ಶಿವಮೊಗ್ಗ: ಸಾಗರದ ಶ್ರೀ ಮಾರಿಕಾಂಬಾ ದೇವಿ ಜಾತ್ರೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು 2 ಕೋಟಿ ಸರ್ಕಾರದಿಂದ ಅನುದಾನ ಕೊಡಿಸುವುದಾಗಿ ಜಾತ್ರೆಗೆ ಮುನ್ನಾ ಘೋಷಣೆ ಮಾಡಿದ್ದರು. ಅದರಂತೆ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಅನುದಾನ ನೀಡಲು ಮನವಿ ಮಾಡಿದ್ದರು. ಶಾಸಕರ ಮನವಿಗೆ ತಕ್ಷಣವೇ ಸ್ಪಂದಿಸಿದ್ದಂತ ಅವರು, 2 ಕೋಟಿ ಅನುದಾನ ಮಂಜೂರಾತಿಗೆ ಟಿಪ್ಪಣಿ ಹೊರಡಿಸಿದ್ದರು. ಆ ಬಳಿಕ ಅದು ಮಂಜೂರಾಗಿಲ್ಲ. ಹಾಗೇ ಹೀಗೆ ಎನ್ನುವ ಆರೋಪಿಗಳನ್ನು ಬಿಜೆಪಿ ಮುಖಂಡರು ಮಾಡಿದ್ದರು. ಇದೀಗ ರಾಜ್ಯ ರಾಜಕೀಯದ ಹೈವೋಲ್ಟ್ ಪಟ್ಟದ ಕದನದ ನಡುವೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ನಿರಂತರ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಸಿಕ್ಕಿದೆ. ವಿರೋಧ ಪಕ್ಷಗಳ ತೀವ್ರ ಟೀಕೆ ಮತ್ತು ಆರೋಪಗಳ ನಡುವೆಯೂ ಹಠ ಬಿಡದ ಶಾಸಕರು, ರಾಜ್ಯ ಸರ್ಕಾರದಿಂದ ₹2 ಕೋಟಿ ವಿಶೇಷ ಅನುದಾನವನ್ನು ಮಂಜೂರು ಮಾಡಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್ಎಫ್ಸಿ ವಿಶೇಷ ಅನುದಾನದಡಿ ಹಣ ಮಂಜೂರು
ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಈ ಅನುದಾನವನ್ನು ಕೋರಲಾಗಿತ್ತು. ಪ್ರಸ್ತುತ ರಾಜ್ಯ ಸರ್ಕಾರವು ಎಸ್ಎಫ್ಸಿ (SFC) ವಿಶೇಷ ಅನುದಾನದಡಿ ₹2 ಕೋಟಿ ಹಣವನ್ನು ಮಂಜೂರು ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಇದರಿಂದಾಗಿ ಜಾತ್ರಾ ನಗರಿ ಸಾಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡಿದ್ದಂತ ಹಣವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದಂತೆ ಆಗಿದೆ.
“ವಿರೋಧ ಪಕ್ಷದವರು ಏನೇ ಆರೋಪ ಮಾಡಿದರೂ, ಸಾಗರದ ಜನತೆಗೆ ಮತ್ತು ದೇವಿಗೆ ಕೊಟ್ಟ ಮಾತನ್ನು ನಾನು ಉಳಿಸಿಕೊಂಡಿದ್ದೇನೆ. ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಬೆನ್ನುಬಿದ್ದು ಈ ಅನುದಾನ ತಂದಿದ್ದೇನೆ.” — ಗೋಪಾಲಕೃಷ್ಣ ಬೇಳೂರು, ಶಾಸಕರು, ಸಾಗರ
ರಾಜಕೀಯ ಬದಲಾವಣೆಯ ಹೊಸ್ತಿಲಲ್ಲಿ ಸಿಕ್ಕ ಅನುಮೋದನೆ
ಸಿದ್ಧರಾಮಯ್ಯನವರ ಸರ್ಕಾರ ಕೊನೆಗೊಂಡು, ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಅಧಿಕಾರದತ್ತ ಹೆಜ್ಜೆ ಇಡುತ್ತಿರುವ ಮಹತ್ವದ ರಾಜಕೀಯ ವಿದ್ಯಮಾನಗಳ ಸಮಯದಲ್ಲೇ ಈ ₹2 ಕೋಟಿ ಅನುದಾನದ ಬಿಡುಗಡೆ ಆದೇಶ ಹೊರಬಿದ್ದಿರುವುದು ತೀವ್ರ ಕುತೂಹಲ ಮೂಡಿಸಿದೆ. ಸರ್ಕಾರದ ಈ ನಿರ್ಧಾರದಿಂದ ಸಾಗರ ಕ್ಷೇತ್ರದ ಕಾಂಗ್ರೆಸ್ ವಲಯದಲ್ಲಿ ಹೊಸ ಉತ್ಸಾಹ ಕಂಡುಬಂದಿದೆ.
ವಿಪಕ್ಷಗಳ ಆರೋಪಕ್ಕೆ ಬ್ರೇಕ್
ಕಳೆದ ಕೆಲವು ದಿನಗಳಿಂದ ಮಾರಿಕಾಂಬಾ ಜಾತ್ರೆಯ ಅನುದಾನದ ವಿಚಾರವಾಗಿ ಸ್ಥಳೀಯ ಬಿಜೆಪಿ ನಾಯಕರು ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದರು. “ಸರ್ಕಾರ ಕೇವಲ ಘೋಷಣೆ ಮಾಡಿದೆ ವಿನಃ ನಯಾಪೈಸೆ ಬಿಡುಗಡೆ ಮಾಡಿಲ್ಲ” ಎಂದು ಬಿಜೆಪಿಗರು ಆರೋಪಿಸುತ್ತಿದ್ದರು. ಆದರೆ, ಈಗ ನೇರವಾಗಿ ₹2 ಕೋಟಿ ಹಣ ರಿಲೀಸ್ ಆಗಿ ಆದೇಶ ಪತ್ರ ಕೈಸೇರಿರುವುದರಿಂದ, ಶಾಸಕ ಬೇಳೂರು ಅವರು ವಿರೋಧ ಪಕ್ಷದವರ ಆರೋಪಗಳಿಗೆ ಸಖತ್ ತಿರುಗೇಟು ನೀಡಿದಂತಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..









