ಬಾಗಲಕೋಟೆ : ಹೆತ್ತ ತಾಯಿಯ ಮಮತೆ ಹಾಗೂ ಮಗಳ ಜನ್ಮಜನ್ಮಾಂತರದ ಅನುಬಂಧಕ್ಕೆ ಸಾಕ್ಷಿಯಾದ ಹೃದಯವಿದ್ರಾವಕ ಘಟನೆಯೊಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಸಂಭವಿಸಿದೆ. ನೂರು ವಸಂತಗಳನ್ನು ಕಂಡು ಇಹಲೋಕ ತ್ಯಜಿಸಿದ ಶತಾಯುಷಿ ತಾಯಿಯ ಸಾವಿನ ಆಘಾತಕ್ಕೆ ಒಳಗಾಗಿ 76 ವರ್ಷದ ವೃದ್ಧ ಮಗಳು ಕೂಡ ಕೊನೆಯುಸಿರೆಳೆದ ಕರುಣಾಜನಕ ಘಟನೆ ತೋದಲಬಾಗಿ ಗ್ರಾಮದಲ್ಲಿ ನಡೆದಿದೆ.
ಅಥಣಿ ತಾಲೂಕಿನ ಪಾರ್ಥನಹಳ್ಳಿಯ ನಿವಾಸಿಯಾದ ಗಂಗವ್ವ ಚನ್ನಬಸಪ್ಪ ಪಾರ್ಥನಹಳ್ಳಿ (101 ವರ್ಷ) ಎಂಬ ಶತಾಯುಷಿ ಮಾತೆ ಕಳೆದ ಶುಕ್ರವಾರ ವಯೋಸಹಜ ಕಾರಣಗಳಿಂದಾಗಿ ನಿಧನರಾಗಿದ್ದರು. ತಾಯಿಯ ಸಾವಿನ ವಾರ್ತೆ ತಿಳಿಯುತ್ತಿದ್ದಂತೆಯೇ, ಅಥಣಿಯ ಪಾರ್ಥನಹಳ್ಳಿಯಲ್ಲೇ ವಾಸವಿದ್ದ ಅವರ ಮಗಳು ಹಣಮವ್ವ ರಾಮು ಮುಜ ಗೋಣಿ (76 ವರ್ಷ) ತೀವ್ರ ಆಘಾತಕ್ಕೆ ಒಳಗಾಗಿದ್ದರು.
ತಮ್ಮ ಹೆತ್ತ ತಾಯಿಯ ಅಂತಿಮ ದರ್ಶನ ಪಡೆದು, ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹಣಮವ್ವ ಅವರು ಜಮಖಂಡಿ ತಾಲೂಕಿನ ತೋದಲಬಾಗಿ ಗ್ರಾಮಕ್ಕೆ ಧಾವಿಸಿದ್ದರು. ಆದರೆ ಅಲ್ಲಿಗೆ ತಲುಪಿದಾಗ ತಾಯಿಯ ಪಾರ್ಥಿವ ಶರೀರವನ್ನು ಕಂಡು ಅವರ ದುಃಖ ಆಣೆಕಟ್ಟೆ ಒಡೆದಂತೆ ಉಕ್ಕಿ ಹರಿದಿದೆ. ತೀವ್ರ ಮಾನಸಿಕ ಆಘಾತ ಹಾಗೂ ಶೋಕವನ್ನು ತಡೆಯಲಾಗದೆ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಸುನೀಗಿದ ಹಣಮವ್ವ ಅವರ ಈ ಸಾವು ನೆರೆದಿದ್ದ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.
ಶುಕ್ರವಾರ ತಾಯಿ ಗಂಗವ್ವ ನಿಧನರಾದರೆ, ಶನಿವಾರದ ವೇಳೆಗೆ ತಾಯಿಯ ಅಗಲಿಕೆಯ ಶೋಕದಲ್ಲಿ ಮಗಳು ಹಣಮವ್ವ ಕೂಡ ಮೃತಪಟ್ಟಿರುವುದು ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಮೂಡಿಸಿದೆ. ಇಬ್ಬರ ಅಂತ್ಯಕ್ರಿಯೆಯನ್ನು ಸಕಲ ವಿಧಿವಿಧಾನಗಳೊಂದಿಗೆ ಶನಿವಾರದಂದು ನೆರವೇರಿಸಲಾಗಿದೆ.








