ನವದೆಹಲಿ: ದೆಹಲಿಯ ಮಾಲ್ವೀಯ ನಗರದಲ್ಲಿ ಬುಧವಾರ ನಡೆದ ಭೀಕರ ಅಗ್ನಿ ಅವಘಡದಲ್ಲಿ 13 ವಿದೇಶಿ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಶುಕ್ರವಾರ ಖಚಿತಪಡಿಸಿದೆ.
ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ತಮ್ಮ ಸಾಪ್ತಾಹಿಕ ಮಾಧ್ಯಮಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದು, ಮೃತರ ಕುಟುಂಬಗಳಿಗೆ ಅಗತ್ಯವಿರುವ ವೈದ್ಯಕೀಯ ನೆರವು, ದಾಖಲೆಗಳ ಪ್ರಕ್ರಿಯೆ ಮತ್ತು ಇತರ ಬೆಂಬಲವನ್ನು ಒದಗಿಸಲು ಆಯಾ ದೇಶಗಳ ರಾಯಭಾರ ಕಚೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ಘಟನೆಯಲ್ಲಿ ಸಾವನ್ನಪ್ಪಿದ 13 ವಿದೇಶಿ ಪ್ರಜೆಗಳ ವಿವರ ಹೀಗಿದೆ:
ಮೊಜಾಂಬಿಕ್ (1), ನೈಜೀರಿಯಾ (4), ಲೈಬೀರಿಯಾ (1), ಕಿರ್ಗಿಸ್ತಾನ (3), ಉಜ್ಬೇಕಿಸ್ತಾನ್ (1), ಬಾಂಗ್ಲಾದೇಶ (1), ಕಾಂಗೋ (1) ಮತ್ತು ಇರಾಕ್ (1).
ಈ ದುರಂತದ ಬಗ್ಗೆ ಕಂಬನಿ ಮಿಡಿದಿರುವ ಸಚಿವಾಲಯ, ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದೆ. ಈ ಘಟನೆಯಲ್ಲಿ ಸುಮಾರು 20 ರಿಂದ 22 ವಿದೇಶಿ ಪ್ರಜೆಗಳು ಗಾಯಗೊಂಡಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮಾಲ್ವೀಯ ನಗರದ ‘ಬೆಡ್-ಅಂಡ್-ಬ್ರೇಕ್ಫಾಸ್ಟ್’ ವಸತಿಗೃಹದಲ್ಲಿ ನಡೆದ ಈ ಅಗ್ನಿ ದುರಂತದಲ್ಲಿ ಒಟ್ಟು 21 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಹೋಟೆಲ್ ಸಹ-ಮಾಲೀಕ ಲವಕೇಶ್ ಬಜಾಜ್ನನ್ನು ಬಂಧಿಸಲಾಗಿದ್ದು, ಸಾಕೇತ್ ನ್ಯಾಯಾಲಯವು ಆತನನ್ನು ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಘಟನೆ ನಡೆದ ಮರುದಿನವೇ ಬಂಧಿಸಲ್ಪಟ್ಟ ಬಜಾಜ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅವನ ಮೇಲೆ ಕೊಲೆಗೆ ಸಮಾನವಲ್ಲದ ನರಹತ್ಯೆ, ಬೆಂಕಿಯಿಂದ ಅನಾಹುತ ಸೃಷ್ಟಿಸುವುದು, ಜೀವಕ್ಕೆ ಅಪಾಯ ತಂದೊಡ್ಡುವ ನಿರ್ಲಕ್ಷ್ಯ ಮತ್ತು ಇತರ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದೆ. ತನಿಖಾಧಿಕಾರಿಗಳು ಆಸ್ತಿಯ ಮಾಲೀಕತ್ವದ ರಚನೆಯನ್ನು ಪರಿಶೀಲಿಸುತ್ತಿದ್ದು, ಬಜಾಜ್ ಹಲವು ಹೋಟೆಲ್ ಉದ್ಯಮಗಳನ್ನು ನಡೆಸುತ್ತಿದ್ದು, ಅಗ್ನಿ ಅವಘಡ ಸಂಭವಿಸಿದ ಕಟ್ಟಡದ ಏಕೈಕ ಮಾಲೀಕನಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.








