ರಾಮನಗರ: ರಾಜಕೀಯದಲ್ಲಿ ನಾಯಕರಿಗಾಗಿ ಅಭಿಮಾನಿಗಳು ಪ್ರಾಣ ಕೊಡುವುದನ್ನು ಕೇಳಿದ್ದೇವೆ, ಇಲ್ಲವೇ ದೇವಸ್ಥಾನಗಳಿಗೆ ನಡೆದುಕೊಂಡು ಹೋಗಿ ಹರಕೆ ಹೊರುವುದನ್ನು ನೋಡಿದ್ದೇವೆ. ಆದರೆ, ಕನಕಪುರ ಬಂಡೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಬೇಕು ಎಂದು ಅವರ ಅಭಿಮಾನಿಯೊಬ್ಬರು ಕಳೆದ ಮೂರು ವರ್ಷಗಳಿಂದ ಕ್ಷೌರವೇ ಮಾಡಿಸಿಕೊಳ್ಳದೆ ವಿಶಿಷ್ಟ ಶಪಥ ಮಾಡಿದ್ದ ರೋಚಕ ಕಥೆಯೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಇತ್ತೀಚೆಗಷ್ಟೇ ಡಿಕೆಶಿ ಸಿಎಂ ಆಗುವವರೆಗೂ ಕಾಲಿಗೆ ಚಪ್ಪಲಿ ಹಾಕಲ್ಲ ಎಂದು ಹರಕೆ ಹೊತ್ತಿದ್ದ ಅಭಿಮಾನಿಯೊಬ್ಬರ ಸುದ್ದಿ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಈಗ ಮತ್ತೊಬ್ಬ ಅಪ್ಪಟ ಅಭಿಮಾನಿಯ ಅಪರೂಪದ ಭಕ್ತಿ ಮುನ್ನೆಲೆಗೆ ಬಂದಿದೆ.
ಯಾರು ಈ ಅಪ್ಪಟ ಅಭಿಮಾನಿ? ಏನಿದು ಶಪಥ?
ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಚಿಕ್ಕಸಾದೇನಹಳ್ಳಿ ಗ್ರಾಮದ ಈಶ್ವರಪ್ಪ ಎಂಬುವವರೇ ಈ ವಿಶಿಷ್ಟ ಅಭಿಮಾನಿ. ತನಗಾಗಿ ಆಸ್ತಿ-ಅಂತಸ್ತು ಮಾಡಿಕೊಳ್ಳುವುದಕ್ಕಿಂತ, ತನ್ನ ನೆಚ್ಚಿನ ನಾಯಕ ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಗಾದಿ ಏರಬೇಕು ಎಂಬುದೇ ಈಶ್ವರಪ್ಪ ಅವರ ಬದುಕಿನ ಏಕೈಕ ಆಸೆಯಾಗಿತ್ತು. ಇದೇ ಕಾರಣಕ್ಕೆ, “ಡಿಕೆಶಿ ರಾಜ್ಯದ ಸಿಎಂ ಆಗುವವರೆಗೂ ನಾನು ತಲೆಗೂದಲು ಮತ್ತು ಗಡ್ಡವನ್ನು ಕತ್ತರಿಸುವುದಿಲ್ಲ” ಎಂದು ಕಳೆದ 3 ವರ್ಷಗಳ ಹಿಂದೆಯೇ ಇವರು ಕಠಿಣ ಪ್ರತಿಜ್ಞೆ ಮಾಡಿದ್ದರು.
ತ್ರಿವೇಣಿ ಸಂಗಮದಲ್ಲಿ ಡಿಕೆಶಿ ಫೋಟೋ ಹಿಡಿದು ಪೂಜೆ!
ಈಶ್ವರಪ್ಪ ಅವರ ಅಭಿಮಾನ ಕೇವಲ ಗಡ್ಡ-ಕೂದಲು ಬಿಡುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆದ ಪವಿತ್ರ ಕುಂಭಮೇಳದ ಸಂದರ್ಭದಲ್ಲಿ, ಅಲ್ಲಿನ ಪ್ರಸಿದ್ಧ ತ್ರಿವೇಣಿ ಸಂಗಮದಲ್ಲಿ ಡಿ.ಕೆ ಶಿವಕುಮಾರ್ ಅವರ ಭಾವಚಿತ್ರವನ್ನು ಕೈಯಲ್ಲಿ ಹಿಡಿದು, ಅವರು ಶೀಘ್ರದಲ್ಲೇ ಕರುನಾಡಿನ ಮುಖ್ಯಮಂತ್ರಿಯಾಗಲಿ ಎಂದು ಈಶ್ವರಪ್ಪ ವಿಶೇಷ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಿ ಅಂದೇ ಎಲ್ಲರ ಗಮನ ಸೆಳೆದಿದ್ದರು.
ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ಹರಕೆ ಮುಡಿಪು!
ಕಳೆದ ಮೂರು ವರ್ಷಗಳಿಂದ ದಟ್ಟವಾದ ಗಡ್ಡ-ಕೂದಲಿನೊಂದಿಗೆ ತಪಸ್ವಿಯಂತೆ ಕಾಣುತ್ತಿದ್ದ ಈಶ್ವರಪ್ಪ ಅವರ ಸುದೀರ್ಘ ಕಾಯುವಿಕೆಗೆ ಕೊನೆಗೂ ಕಾಲಭೈರವೇಶ್ವರ ಹಾಗೂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ಕೃಪೆ ತೋರಿದ್ದಾರೆ. ತಮ್ಮ ಕನಸು ನನಸಾಗುತ್ತಿರುವ ಹಿನ್ನೆಲೆಯಲ್ಲಿ ಸಂತಸ ಹಂಚಿಕೊಂಡಿರುವ ಈಶ್ವರಪ್ಪ, “ಡಿ.ಕೆ ಶಿವಕುಮಾರ್ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಬೆಂಗಳೂರಿಗೆ ಹೋಗಿ ಅವರನ್ನು ನೇರವಾಗಿ ಭೇಟಿಯಾಗಿ ಶುಭ ಕೋರುತ್ತೇನೆ. ಅದಾದ ಬಳಿಕ ನೇರವಾಗಿ ಮಂತ್ರಾಲಯಕ್ಕೆ ತೆರಳಿ ಶ್ರೀ ಗುರು ರಾಯರ ಸನ್ನಿಧಿಯಲ್ಲಿ ನನ್ನ ಮುಡಿಕೊಟ್ಟು (ಕೂದಲು ಮತ್ತು ಗಡ್ಡ ತೆಗೆಸಿ) ಹರಕೆ ತೀರಿಸಲಿದ್ದೇನೆ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಸದ್ಯ ಡಿಕೆಶಿ ಮೇಲಿನ ಈಶ್ವರಪ್ಪ ಅವರ ಈ ನಿಸ್ವಾರ್ಥ ಅಭಿಮಾನದ ವಿಡಿಯೋ ಹಾಗೂ ಫೋಟೋಗಳು ಇಂಟರ್ನೆಟ್ನಲ್ಲಿ ಸಖತ್ ಟ್ರೆಂಡ್ ಸೃಷ್ಟಿಸುತ್ತಿದ್ದು, ನೆಟ್ಟಿಗರು ಈ ಅಪ್ಪಟ ಅಭಿಮಾನಿಯ ನಿಷ್ಠೆಗೆ ಫಿದಾ ಆಗಿದ್ದಾರೆ.








