ನವದೆಹಲಿ : ಭಾರತದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧ ಮತ್ತು ಹಸುವಿಗೆ ರಾಷ್ಟ್ರೀಯ ಪ್ರಾಣಿ ಸ್ಥಾನಮಾನ ನೀಡುವ ಕುರಿತು ಸೋಷಿಯಲ್ ಮೀಡಿಯಾ ಹಾಗೂ ಸಾರ್ವಜನಿಕ ವಲಯದಲ್ಲಿ ಆಗಾಗ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಈ ಎಲ್ಲಾ ಚರ್ಚೆಗಳಿಗೆ ಮತ್ತು ವದಂತಿಗಳಿಗೆ ಕೇಂದ್ರ ಸರ್ಕಾರ ಅಧಿಕೃತವಾಗಿ ತೆರೆ ಎಳೆದಿದೆ.
ದೇಶಾದ್ಯಂತ ಗೋಹತ್ಯೆಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡುವ ಅಥವಾ ಹಸುವನ್ನು ರಾಷ್ಟ್ರಪ್ರಾಣಿ ಎಂದು ಘೋಷಿಸುವ ಯಾವುದೇ ಆಲೋಚನೆ ಸದ್ಯಕ್ಕಂತೂ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಖಡಕ್ ಆಗಿ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕಾನೂನು ಸಚಿವರು, “ಹಸುವಿಗೆ ರಾಷ್ಟ್ರೀಯ ಪ್ರಾಣಿಯ ಗೌರವ ಸಿಗಬೇಕು ಮತ್ತು ಗೋಹತ್ಯೆ ನಿಲ್ಲಬೇಕು ಎಂದು ಹಲವು ಸಂಘಟನೆಗಳು ನಿರಂತರವಾಗಿ ಆಗ್ರಹಿಸುತ್ತಿರುವುದು ನಿಜ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ಸಚಿವ ಸಂಪುಟದ ಮುಂದೆ ಇಂತಹ ಯಾವುದೇ ಪ್ರಸ್ತಾವನೆ ಪರಿಶೀಲನೆಯಲ್ಲಿ ಇಲ್ಲ” ಎಂದು ತಿಳಿಸಿದರು.
ಗೋಹತ್ಯೆ ತಡೆಗೆ ಸಂಬಂಧಿಸಿದಂತೆ ಕಾನೂನು ರೂಪಿಸುವ ಸಂಪೂರ್ಣ ಹಕ್ಕು ಆಯಾ ರಾಜ್ಯ ಸರ್ಕಾರಗಳಿಗೆ ಸೇರಿದ್ದಾಗಿದೆ ಎಂದು ಸಚಿವರು ನೆನಪಿಸಿದರು. ಪ್ರತಿಯೊಂದು ರಾಜ್ಯದ ಸ್ಥಳೀಯ ಕಾನೂನು ಸುವ್ಯವಸ್ಥೆ, ಭೌಗೋಳಿಕ ಪರಿಸ್ಥಿತಿ ಮತ್ತು ಜನರ ಅಗತ್ಯತೆಗಳನ್ನು ಆಧರಿಸಿ ಅಲ್ಲಿನ ಸರ್ಕಾರಗಳು ಈ ಬಗ್ಗೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುತ್ತವೆ ಎಂದರು.
ಮುಸ್ಲಿಂ ಧರ್ಮಗುರುಗಳಿಂದಲೂ ಬೆಂಬಲ
ಇದೇ ವೇಳೆ ಒಂದು ಕುತೂಹಲಕಾರಿ ವಿಷಯವನ್ನು ಹಂಚಿಕೊಂಡ ಸಚಿವರು, “ಗೋಹತ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು ಎನ್ನುವ ವಿಚಾರಕ್ಕೆ ಕೇವಲ ಹಿಂದೂ ಸಂಘಟನೆಗಳು ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ಹಲವು ಮುಸ್ಲಿಂ ಸಂಘಟನೆಗಳು ಹಾಗೂ ಇಸ್ಲಾಂ ಧರ್ಮಗುರುಗಳು ಕೂಡ ಮುಕ್ತವಾಗಿ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.








