ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸತತ ಎರಡನೇ ಬಾರಿಗೆ ಐಪಿಎಲ್ ಮುಕುಟ ಮುಡಿಗೇರಿಸಿಕೊಂಡು ಹೊಸ ಇತಿಹಾಸ ಸೃಷ್ಟಿಸಿದೆ. ಆದರೆ, ಈ ಐತಿಹಾಸಿಕ ವಿಜಯದ ಮಹೋತ್ಸವದ ನಡುವೆಯೂ ಸಿಲಿಕಾನ್ ಸಿಟಿಯಲ್ಲಿ ಒಂದು ರೀತಿಯ ಮೌನ ಆವರಿಸಿದೆ. ಹೌದು, ಕಪ್ ಗೆದ್ದ ಸಂಭ್ರಮದ ನಡುವೆಯೇ ಇಡೀ ಆರ್ಸಿಬಿ ಬಳಗ ಕರಾಳ ದಿನವೊಂದನ್ನು ನೆನೆದು ಭಾವುಕವಾಗಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ದುರಂತಕ್ಕೆ ವರ್ಷ ತುಂಬು:
ಕಳೆದ ವರ್ಷ ಆರ್ಸಿಬಿ ತಂಡ ಚೊಚ್ಚಲ ಬಾರಿಗೆ ಟ್ರೋಫಿ ಗೆದ್ದಾಗ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಇತಿಹಾಸವೇ ಕಾಣದಂತಹ ವಿಜಯೋತ್ಸವ ನಡೆದಿತ್ತು. ಈ ವೇಳೆ ಉಂಟಾದ ಭೀಕರ ಜನದಟ್ಟಣೆ ಮತ್ತು ಕಾಲ್ತುಳಿತದ ದುರಂತದಲ್ಲಿ 11 ಜನ ಅಭಿಮಾನಿಗಳು ಉಸಿರು ಚೆಲ್ಲಿದ್ದರು. ಆ ಭೀಕರ ಘಟನೆ ನಡೆದು ಇಂದಿಗೆ ಸರಿಯಾಗಿ ಒಂದು ವರ್ಷ ಸಂದಿದೆ.
ರೋಡ್ ಶೋ, ಸಾರ್ವಜನಿಕ ಸಂಭ್ರಮಾಚರಣೆ ರದ್ದು!
ಆ ಕರಾಳ ದಿನದ ನೋವಿನ ನೆನಪಿನಲ್ಲಿ ಆರ್ ಸಿಬಿ ಮ್ಯಾನೇಜ್ ಮೆಂಟ್ ಈ ಬಾರಿ ಅತ್ಯಂತ ಜವಾಬ್ದಾರಿಯುತ ನಿರ್ಧಾರ ಕೈಗೊಂಡಿದೆ. ಸತತ ಎರಡನೇ ಬಾರಿ ಕಪ್ ಗೆದ್ದಿದ್ದರೂ ಸಹ ಯಾವುದೇ ರೀತಿಯ ರೋಡ್ ಶೋ ಅಥವಾ ಸಾರ್ವಜನಿಕ ವಿಜಯೋತ್ಸವಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. “ಅಭಿಮಾನಿಗಳೇ ನಮ್ಮ ಉಸಿರು, ಅವರ ಜೀವಕ್ಕಿಂತ ನಮಗೆ ಈ ಟ್ರೋಫಿ ದೊಡ್ಡದಲ್ಲ” ಎಂದು ಭಾವುಕವಾಗಿ ಹೇಳಿರುವ ಫ್ರಾಂಚೈಸಿ, ಈ ಬಾರಿಯ ಐಪಿಎಲ್ ಕಪ್ ಅನ್ನು ಆ 11 ಜನ ಮೃತ ಅಭಿಮಾನಿಗಳಿಗೆ ಅರ್ಪಿಸಿದೆ.
ಮೃತರ ನೆನಪಿನಲ್ಲಿ 11 ಶಾಶ್ವತ ಸೀಟುಗಳು ಮೀಸಲು!
ಆರ್ಸಿಬಿ ಮ್ಯಾನೇಜ್ಮೆಂಟ್ ಮೃತ ಅಭಿಮಾನಿಗಳಿಗೆ ವಿಶಿಷ್ಟ ಹಾಗೂ ಗೌರವಾನ್ವಿತ ನಮನ ಸಲ್ಲಿಸಿದೆ.
ಸೀಟುಗಳು ಖಾಲಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಸೀಟುಗಳನ್ನು ಮೃತರ ನೆನಪಿನಲ್ಲಿ ಕಾಯ್ದಿರಿಸಲಾಗಿದೆ.
ಟಿಕೆಟ್ ಮಾರಾಟವಿಲ್ಲ: ಇನ್ನು ಮುಂದೆ ನಡೆಯಲಿರುವ ಯಾವುದೇ ಐಪಿಎಲ್ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೂ ಈ 11 ಸೀಟುಗಳ ಟಿಕೆಟ್ ಗಳನ್ನು ಮಾರಾಟ ಮಾಡಲಾಗುವುದಿಲ್ಲ. ಇವು ಮೃತರ ಸದಾ ನೆನಪಿನಲ್ಲಿ ಖಾಲಿ ಇರಲಿವೆ.
ಒಂದು ನಿಮಿಷದ ಮೌನ: ಈ ಬಾರಿಯ ಉದ್ಘಾಟನಾ ಪಂದ್ಯದ ವೇಳೆ ಆರ್ಸಿಬಿ ಆಟಗಾರರು ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಮೃತಪಟ್ಟ ಅಭಿಮಾನಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ವಿಶೇಷವಾಗಿತ್ತು.








