ಬೆಂಗಳೂರು : ವಿದ್ಯುತ್ ನಮ್ಮ ದಿನನಿತ್ಯದ ಬದುಕಿನ ಅವಿಭಾಜ್ಯ ಅಂಗ. ಆದರೆ, ಅಲ್ಪಸ್ವಲ್ಪ ಅಜಾಗರೂಕತೆ ವಹಿಸಿದರೂ ಇದು ಪ್ರಾಣಕ್ಕೆ ಕುತ್ತು ತರಬಲ್ಲದು. ಹೀಗಾಗಿಯೇ ಸಾರ್ವಜನಿಕರ ಜೀವ ಮತ್ತು ಆಸ್ತಿಪಾಸ್ತಿ ರಕ್ಷಣೆಯ ಹಿತದೃಷ್ಟಿಯಿಂದ ಮಡಿಕೇರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಅವರು ವಿದ್ಯುತ್ ಸುರಕ್ಷತೆಗೆ ಸಂಬಂಧಿಸಿದಂತೆ ಮಹತ್ವದ ಮುನ್ನೆಚ್ಚರಿಕಾ ಕ್ರಮಗಳನ್ನು ಪ್ರಕಟಿಸಿದ್ದಾರೆ.
ಮನೆ, ಕಚೇರಿ, ಕೈಗಾರಿಕೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ಅಪಘಾತಗಳನ್ನು ತಡೆಗಟ್ಟಲು ಪಾಲಿಸಲೇಬೇಕಾದ ಪ್ರಮುಖ ನಿಯಮಗಳು ಇಲ್ಲಿವೆ:
1. ಮನೆ ಬಳಕೆ ಗ್ರಾಹಕರು ನೆನಪಿನಲ್ಲಿಡಬೇಕಾದ ಅಂಶಗಳು
ಪರಿಣತರ ಸೇವೆ: ವೈರಿಂಗ್ ಅಥವಾ ಯಾವುದೇ ಸಣ್ಣ ವಿದ್ಯುತ್ ಕೆಲಸವಿದ್ದರೂ ನೀವೇ ಕೈಹಾಕಬೇಡಿ. ಸರ್ಕಾರದಿಂದ ಮಾನ್ಯತೆ ಪಡೆದ ಎಲೆಕ್ಟ್ರಿಷಿಯನ್ಗಳ ಮೂಲಕವೇ ಕೆಲಸ ಮಾಡಿಸಿ.
ಗುಣಮಟ್ಟದ ವಸ್ತುಗಳು: ಯಾವಾಗಲೂ ಐಎಸ್ಐಸ (ISI) ಮುದ್ರೆ ಇರುವ ವೈರ್, ಕೇಬಲ್ ಹಾಗೂ ಸ್ವಿಚ್ಗಳನ್ನೇ ಬಳಸಿ.
ಅರ್ಥಿಂಗ್ ಮತ್ತು ಆರ್ಸಿಡಿ: ಮನೆಗೆ ಸಮರ್ಪಕವಾದ ಅರ್ಥಿಂಗ್ (ಭೂಸಂಪರ್ಕ) ಕಲ್ಪಿಸಿ. ವಿದ್ಯುತ್ ಸೋರಿಕೆಯಿಂದ ತಕ್ಷಣ ರಕ್ಷಣೆ ಪಡೆಯಲು ‘ಆರ್ಸಿ ಡಿ’ (RCD) ಸಾಧನವನ್ನು ಅಳವಡಿಸಿ.
ಹೆವಿ ಲೋಡ್ ಉಪಕರಣಗಳು: ಫ್ರಿಡ್ಜ್, ವಾಷಿಂಗ್ ಮಷಿನ್, ಗೀಸರ್, ಮಿಕ್ಸಿ ಮುಂತಾದ ಗೃಹಬಳಕೆ ಸಾಧನಗಳಿಗೆ ಕಡ್ಡಾಯವಾಗಿ 3-ಪಿನ್ ಪ್ಲಗ್ ಸಾಕೆಟ್ ಬಳಸಿ, ಮೂರನೇ ಪಿನ್ಗೆ ಅರ್ಥಿಂಗ್ ಕನೆಕ್ಷನ್ ನೀಡಿ.
ಮಕ್ಕಳ ಸುರಕ್ಷತೆ: ಸ್ವಿಚ್ ಬೋರ್ಡ್ಗಳನ್ನು ಮಕ್ಕಳ ಕೈಗೆ ಸಿಗದಂತೆ ಎತ್ತರದಲ್ಲಿ ಅಳವಡಿಸಿ. ಬಳಸದ ಸಾಕೆಟ್ಗಳಿಗೆ ಡಮ್ಮಿ ಕ್ಯಾಪ್ ಹಾಕಿ ಮುಚ್ಚಿ.
ಒದ್ದೆ ಕೈ ಬೇಡ: ಯಾವುದೇ ಕಾರಣಕ್ಕೂ ಹಸಿ ಹಸ್ತಗಳಿಂದ ಸ್ವಿಚ್ಗಳನ್ನು ಮುಟ್ಟಬೇಡಿ. ಪ್ಲಗ್ ಹಾಕುವಾಗ ಅಥವಾ ತೆಗೆಯುವಾಗ ಮೊದಲು ಸ್ವಿಚ್ ಆಫ್ ಮಾಡಿ. ವೈರ್ ಹಿಡಿದು ಜಗ್ಗಬೇಡಿ, ಪ್ಲಗ್ ಹಿಡಿದೇ ಹೊರತೆಗೆಯಿರಿ.
ಓವರ್ಲೋಡ್ ಮಾಡಬೇಡಿ: ಒಂದೇ ಎಕ್ಸ್ಟೆನ್ಷನ್ ಬೋರ್ಡ್ಗೆ ಹಲವು ಹೆವಿ ವೈರ್ಗಳನ್ನು ಜೋಡಿಸಿ ಲೋಡ್ ಜಾಸ್ತಿ ಮಾಡಬೇಡಿ. ಹಾನಿಗೊಳಗಾದ ವೈರ್ಗಳಿಗೆ ತಕ್ಷಣ ಇನ್ಸುಲೇಟೆಡ್ ಟೇಪ್ ಸುತ್ತಿ ಅಥವಾ ಬದಲಾಯಿಸಿ.
2. ಇವುಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ!
ಬಲ್ಬ್ ಫ್ಯೂಸ್ ಹೋಗಿದ್ದರೆ, ಸ್ವಿಚ್ ಆಫ್ ಮಾಡದೇ ಅದನ್ನು ಬದಲಾಯಿಸಲು ಹೋಗಬೇಡಿ.
ಬಟ್ಟೆ ಒಣಗಿಸಲು ಅಥವಾ ಟಿವಿ ಆಂಟೆನಾ ಕಟ್ಟಲು ವಿದ್ಯುತ್ ಕಂಬಗಳನ್ನಾಗಲಿ, ಅವುಗಳ ಸ್ಟೇ ವೈರ್ಗಳನ್ನಾಗಲಿ ಬಳಸಬೇಡಿ.
ಕರೆಂಟ್ ಕಂಬಗಳಿಗೆ ಜಾನುವಾರುಗಳನ್ನು ಕಟ್ಟುವುದನ್ನು ಸಂಪೂರ್ಣವಾಗಿ ನಿಲ್ಲಿಸಿ.
3. ಸಾರ್ವಜನಿಕ ಸ್ಥಳಗಳಲ್ಲಿನ ಜಾಗರೂಕತೆ
ಹಬ್ಬ ಹಾಗೂ ಜಾತ್ರೆಗಳು: ರಸ್ತೆಗಳಲ್ಲಿ ದೊಡ್ಡ ರಥ ಅಥವಾ ಉತ್ಸವಗಳನ್ನು ಸಾಗಿಸುವ ಮುನ್ನ ಸ್ಥಳೀಯ ವಿದ್ಯುತ್ ಇಲಾಖೆಯ ನೆರವು ಪಡೆದುಕೊಳ್ಳಿ.
ವಾಹನಗಳ ಸಂಚಾರ: ವಿದ್ಯುತ್ ಲೈನ್ಗಳಿಗಿಂತ ಎತ್ತರವಿರುವ ಲಾರಿ, ಎತ್ತಿನಗಾಡಿ ಅಥವಾ ಏಣಿಗಳನ್ನು ಲೈನ್ಗಳ ಕೆಳಗೆ ಸಾಗಿಸುವಾಗ ಎಚ್ಚರವಿರಲಿ.
ಅಂತರ ಕಾಯ್ದುಕೊಳ್ಳಿ: ವಿದ್ಯುತ್ ಕಂಬಗಳಿಗೆ ಪೆಂಡಾಲ್ ಅಥವಾ ಜಾಹೀರಾತು ಬೋರ್ಡ್ಗಳನ್ನು ಕಟ್ಟಬೇಡಿ. ಟ್ರಾನ್ಸ್ಫಾರ್ಮರ್ ಕೇಂದ್ರಗಳ ಬಳಿ ಮೂತ್ರ ವಿಸರ್ಜನೆ ಮಾಡಬೇಡಿ ಹಾಗೂ ಅದರ ತಂತಿ ಬೇಲಿಯನ್ನು ಹತ್ತಬೇಡಿ.
ಮರ ಕಡಿಯುವ ಮುನ್ನ: ಕರೆಂಟ್ ಲೈನ್ ಪಕ್ಕದಲ್ಲಿರುವ ಮರದ ಕೊಂಬೆ ಕತ್ತರಿಸುವಾಗ ಅಥವಾ ಹಣ್ಣು ಕೀಳುವಾಗ ಇಲಾಖೆಗೆ ಮಾಹಿತಿ ನೀಡಿ, ಪವರ್ ಕಟ್ ಮಾಡಿಸಿಯೇ ಮುಂದುವರಿಯಿರಿ.
ಅಕ್ರಮ ಬೇಲಿ ನಿಷೇಧ: ಜಮೀನುಗಳ ತಂತಿ ಬೇಲಿಗೆ ನೇರವಾಗಿ ಕರೆಂಟ್ ಹರಿಸುವುದು ಶಿಕ್ಷಾರ್ಹ ಅಪರಾಧ. ಬದಲಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅನುಮೋದಿತ ‘ಫೆನ್ಸ್ ಎನೆರ್ಜೈಸರ್’ ಬಳಸಿ.
ತುಂಡಾದ ತಂತಿಗಳು: ಎಲ್ಲಾದರೂ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರೆ ಅದರ ಹತ್ತಿರ ಹೋಗಬೇಡಿ. ಕನಿಷ್ಠ 10 ಮೀಟರ್ ದೂರವಿದ್ದು, ತಕ್ಷಣ ಇಲಾಖೆಗೆ ದೂರು ನೀಡಿ.
4. ಸಿಡಿಲು-ಮಿಂಚಿನ ಸಂದರ್ಭದಲ್ಲಿ ಏನು ಮಾಡಬೇಕು?
ಜೋರು ಮಳೆ ಮತ್ತು ಸಿಡಿಲು ಬರುವಾಗ ಎತ್ತರದ ಮರಗಳ ಕೆಳಗೆ ಆಶ್ರಯ ಪಡೆಯಬೇಡಿ (ಮರದಿಂದ 10 ಮೀಟರ್ ದೂರವಿರಿ).
ಕರೆಂಟ್ ಕಂಬ, ಧ್ವಜಸ್ತಂಭ ಹಾಗೂ ದೊಡ್ಡ ಆಂಟೆನಾಗಳಿಂದ ಕನಿಷ್ಠ 3 ಮೀಟರ್ ದೂರವಿರಿ.
ಬಯಲು ಪ್ರದೇಶದಲ್ಲಿದ್ದರೆ, ಕಾಲುಗಳನ್ನು ಜೋಡಿಸಿ, ತಲೆಯನ್ನು ಮೊಣಕಾಲ ಮಧ್ಯೆ ಬಗ್ಗಿಸಿ ಕುಳಿತುಕೊಳ್ಳಿ. ಪರಸ್ಪರ 3 ಮೀಟರ್ ಅಂತರ ಕಾಯ್ದುಕೊಳ್ಳಿ.
5. ಕೈಗಾರಿಕಾ ಗ್ರಾಹಕರಿಗೆ ವಿಶೇಷ ಮಾರ್ಗಸೂಚಿ
ಕಂಪನಿಗಳ ವಿದ್ಯುತ್ ಪ್ಯಾನೆಲ್ ಬೋರ್ಡ್ ಮುಂಭಾಗ ಮತ್ತು ಹಿಂಭಾಗ ಸೂಕ್ತ ಜಾಗವಿರಲಿ. ಅಲ್ಲಿ ಯಾವುದೇ ದಹನಕಾರಿ ವಸ್ತುಗಳನ್ನು ಇಡಬೇಡಿ.
ಪ್ಯಾನೆಲ್ ಬೋರ್ಡ್ಗಳು ಕನಿಷ್ಠ IP-44 ಗುಣಮಟ್ಟ ಹೊಂದಿರಬೇಕು ಮತ್ತು ನೆಲಕ್ಕೆ ಗಟ್ಟಿಯಾಗಿ ಫಿಕ್ಸ್ ಆಗಿರಬೇಕು. ಅದರ ಮುಂಭಾಗದಲ್ಲಿ ಕಡ್ಡಾಯವಾಗಿ ರಬ್ಬರ್ ಮ್ಯಾಟ್ ಇರಬೇಕು.
ರಿಪೇರಿ ಕೆಲಸ ಮಾಡುವಾಗ ‘ಕೆಲಸ ಪ್ರಗತಿಯಲ್ಲಿದೆ’ ಎಂಬ ನಾಮಫಲಕ ಹಾಕಿ, ಫ್ಯೂಸ್ ಕಿತ್ತು ಕೆಲಸ ಮಾಡಿ. ಲೈನ್ ಆಫ್ ಆಗಿದೆ ಎಂದು ಕನ್ಫರ್ಮ್ ಆಗುವವರೆಗೂ ಅದು ಲೈವ್ ಇದೆ ಎಂದೇ ಭಾವಿಸಿ ಜಾಗ್ರತೆ ವಹಿಸಿ.
ಕೆಲಸದ ವೇಳೆ ಗುಣಮಟ್ಟದ ರಬ್ಬರ್ ಗ್ಲೌಸ್, ಬೂಟು ಹಾಗೂ ಇನ್ಸುಲೇಟೆಡ್ ಪರಿಕರಗಳನ್ನು ಬಳಸಿ. ಅಪ್ಪಿತಪ್ಪಿಯೂ ಬರಿಗೈಯಿಂದ ವೈರ್ ಮುಟ್ಟಬೇಡಿ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡರೆ ನೀರನ್ನು ಬಳಸಬೇಡಿ, ಸೂಕ್ತ ಅಗ್ನಿಶಾಮಕ ಸಾಧನವನ್ನೇ ಬಳಸಿ.
6. ವಿದ್ಯುತ್ ಲೈನ್ ಸಿಬ್ಬಂದಿಗಾಗಿ 10 ಸುವರ್ಣ ಸೂತ್ರಗಳು
ವಿದ್ಯುತ್ ವಿತರಣಾ ಸಿಬ್ಬಂದಿ ಕೆಲಸದ ವೇಳೆ ಯಾವುದೇ ಅನಿರೀಕ್ಷಿತ ಅಪಾಯಗಳನ್ನು ಎದುರಿಸಲು ಸದಾ ಸನ್ನದ್ಧರಾಗಿರಬೇಕು.
ಪ್ರತಿ ಕೆಲಸಕ್ಕೂ ಮುನ್ನವೇ ಸೂಕ್ತ ಯೋಜನೆ ರೂಪಿಸಿ.
ಲೈನ್ನಲ್ಲಿ ಸಂಭವಿಸಬಹುದಾದ ಮುನ್ಸೂಚನೆಗಳನ್ನು ಅರಿತು ಮುಂಜಾಗ್ರತೆ ವಹಿಸಿ.
ಅಪಾಯಗಳನ್ನು ಮುಂಚಿತವಾಗಿ ಗುರುತಿಸಿ ಸೂಕ್ತ ಪರಿಕರ ಬಳಸಿ.
ಸುರಕ್ಷತಾ ನಿಯಮಗಳನ್ನು ಕೇವಲ ದಾಖಲೆಯಾಗಿ ನೋಡದೆ ಕಡ್ಡಾಯವಾಗಿ ಪಾಲಿಸಿ.
ಕೆಲಸ ಮಾಡುವ ಮುನ್ನ ಪವರ್ ಸಪ್ಲೈ ಸಂಪೂರ್ಣ ಡಿಸ್ಕನೆಕ್ಟ್ ಮಾಡಿ.
ಅಪಾಯದ ತೀವ್ರತೆ ತಗ್ಗಿಸುವ ಸುರಕ್ಷತಾ ಕ್ರಮಗಳನ್ನು ತಕ್ಷಣ ಕೈಗೊಳ್ಳಿ.
ವೈಯಕ್ತಿಕ ರಕ್ಷಣಾ ಸಾಧನಗಳನ್ನು (PPE Kit) ಕಡ್ಡಾಯವಾಗಿ ಧರಿಸಿ.
ಸಿಬ್ಬಂದಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿರಬೇಕು.
ಸುರಕ್ಷತೆಯು ಕೇವಲ ಒಬ್ಬರದಲ್ಲ, ಪ್ರತಿಯೊಬ್ಬರ ಜವಾಬ್ದಾರಿ ಎಂದು ಅರಿಯಿರಿ.
ಈ ಎಲ್ಲಾ ನಿಯಮಗಳನ್ನು ನಿಯತಕಾಲಿಕವಾಗಿ ಪರಿಶೀಲಿಸಿ, ಯಶಸ್ವಿಯಾಗಿ ಅನುಷ್ಠಾನಗೊಳಿಸಿ.








