ಶಿವಮೊಗ್ಗ: ರಾಜಕೀಯ ನಾಯಕರನ್ನು ಇಷ್ಟಪಡುವ, ಆರಾಧಿಸುವ ಅಭಿಮಾನಿಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಆದರೆ ಶಿವಮೊಗ್ಗ ಜಿಲ್ಲೆಯ ಸಾಗರದ ನಾಗರಾಜ್ ಗುಡ್ಡೇಮನೆ ಅವರ ಅಭಿಮಾನ ಮಾತ್ರ ನಿಜಕ್ಕೂ ವಿಶಿಷ್ಟ ಮತ್ತು ಅನನ್ಯ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲಿನ ಅಪ್ಪಟ ಅಭಿಮಾನದಿಂದಾಗಿ ನಾಗರಾಜ್ ಅವರು ತಮ್ಮ ಎರಡು ಕೈಗಳ ಭುಜಗಳ ಮೇಲೆ ಡಿ.ಕೆ.ಶಿ ಅವರ ಚಿತ್ರವನ್ನು ಟ್ಯಾಟೋ (ಹಚ್ಚೆ) ಹಾಕಿಸಿಕೊಳ್ಳುವ ಮೂಲಕ ತಮ್ಮ ಅಭಿಮಾನದ ಭಕ್ತಿಯನ್ನು ಮೆರೆದಿದ್ದಾರೆ.
8 ಗಂಟೆಗಳ ಕಾಲ ನೋವು ಭರಿಸಿ ಹಚ್ಚೆ!
ಡಿ.ಕೆ. ಶಿವಕುಮಾರ್ ಅವರು ಈ ಹಿಂದೆ ಇಡಿ (ED) ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲು ಸೇರಿ, ಬಳಿಕ ಬಿಡುಗಡೆಯಾದ ದಿನವೇ ನಾಗರಾಜ್ ಈ ಸಾಹಸಕ್ಕೆ ಕೈಹಾಕಿದ್ದರು. ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಜೈಲಿನಿಂದ ಬಿಡುಗಡೆಯಾದ ಅದೇ ದಿನದಂದು, ಸಾಗರದಲ್ಲಿ ನಾಗರಾಜ್ ಅವರು ಸತತ 8 ಗಂಟೆಗಳ ಕಾಲ ತೀವ್ರ ನೋವನ್ನು ಲೆಕ್ಕಿಸದೆ ತಮ್ಮ ಎರಡೂ ಭುಜಗಳ ಮೇಲೆ ನೆಚ್ಚಿನ ನಾಯಕನ ಚಿತ್ರವನ್ನು ಕೆತ್ತಿಸಿಕೊಂಡಿದ್ದಾರೆ. ಇವರ ಒಂದು ಭುಜದ ಮೇಲೆ ಪೇಟ ಸುತ್ತಿಕೊಂಡಿರುವ ಡಿಕೆಶಿ ಚಿತ್ರವಿದ್ದರೆ, ಮತ್ತೊಂದು ಭುಜದ ಮೇಲೆ ಗಡ್ಡ ಬಿಟ್ಟಿರುವ ಡಿ.ಕೆ. ಶಿವಕುಮಾರ್ ಅವರ ಆಕರ್ಷಕ ಚಿತ್ರವನ್ನು ಕಾಣಬಹುದಾಗಿದೆ. “ನನ್ನ ನಾಯಕನಿಗೆ ಇಂತಹ ಕಷ್ಟಗಳು ಮುಂದಿನ ದಿನಗಳಲ್ಲಿ ಎಂದೂ ಬಾರದಿರಲಿ” ಎನ್ನುವುದೇ ನಾಗರಾಜ್ ಅವರ ಪ್ರಾರ್ಥನೆಯಾಗಿದೆ.

ಸಿಎಂ ಆಗಲೆಂದು ಮೂರು ವರ್ಷಗಳಿಂದ ವ್ರತ!
ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬುದು ನಾಗರಾಜ್ ಅವರ ದೊಡ್ಡ ಕನಸು. ಈ ಸಂಕಲ್ಪದೊಂದಿಗೆ ಅವರು ಕಳೆದ ಸತತ ಮೂರು ವರ್ಷಗಳಿಂದ ಪ್ರತಿ ಗುರುವಾರ ತಪ್ಪದೇ ಸಾಗರದ ಪ್ರಸಿದ್ಧ ವರದಹಳ್ಳಿಯ ಶ್ರೀಧರ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ನಾಳೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಆ ಬಳಿಕ ಅವರ ಅಧಿಕಾರಾವಧಿಗೆ ಯಾವುದೇ ಅಡ್ಡಿ-ಆತಂಕಗಳು ಎದುರಾಗಬಾರದು ಎಂದು ನಾಗರಾಜ್ ಅವರು ತಮ್ಮ ಕುಟುಂಬ ಸಮೇತರಾಗಿ ಸಾಗರದ ಪ್ರಸಿದ್ಧ ಗಣಪತಿ ದೇವಸ್ಥಾನ, ಮಾರಿಕಾಂಬಾ ದೇವಸ್ಥಾನ ಹಾಗೂ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆಗಳನ್ನು ಸಲ್ಲಿಸಿದ್ದಾರೆ.
ಪತ್ನಿ, ಮಕ್ಕಳಿಂದಲೂ ಪೂರ್ಣ ಬೆಂಬಲ!
ಸಾಮಾನ್ಯವಾಗಿ ಗಂಡಂದಿರು ರಾಜಕೀಯ ನಾಯಕರ ಹಚ್ಚೆ ಹಾಕಿಸಿಕೊಂಡರೆ ಮನೆಯಲ್ಲಿ ವಿರೋಧ ವ್ಯಕ್ತವಾಗುವುದು ಸಹಜ. ಆದರೆ ನಾಗರಾಜ್ ಗುಡ್ಡೇಮನೆ ಅವರ ಪತ್ನಿ ಪಲ್ಲವಿ ಅವರಿಗೆ ಸಾರ್ವಜನಿಕರು ಈ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದರೂ, ಅವರು ನಗುಮುಖದಿಂದಲೇ ಉತ್ತರಿಸುತ್ತಾರೆ. ತನ್ನ ಪತಿಯ ಅಭಿಮಾನವನ್ನು ಹೆಮ್ಮೆಯಿಂದ ಕೊಂಡಾಡುವ ಪಲ್ಲವಿ, ಅವರ ಭಾವನೆಗೆ ಬೆಲೆ ನೀಡಿದ್ದಾರೆ. ಇನ್ನು ಇವರ ಪುತ್ರ ಆದರ್ಶ್ ಹಾಗೂ ಪುತ್ರಿ ಸಾನ್ವಿ ಕೂಡ ತಂದೆಯ ಈ ಅಪಾರ ರಾಜಕೀಯ ಅಭಿಮಾನಕ್ಕೆ ಬೆರಗಾಗಿ, ಸಂಪೂರ್ಣ ಸಾಥ್ ನೀಡಿದ್ದಾರೆ.

ನೆಚ್ಚಿನ ನಾಯಕನನ್ನು ಭೇಟಿಯಾಗುವ ಮಹದಾಸೆ
ಇಷ್ಟೆಲ್ಲಾ ಅಭಿಮಾನ ಹೊಂದಿರುವ ನಾಗರಾಜ್ ಗುಡ್ಡೇಮನೆ ಅವರು ಈವರೆಗೆ ಡಿ.ಕೆ. ಶಿವಕುಮಾರ್ ಅವರನ್ನು ಪ್ರತ್ಯಕ್ಷವಾಗಿ ಭೇಟಿಯಾಗಿಲ್ಲ ಎಂಬುದು ವಿಶೇಷ! ಹಲವು ಬಾರಿ ಭೇಟಿಗೆ ಪ್ರಯತ್ನಿಸಿದ್ದರೂ ಅದು ಸಾಧ್ಯವಾಗಿಲ್ಲ. ಒಮ್ಮೆಯಾದರೂ ಡಿ.ಕೆ.ಶಿವಕುಮಾರ್ ಅವರನ್ನು ಖುದ್ದಾಗಿ ಭೇಟಿಯಾಗಿ, ತಮ್ಮ ಎರಡೂ ಭುಜಗಳ ಮೇಲಿರುವ ಅವರದ್ದೇ ಚಿತ್ರದ ಹಚ್ಚೆಯನ್ನು ತೋರಿಸಬೇಕು ಎನ್ನುವುದು ನಾಗರಾಜ್ ಅವರ ಜೀವಮಾನದ ಮಹದಾಸೆಯಾಗಿದೆ.
ಇದರೊಂದಿಗೆ, ಡಿ.ಕೆ. ಶಿವಕುಮಾರ್ ಅವರು ಸಿಎಂ ಆದ ಬಳಿಕ ತಮ್ಮ ಕುಟುಂಬದೊಂದಿಗೆ ಸಾಗರದ ವರದಹಳ್ಳಿಯ ಶ್ರೀಧರ ಸ್ವಾಮಿ ಆಶ್ರಮಕ್ಕೆ ಆಗಮಿಸಿ ಪೂಜೆ ಸಲ್ಲಿಸಬೇಕು ಎಂಬ ವಿಶೇಷ ಹರಕೆಯನ್ನೂ ನಾಗರಾಜ್ ಮಾಡಿಕೊಂಡಿದ್ದಾರೆ. ತಮ್ಮ ಅಪ್ಪಟ ಅಭಿಮಾನಿಯ ಈ ಹರಕೆಯನ್ನು ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಈಡೇರಿಸುತ್ತಾರಾ? ಜೊತೆ ಜೊತೆಗೆ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿಯೇ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ತಮ್ಮ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆಯೂ ಮನವಿ ಮಾಡಿದ್ದಾರೆ. ಆ ಎಲ್ಲ ಆಸೆಯನ್ನು ಡಿ.ಕೆ ಶಿವಕುಮಾರ್ ಈಡೇರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ವಿಶೇಷ ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
Apple Eating Benefits: ಯಾವುದೇ ಕಾಯಿಲೆ ಹತ್ತಿರ ಸುಳಿಯಬಾರದೇ? ದಿನಕ್ಕೊಂದು ಈ ಹಣ್ಣು ತಿನ್ನಿ ಸಾಕು!








