ಬೆಂಗಳೂರು : ಬೇಸಿಗೆ ರಜೆಯ ಮಜ ಮುಗಿಸಿ ವಿದ್ಯಾರ್ಥಿಗಳು ಮತ್ತೆ ಶಾಲೆಯತ್ತ ಹೆಜ್ಜೆ ಇಡಲು ಸನ್ನದ್ಧರಾಗಿದ್ದಾರೆ. ರಾಜ್ಯಾದ್ಯಂತ ಜೂನ್ 1ರಿಂದಲೇ 2026-27ನೇ ಶೈಕ್ಷಣಿಕ ವರ್ಷದ ಸರ್ಕಾರಿ ಶಾಲೆಗಳು ಅಧಿಕೃತವಾಗಿ ಆರಂಭಗೊಳ್ಳಲಿವೆ.
ಇಷ್ಟು ದಿನ ರಜೆಯ ಮೂಡ್ ನಲ್ಲಿದ್ದ ವಿದ್ಯಾರ್ಥಿಗಳನ್ನು ಡಿಜಿಟಲ್ ಜಗತ್ತಿನಿಂದ ಮತ್ತೆ ತರಗತಿಗಳತ್ತ ಆಕರ್ಷಿಸಲು ಶಿಕ್ಷಣ ಇಲಾಖೆ ಈ ಬಾರಿ ಮಹತ್ವದ ಹೆಜ್ಜೆ ಇಟ್ಟಿದೆ. ಸೋಮವಾರ ಶಾಲೆಗೆ ಬರುವ ಪುಟಾಣಿಗಳಿಗೆ ತೋರಣ ಕಟ್ಟಿ, ಹೂವು ಕೊಟ್ಟು, ಸಿಹಿ ತಿನ್ನಿಸಿ ಅತ್ಯಂತ ಪ್ರೀತಿಯಿಂದ ಬರಮಾಡಿಕೊಳ್ಳಲು ಶಾಲಾಭಿವೃದ್ಧಿ ಸಮಿತಿ (SDMC) ಹಾಗೂ ಶಿಕ್ಷಕರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಮಕ್ಕಳಲ್ಲಿ ಶಾಲೆಯ ಬಗ್ಗೆ ಭೀತಿ ಹೋಗಲಾಡಿಸಿ ಉತ್ಸಾಹ ತುಂಬಲು ಈ ಮೊದಲ ದಿನವನ್ನು “ಮಕ್ಕಳ ಹಬ್ಬ” ಎಂದು ಆಚರಿಸಲಾಗುತ್ತಿದೆ. ಶಾಲೆಗಳ ಆವರಣವನ್ನು ಈಗಾಗಲೇ ಸಿಂಗರಿಸಲಾಗಿದ್ದು, ಮೊದಲ ದಿನವೇ ಮಕ್ಕಳಿಗೆ ವಿಶೇಷ ಬಿಸಿಯೂಟದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಶೇ.90 ರಷ್ಟು ಪಠ್ಯಪುಸ್ತಕ ಸಪ್ಲೈ ಕಂಪ್ಲೀಟ್!
ಈ ಬಾರಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಕ್ಕಳಿಗೆ ಪುಸ್ತಕ ತಲುಪಿಸಲು ಸರ್ಕಾರ ವೇಗವಾಗಿ ಕೆಲಸ ಮಾಡಿದೆ. ಕರ್ನಾಟಕ ಪಠ್ಯಪುಸ್ತಕ ಸಂಘದ ಮಾಹಿತಿ ಪ್ರಕಾರ, ಒಟ್ಟು ಬೇಡಿಕೆ ಇದ್ದ 9.34 ಕೋಟಿ ಪುಸ್ತಕಗಳ ಪೈಕಿ ಈಗಾಗಲೇ 8.50 ಕೋಟಿಗೂ ಅಧಿಕ (ಶೇ. 90.77) ಪಠ್ಯಪುಸ್ತಕಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ. ಮೊದಲ ಭಾಗದ ಪುಸ್ತಕಗಳು ಬಹುತೇಕ ಎಲ್ಲಾ ಶಾಲೆಗಳನ್ನು ತಲುಪಿದ್ದು, ಅಲ್ಪಸಂಖ್ಯಾತ ಶಾಲೆಗಳ ಹಾಗೂ ಎರಡನೇ ಭಾಗದ ಕೆಲವೇ ಕೆಲವು ಪುಸ್ತಕಗಳ ವಿತರಣೆ ಮಾತ್ರ ಬಾಕಿ ಇದೆ ಎಂದು ಸಂಘದ ವ್ಯವಸ್ಥಾಪಕ ನಿರ್ದೇಶಕರಾದ ಮಾದೇಗೌಡರು ಸ್ಪಷ್ಟಪಡಿಸಿದ್ದಾರೆ.
ಮೊದಲ ದಿನವೇ ಯೂನಿಫಾರ್ಮ್
ಶಾಲೆಗೆ ಹೆಜ್ಜೆ ಇಡುತ್ತಿರುವ ವಿದ್ಯಾರ್ಥಿಗಳಿಗೆ ಮೊದಲ ದಿನವೇ ಒಂದು ಜೊತೆ ಹೊಸ ಸಮವಸ್ತ್ರ (Uniform) ಸಿಗಲಿದೆ. ಕಳೆದ ಸಾಲಿನ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದ ಮೇಲೆ ಈಗಾಗಲೇ ಬಟ್ಟೆಗಳನ್ನು ಪೂರೈಸಲಾಗಿದೆ. ಆದರೆ, ಶೂ ಮತ್ತು ಸಾಕ್ಸ್ ವಿತರಣೆಗೆ ಸಂಬಂಧಿಸಿದಂತೆ ಸರ್ಕಾರದ ಅಧಿಕೃತ ಆದೇಶ ಇನ್ನು ಹೊರಬೀಳಬೇಕಿರುವುದರಿಂದ, ಇವುಗಳನ್ನು ಪಡೆಯಲು ವಿದ್ಯಾರ್ಥಿಗಳು ಇನ್ನು ಕೆಲವು ದಿನ ಕಾಯಬೇಕಾಗಬಹುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಶಿಕ್ಷಕರ ಕೊರತೆಗೆ ಬ್ರೇಕ್: 40,067 ಅತಿಥಿ ಶಿಕ್ಷಕರ ನೇಮಕಾತಿ
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಓದಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಹತ್ವದ ನಿರ್ಧಾರ ತಳೆದಿದೆ. ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಖಾಲಿ ಹುದ್ದೆಗಳ ಭರ್ತಿಗೆ ಬರೋಬ್ಬರಿ 40,067 ಅತಿಥಿ ಶಿಕ್ಷಕರ ನೇಮಕಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಪ್ರಾಥಮಿಕ ಶಾಲೆಗಳು: 30,337 ಹುದ್ದೆಗಳ ಭರ್ತಿ
ಪ್ರೌಢ ಶಾಲೆಗಳು: 9,730 ಹುದ್ದೆಗಳ ಭರ್ತಿ
ಗೌರವ ಸಂಭಾವನೆ: ಮಾಸಿಕ 12,000 ರೂ.
ಗ್ರಾಮೀಣ ಭಾಗದ ಶಾಲೆಗಳು, ಶಿಕ್ಷಕರಿಲ್ಲದ ಏಕ ಶಿಕ್ಷಕ ಶಾಲೆಗಳು, ಕರ್ನಾಟಕ ಪಬ್ಲಿಕ್ ಶಾಲೆಗಳು (KPS) ಹಾಗೂ ಆದರ್ಶ ವಿದ್ಯಾಲಯಗಳಿಗೆ ಈ ನೇಮಕಾತಿಯಲ್ಲಿ ಮೊದಲ ಆದ್ಯತೆ ನೀಡಲಾಗಿದೆ. ಅದರಲ್ಲೂ ಹೈಸ್ಕೂಲ್ಗಳಲ್ಲಿ ಕಠಿಣ ವಿಷಯಗಳಾದ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ಬೋಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಜಾಗತಿಕ ಮಟ್ಟದಲ್ಲಿ (ಮಧ್ಯಪ್ರಾಚ್ಯದ ಯುದ್ಧದ ಪರಿಸ್ಥಿತಿ) ಎಲ್ಪಿಜಿ (LPG) ಕೊರತೆಯ ಭೀತಿ ಎದುರಾಗಿದ್ದರೂ, ಮಕ್ಕಳ ಬಿಸಿಯೂಟಕ್ಕೆ ಯಾವುದೇ ಅಡ್ಡಿಯಾಗದಂತೆ ಶಿಕ್ಷಣ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. ಯಾವುದೇ ಕಾರಣಕ್ಕೂ ಗ್ಯಾಸ್ ಸಿಲಿಂಡರ್ ಕೊರತೆಯಾಗದಂತೆ ಆದ್ಯತೆಯ ಮೇರೆಗೆ ಶಾಲೆಗಳಿಗೆ ಸರಬರಾಜು ಮಾಡಲು ಎಲ್ಲಾ ಜಿಲ್ಲೆಗಳ ಡಿಡಿಪಿಐ (DDPI) ಗಳಿಗೆ ಕಟ್ಟುನಿಟ್ಟಿನ ಹೈ-ಅಲರ್ಟ್ ಸೂಚನೆ ನೀಡಲಾಗಿದೆ.








