ನವದೆಹಲಿ: ವಿವಾಹವಾದ ನಂತರವೂ ತಮ್ಮ ಪೋಷಕರನ್ನೇ ಆಶ್ರಯಿಸಿರುವ ಮಹಿಳೆಯರಿಗೆ ಸುಪ್ರೀಂ ಕೋರ್ಟ್ ಭಾರಿ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗ ಮೃತಪಟ್ಟರೆ, ಅವರ ಸ್ಥಾನದಲ್ಲಿ ನೀಡಲಾಗುವ ಅನುಕಂಪದ ಆಧಾರದ ನೇಮಕಾತಿಗೆ (Compassionate Appointment) ವಿವಾಹಿತ ಪುತ್ರಿಯರೂ ಅರ್ಹರು ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಲಿಂಗ ಸಮಾನತೆಯ ನಿಟ್ಟಿನಲ್ಲಿ ಈ ತೀರ್ಪು ಅತ್ಯಂತ ಮಹತ್ವದ್ದಾಗಿದ್ದು, ಹೆಣ್ಣುಮಕ್ಕಳ ಹಕ್ಕುಗಳನ್ನು ಎತ್ತಿಹಿಡಿದಿದೆ.
‘ವೈವಾಹಿಕ ಸ್ಥಿತಿ’ ತಾರತಮ್ಯಕ್ಕೆ ಕಾರಣವಾಗಬಾರದು
ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡುವಾಗ ವಿವಾಹಿತ ಪುತ್ರಿಯರನ್ನು ಪ್ರಕ್ರಿಯೆಯಿಂದ ಹೊರಗಿಡುವುದು ಸಂಪೂರ್ಣ ತಾರತಮ್ಯ ಮತ್ತು ಅಸಂವಿಧಾನಿಕ ಎಂದು ನ್ಯಾಯಾಲಯ ಹೇಳಿದೆ.
“ಒಬ್ಬ ವ್ಯಕ್ತಿಯ ವೈವಾಹಿಕ ಸ್ಥಿತಿಯು ಆಕೆಯ ಉದ್ಯೋಗದ ಅರ್ಹತೆಯನ್ನು ನಿರ್ಧರಿಸುವ ಮಾನದಂಡವಾಗಬಾರದು. ಇನ್ನು ಮುಂದೆ ವಿವಾಹಿತ ಪುತ್ರಿಯರೂ ಸಹ ಅನುಕಂಪದ ನೇಮಕಾತಿಗೆ ಸಮಾನವಾಗಿ ಅರ್ಹರಾಗಿದ್ದಾರೆ,” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮಹಿಳೆಯರ ಹಕ್ಕುಗಳ ಮೊಟಕುಗೊಳಿಸುವಂತಿಲ್ಲ
ಮದುವೆಯಾಗಿದೆ ಎಂಬ ಒಂದೇ ಒಂದು ಕಾರಣಕ್ಕಾಗಿ ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ವಿವಾಹವೆಂಬುದು ಒಬ್ಬ ಹೆಣ್ಣುಮಗಳ ಅರ್ಹತೆಯನ್ನಾಗಲಿ ಅಥವಾ ಆಕೆ ತನ್ನ ಪೋಷಕರ ಮೇಲೆ ಅವಲಂಬಿತವಾಗಿರುವ ಸ್ಥಿತಿಯನ್ನಾಗಲಿ ಬದಲಾಯಿಸುವುದಿಲ್ಲ. ಹೀಗಾಗಿ, ಇಂತಹ ನೇಮಕಾತಿಗಳಲ್ಲಿ ಪುತ್ರರಿಗೆ ಇರುವಷ್ಟೇ ಸಮಾನ ಅರ್ಹತೆ ವಿವಾಹಿತ ಪುತ್ರಿಯರಿಗೂ ಇರುತ್ತದೆ ಎಂದು ಕೋರ್ಟ್ ಹೇಳಿದೆ.
ಸರ್ಕಾರಗಳು ರೂಪಿಸಿರುವ ನಿಯಮಗಳಲ್ಲಿ ಕೇವಲ ‘ಅವಿವಾಹಿತ ಪುತ್ರಿಯರು’ ಮಾತ್ರ ಅರ್ಹರು ಎಂದು ನಮೂದಿಸುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಕಲ್ಯಾಣ ಯೋಜನೆಗಳ ಲಾಭವನ್ನು ನಿರಾಕರಿಸಲು ಮದುವೆಯು ಒಂದು ಕಾರಣವಾಗಬಾರದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಲಿಂಗ ಸಮಾನತೆಗೆ ಬಲ: ಪೋಷಕರ ಮೇಲೆ ಅವಲಂಬಿತರಾಗಿರುವ ವಿವಾಹಿತ ಮಹಿಳೆಯರಿಗೆ ಈ ತೀರ್ಪಿನಿಂದ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.
ನಿಯಮಗಳ ತಿದ್ದುಪಡಿ: ಸುಪ್ರೀಂ ಕೋರ್ಟ್ನ ಈ ಆದೇಶದಿಂದಾಗಿ, ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಸರ್ಕಾರಿ ಸಂಸ್ಥೆಗಳು ತಮ್ಮ ನಿಯಮಾವಳಿಗಳನ್ನು ಬದಲಾಯಿಸಬೇಕಾಗುತ್ತದೆ.
‘ಅವಿವಾಹಿತ’ ಪದಕ್ಕೆ ಕತ್ತರಿ: ಇನ್ನುಮುಂದೆ ನೇಮಕಾತಿ ನಿಯಮಗಳಿಂದ ‘ಅವಿವಾಹಿತ’ ಎಂಬ ಪದವನ್ನು ತೆಗೆದುಹಾಕಿ, ವಿವಾಹಿತ ಪುತ್ರಿಯರನ್ನೂ ಫಲಾನುಭವಿಗಳ ಪಟ್ಟಿಗೆ ಸೇರಿಸುವುದು ಕಡ್ಡಾಯವಾಗಲಿದೆ. ಪೋಷಕರು ಸೇವೆಯಲ್ಲಿದ್ದಾಗ ಮೃತಪಟ್ಟರೆ, ಅವರ ಕುಟುಂಬವನ್ನು ರಕ್ಷಿಸುವ ನಿಟ್ಟಿನಲ್ಲಿ ವಿವಾಹಿತ ಪುತ್ರಿಯರಿಗೂ ಇನ್ಮುಂದೆ ಈ ಉದ್ಯೋಗದ ಹಕ್ಕು ಸಿಗಲಿದೆ.








