ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಸಾಗರ ನಗರದಲ್ಲಿ ಹಣ್ಣುಗಳ ರಾಜ ಮಾವು ಹಾಗೂ ಮಲೆನಾಡಿನ ಹೆಮ್ಮೆ ಹಲಸಿನ ಹಣ್ಣಿನ ವಿವಿಧ ತಳಿಗಳು ಮತ್ತು ವಿಶಿಷ್ಟ ಖಾದ್ಯಗಳ ಜಾಗತಿಕ ಸವಿಯನ್ನು ಪರಿಚಯಿಸಲು ಅದ್ಧೂರಿ ಮೇಳವೊಂದು ಸಜ್ಜಾಗಿದೆ. ಲಯನ್ಸ್ ಕ್ಲಬ್ ಸಾಗರ (ಮಾದರಿ ಕ್ಲಬ್) ವಲಯ 1, ಪ್ರಾಂತ 8, ಜಿಲ್ಲೆ 317 ಸಿ ವತಿಯಿಂದ ‘ರಾಜರತ್ನ ಇವೆಂಟ್ಸ್’ ಹಾಗೂ ‘ಜನಸ್ನೇಹಿ ಇವೆಂಟ್ಸ್’ ಸಹಯೋಗದೊಂದಿಗೆ ಈ ವಿಶಿಷ್ಟ “ಹಲಸು ಮತ್ತು ಮಾವು ಮೇಳ”ವನ್ನು ನಾಳೆಯಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿದೆ.
ಜೂನ್ 5ರ ನಾಳೆಯಿಂದ ಜೂನ್.7ರವರೆಗೆ ಅಂದರೆ, ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಸಾಗರದ ಶ್ರೀ ರಾಘವೇಶ್ವರ ಭವನದಲ್ಲಿ ಈ ಮೇಳ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ. ಬೆಳಿಗ್ಗೆ 10:00 ಗಂಟೆಯಿಂದ ರಾತ್ರಿ 9:30 ರವರೆಗೆ ಸಾರ್ವಜನಿಕರು ಮೇಳಕ್ಕೆ ಭೇಟಿ ನೀಡಿ ವಿವಿಧ ಉತ್ಪನ್ನಗಳ ಸವಿಯನ್ನು ಸವಿಯಬಹುದಾಗಿದೆ.
ವೈವಿಧ್ಯಮಯ ಮೇಳಗಳ ಸಂಗಮ
ಈ ಬಾರಿಯ ಪ್ರದರ್ಶನವು ಕೇವಲ ಹಣ್ಣುಗಳಿಗಷ್ಟೇ ಸೀಮಿತವಾಗಿರದೆ, ಗ್ರಾಹಕರನ್ನು ಕೈಬೀಸಿ ಕರೆಯುವ ಹಲವು ಮೇಳಗಳನ್ನು ಒಂದೇ ಸೂರಿನಡಿ ಒಳಗೊಂಡಿದೆ. ವಿವಿಧ ತಳಿಯ ಹಲಸು ಮತ್ತು ಮಾವು ಮೇಳದ ಜೊತೆಗೆ, ಗುಡಿಗೈಗಾರಿಕೆ ಮತ್ತು ಸ್ವದೇಶಿ ವಸ್ತುಗಳ ಮೇಳ, ಕೃಷಿ ಉತ್ಪನ್ನಗಳ ಮೇಳ, ಆಯುರ್ವೇದಿಕ ಉತ್ಪನ್ನಗಳು ಹಾಗೂ ವಿವಿಧ ಬಗೆಯ ಆಹಾರ ಮೇಳಗಳನ್ನು ಇಲ್ಲಿ ಆಯೋಜಿಸಲಾಗಿದೆ. ಇದರೊಂದಿಗೆ ವಿಶೇಷ ಆಕರ್ಷಣೆಯಾಗಿ ಹಲಸಿನ ಹಣ್ಣಿನ ಜಿಲೇಬಿ ಹಾಗೂ ಹೋಳಿಗೆಯ ಲೈವ್ (Live) ಸ್ಟಾಲ್ಗಳು ಇರಲಿವೆ.
ನಾಲಿಗೆ ರುಚಿ ತಣಿಸಲಿವೆ ಬಗೆ ಬಗೆಯ ಖಾದ್ಯಗಳು
ಮೇಳದಲ್ಲಿ ಪ್ರಮುಖವಾಗಿ ಎಲ್ಲರ ಗಮನ ಸೆಳೆಯಲಿರುವುದು ಹಲಸಿನ ಹಣ್ಣಿನಿಂದ ತಯಾರಿಸಲಾದ ನೂರಾರು ಬಗೆಯ ಖಾದ್ಯಗಳು. ಆಹಾರ ಪ್ರಿಯರಿಗಾಗಿ ಮೇಳದಲ್ಲಿ ಲಭ್ಯವಿರುವ ಪ್ರಮುಖ ಖಾದ್ಯಗಳ ಪಟ್ಟಿ ಇಲ್ಲಿದೆ:
-
ಹಲಸಿನ ಪೋಡಿ
-
ಹಲಸಿನ ಕಡಬು
-
ಹಲಸಿನ ಕಟ್ಲೆಟ್
-
ಹಲಸಿನ ಕಬಾಬ್
-
ಹಲಸಿನ ಚಿಪ್ಸ್
-
ಹಲಸಿನ ಶೀರಾ
-
ಹಲಸಿನ ಕೇಕ್
-
ಹಲಸಿನ ಮಂಚೂರಿ
-
ಹಲಸಿನ ಪತ್ರೊಡೆ
-
ಹಲಸಿನ ಬೋಂಡಾ
-
ಹಲಸಿನ ಜಿಲೇಬಿ
-
ಹಲಸಿನ ಹೋಳಿಗೆ
-
ಹಲಸಿನ ಮುಳ್ಕ
-
ಹಲಸಿನ ಐಸ್ ಕ್ರೀಮ್
ಸ್ವದೇಶಿ ವಸ್ತುಗಳು ಮತ್ತು ಗೃಹ ಬಳಕೆಯ ಉತ್ಪನ್ನಗಳ ಪ್ರದರ್ಶನ
ಆಹಾರ ಪದಾರ್ಥಗಳಷ್ಟೇ ಅಲ್ಲದೆ ಗ್ರಾಹಕರಿಗೆ ನಿತ್ಯೋಪಯೋಗಿ ಮತ್ತು ಸಾಂಪ್ರದಾಯಿಕ ವಸ್ತುಗಳ ಖರೀದಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಮೇಳದಲ್ಲಿ ಖಾದಿ ಬಟ್ಟೆಗಳು, ಆಲಂಕಾರಿಕ ವಸ್ತುಗಳು, ಗೃಹಬಳಕೆಯ ವಸ್ತುಗಳು, ಗೋ ಉತ್ಪನ್ನಗಳು, ಬಗೆಬಗೆಯ ಉಪ್ಪಿನಕಾಯಿಗಳು, ಸುಂದರ ಶಿಲಾಮೂರ್ತಿಗಳು, ಬ್ಯೂಟಿ ಪ್ರಾಡಕ್ಟ್ಸ್ ಮತ್ತು ಬ್ಯಾಗ್ಗಳು, ಸದಾಭಿರುಚಿಯ ಪುಸ್ತಕಗಳು, ಸೀರೆಗಳು, ಆಟಿಕೆ ವಸ್ತುಗಳು, ಹಪ್ಪಳ ಮತ್ತು ಸಂಡಿಗೆಗಳು, ವಿವಿಧ ಮಸಾಲೆ ಉತ್ಪನ್ನಗಳು, ಆದಿವಾಸಿ ಹೇರ್ ಆಯಿಲ್ ಹಾಗೂ 1 ಗ್ರಾಂ ಗೋಲ್ಡ್ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ.
ರೈತರಿಗೆ ಬಗೆ ಬಗೆಯ ಸಸಿಗಳು ಲಭ್ಯ, ನಿಮ್ಮ ಹಳೆ ರೇಷ್ಮೆ ಸೀರೆ ಖರೀದಿ
ತಮ್ಮ ತೋಟಗಳನ್ನು ಹಸಿರಾಗಿಸಲು ಬಯಸುವ ಸಾರ್ವಜನಿಕರಿಗಾಗಿ ಹಲಸು, ಮಾವಿನ ಗಿಡಗಳು, ಹೂವಿನ ಗಿಡಗಳು, ತರಕಾರಿ ಬೀಜಗಳು ಹಾಗೂ ಅನೇಕ ಬಗೆಯ ಸಸಿಗಳು ಇಲ್ಲಿ ದೊರೆಯುತ್ತವೆ. ಇದರೊಂದಿಗೆ ಸಾರ್ವಜನಿಕರಿಗೆ ಮತ್ತೊಂದು ವಿಶೇಷ ಅವಕಾಶವಿದ್ದು, ಸಾರ್ವಜನಿಕರಿಂದ ಹಳೆಯ ಜರಿ (ರೇಷ್ಮೆ) ಸೀರೆಗಳನ್ನು ಸಂಗ್ರಹಿಸಿ ತಕ್ಷಣವೇ ಸೂಕ್ತ ನಗದು ಹಣವನ್ನು ನೀಡುವ ವ್ಯವಸ್ಥೆಯೂ ಇಲ್ಲಿದೆ. ಇಡೀ ಮೇಳದ ಆವರಣದಲ್ಲಿ ವಾಹನಗಳ ನಿಲುಗಡೆಗಾಗಿ ವಿಶಾಲವಾದ ಪಾರ್ಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
BIG NEWS: ಸಾರ್ವಜನಿಕರ ಕುಂದುಕೊರತೆ ಆಲಿಸಲು ಹೊಸ ಸಚಿವಾಲಯ ರಚನೆ: ಸಿಎಂ ಡಿ.ಕೆ ಶಿವಕುಮಾರ್ ಘೋಷಣೆ








