರಿಶೀಲನೆಯನ್ನು ಅಧಿಕಾರಿಗಳ ತಂಡಕ್ಕೆ ನೀಡಿದ್ದರೂ ಅದನ್ನು ಸರಿಯಾಗಿ ಪರಿಶೀಲಿಸಿಲ್ಲ. ಈ ಟೆಂಡರ್ ಪ್ರಕಾರ, ಒಂದು ಟನ್ ಸಂಸ್ಕರಣೆಯ ಖರ್ಚು 430% ಹೆಚ್ಚಲಿದೆ. ಈಗ ಟನ್ಗೆ 2,151 ರೂ. ಆಗಿದ್ದರೆ, 30 ವರ್ಷದ ನಂತರ 9,297 ರೂ. ಆಗುತ್ತದೆ. ಕಾನೂನು ಪ್ರಕಾರ ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕಿದ್ದರೂ, ಅದನ್ನು ಮಾಡದೆ ಅಕ್ರಮ ಎಸಗಲಾಗಿದೆ.
ಆರ್ಥಿಕ ಇಲಾಖೆಯಿಂದ ಎಚ್ಚರಿಕೆ
ಎರಡೂ ಪ್ಯಾಕೇಜ್ಗಳನ್ನು ಒಂದೇ ಕಂಪನಿಗೆ ನೀಡಿರುವುದು, 30 ವರ್ಷಗಳ ದೀರ್ಘ ಅವಧಿ, 5% ಹೆಚ್ಚಳ ಮೊದಲಾದ ಅಂಶಗಳ ಬಗ್ಗೆ ಹಣಕಾಸು ಇಲಾಖೆ ತಕರಾರರು ಎತ್ತಿದೆ. ಅವಧಿಯನ್ನು 10 ವರ್ಷಕ್ಕೆ ಇಳಿಸಿ, ಹೆಚ್ಚಿನ ಮೊತ್ತವನ್ನು 2.5% ಇಳಿಸಬೇಕು, ಇಲ್ಲವಾದರೆ ಜಿಬಿಎಗೆ ಮುಂದೆ ಹೊರೆಯಾಗುತ್ತದೆ ಎಂದು ಸಲಹೆ ನೀಡಲಾಗಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಮುಖ್ಯಮಂತ್ರಿಗೆ ಪತ್ರ ಬರೆದು, ಇದರಲ್ಲಿನ ಲೋಪಗಳನ್ನು ಎತ್ತಿ ತೋರಿಸಿದ್ದಾರೆ ಎಂದರು.
ರಾಮ್ಕಿ ಕಂಪನಿ ವಂಚನೆ ಮಾಡಿದೆ, ನಿಯಮಗಳನ್ನು ಉಲ್ಲಂಘಿಸಿದೆ ಎಂದು ವಿಶ್ವಬ್ಯಾಂಕ್ ಹೇಳಿದ್ದು, ಇದನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. 2016 ರಲ್ಲಿ ಬಿಬಿಎಂಪಿಯಿಂದಲೇ ರಾಮ್ಕಿ ಕಂಪನಿಯ ಗುತ್ತಿಗೆ ರದ್ದು ಮಾಡಲಾಗಿತ್ತು. ಇಷ್ಟಿದ್ದರೂ ಇದೇ ಕಂಪನಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಟೆಂಡರ್ ನೀಡಿದೆ ಎಂದರು.
ಸಿದ್ದರಾಮಯ್ಯ ರಾಜೀನಾಮೆ ನೀಡುವ ಮುನ್ನ ಇದನ್ನು ಸಂಪುಟಕ್ಕೆ ತಂದು ಅನುಮೋದನೆ ನೀಡಲಾಗಿದೆ. ಇದಕ್ಕಾಗಿ ಸಿದ್ದರಾಮಯ್ಯನವರಿಗೆ ದೆಹಲಿಯಿಂದ ಕರೆ ಬಂದಿತ್ತು. ಸಂಪುಟದಲ್ಲಿ ಸುಮಾರು 10 ಸಚಿವರು ಈ ಬಗ್ಗೆ ಗಲಾಟೆ ಮಾಡಿದ್ದರು. ಬೆಂಗಳೂರು ಚುನಾವಣೆಯಲ್ಲಿ ಇದು ಸಮಸ್ಯೆಯಾಗಲಿದೆ ಎಂದು ಸಚಿವರು ಹೇಳಿದಾಗ, ಇದು ಮೇಲಿನಿಂದ ಬಂದ ಸೂಚನೆ ಎಂದು ಸಿದ್ದರಾಮಯ್ಯ ಹೇಳಿದ್ದರು ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟೆಂಡರ್ ಪರಿಶೀಲನೆಗೆ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ನೇತೃತ್ವದ ಸಮಿತಿ ರಚಿಸಿದರೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅದನ್ನು ರದ್ದು ಮಾಡಿ, ಅಂಜುಮ್ ಪರ್ವೇಜ್ ಹಾಗೂ ಜಾಫರ್ ನೇತೃತ್ವದ ಸಮಿತಿ ರಚಿಸಿ ಕೇವಲ ಏಳು ದಿನಗಳ ಕಾಲಾವಕಾಶ ನೀಡಿದ್ದಾರೆ. ಕಸದಲ್ಲೂ ಕಾಸು ತೆಗೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿದ್ದು, ಅಕ್ರಮದ ವಾಸನೆ ಹರಡಿದೆ ಎಂದರು.
ಇದೇ ಕಾರಣಕ್ಕೆ ಬೆಂಗಳೂರಿನ ಹೊಣೆ ವಹಿಸಿಕೊಳ್ಳಲು ಸಚಿವರ ಮಧ್ಯೆ ಸ್ಪರ್ಧೆ ನಡೆದಿದೆ. ಕೂಡಲೇ ಈ ಟೆಂಡರ್ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯಪಾಲರಿಗೆ ದೂರಿನ ಪತ್ರ
ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಲೋಕಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಈ ಕುರಿತು ದೂರು ನೀಡಿದರು.
ಈ ಟೆಂಡರ್ ಪ್ರಕ್ರಿಯೆಯನ್ನು ತನಿಖೆಗೆ ಒಳಪಡಿಸಬೇಕು. ಟೆಂಡರ್ ಪಡೆದ, ಅರ್ಜಿ ಸಲ್ಲಿಸಿದ ಕಂಪನಿಗಳ ಅರ್ಹತೆ ಬಗ್ಗೆ ಪರಿಶೀಲನೆ ನಡೆಸಬೇಕು. ಡಿಪಿಆರ್ ಹಂತದಲ್ಲಾಗಿರುವ ಲೋಪವನ್ನು ತನಿಖೆ ಮಾಡಬೇಕು. ಟೆಂಡರ್ ಅನುಮೋದನೆಯಲ್ಲಾಗಿರುವ ಲೋಪಗಳನ್ನು ಪರಿಶೀಲಿಸಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.








